ಬಡ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಆರಂಭಿಸಲಾಗಿರುವ ಪಿಎಂ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಯ ಹಣ ನಿಮಗೆ ಬರುತ್ತಿಲ್ವಾ? ಹಾಗಿದ್ದರೆ ಕೂಡಲೇ ಹೀಗೆ ಮಾಡಿ... 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಭಾರತ ಸರ್ಕಾರವು ಪ್ರಾರಂಭಿಸಿದ ಯೋಜನೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ 6 ಸಾವಿರ ರೂಪಾಯಿಗಳ ಸಹಾಯವನ್ನು ಒದಗಿಸುವುದು ಇದರ ಉದ್ದೇಶ. ಈ ಯೋಜನೆಯಡಿಯಲ್ಲಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಎಲ್ಲ ರೈತರ ಖಾತೆಗಳಿಗೆ 2 ಸಾವಿರ ರೂಪಾಯಿ ಅರ್ಥಾತ್​ ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಇಲ್ಲಿಯವರೆಗೆ ಸುಮಾರು 10 ಕೋಟಿ ರೈತರು ಈ ಯೋಜನೆಯ ಲಾಭ ಪಡೆದಿದ್ದಾರೆ. ಕಳೆದ ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿದ 19ನೇ ಕಂತಿನಲ್ಲಿ ಅಂದಾಜು 22 ಸಾವಿರ ಕೋಟಿ ರೂ.ಗಳನ್ನು ನೇರವಾಗಿ ಮಧ್ಯವರ್ತಿಗಳಿಲ್ಲದೆ ದೇಶಾದ್ಯಂತ ರೈತರನ್ನು ತಲುಪಿದೆ. ಈ ಯೋಜನೆಯ ಫಲವನ್ನು ನೀವೂ ಪಡೆಯಬೇಕು ಎಂದರೆ ಕೂಡಲೇ ಹೀಗೆ ಮಾಡಬೇಕಿದೆ.

ಯೋಜನೆಯ 20ನೇ ಕಂತನ್ನು ಇದೇ 19 ಅಥವಾ 20ರಂದು ಪ್ರಧಾನಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಈ ಕಂತನ್ನು ನೀವು ಪಡೆಯಬೇಕಾದರೆ ಕೆಲವೊಂದು ನಿಯಮ ಪಾಲನೆ ಮಾಡಬೇಕಿದೆ. ಕಂತು ಪಾವತಿ ನಿಮ್ಮ ಖಾತೆಗೆ ಬರುತ್ತಿಲ್ಲವಾದರೆ, ಖಾತೆಯಲ್ಲಿ ಸಮಸ್ಯೆ ಇದೆ ಎಂದರ್ಥ. ಇದಕ್ಕಾಗಿ ಕೂಡಲೇ ನೀವು ಹೀಗೆ ಮಾಡಬೇಕಿದೆ.

* ಇ-ಕೆವೈಸಿ ಪೂರ್ಣಗೊಳಿಸಿ: ಪಿಎಂ-ಕಿಸಾನ್ ಪ್ರಯೋಜನಗಳನ್ನು ಅಡೆತಡೆಗಳಿಲ್ಲದೆ ಪಡೆಯುವುದನ್ನು ಮುಂದುವರಿಸಲು ನಿಮ್ಮ ಇ-ಕೆವೈಸಿಯನ್ನು ಪೂರ್ಣಗೊಳಿಸಿ.

* ಆಧಾರ್ ಲಿಂಕ್ ಮಾಡುವಿಕೆ: ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಿ.

* ಬ್ಯಾಂಕ್ ವಿವರಗಳನ್ನು ಪರಿಶೀಲಿಸಿ: ಪಾವತಿ ವೈಫಲ್ಯಗಳನ್ನು ತಪ್ಪಿಸಲು ನಿಮ್ಮ ಬ್ಯಾಂಕ್ ವಿವರಗಳನ್ನು ಎರಡು ಬಾರಿ ಪರಿಶೀಲಿಸಿ.

* ಭೂ ಸಮಸ್ಯೆಗಳನ್ನು ಪರಿಹರಿಸಿ: ಯಾವುದೇ ಭೂ ದಾಖಲೆಗಳಲ್ಲಿ ವ್ಯತ್ಯಾಸವಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಿ.

* ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸಿ: ನಿಮ್ಮ ಫಲಾನುಭವಿ ಸ್ಥಿತಿಯನ್ನು ಟ್ರ್ಯಾಕ್ ಮಾಡಲು pmkisan.gov.in ಗೆ ಭೇಟಿ ನೀಡಿ.

* ಮೊಬೈಲ್ ಸಂಖ್ಯೆಯನ್ನು ನವೀಕರಿಸಿ: OTP ಗಳು ಮತ್ತು ಇದರ ಕುರಿತಾದ ಯಾವುದೇ ಮಾಹಿತಿ ಸ್ವೀಕರಿಸಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಪ್​ಡೇಟ್​ ಮಾಡಿ.

ಪಿಎಂ ಕಿಸಾನ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಹತೆಗಳು

-ಭಾರತೀಯ ಪ್ರಜೆಯಾಗಿರಬೇಕು.

-ನೀವು 2 ಹೆಕ್ಟೇರ್‌ವರೆಗೆ ಭೂಮಿ ಹೊಂದಿರುವ ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು.

-ನೀವು ಕೃಷಿಗೆ ಬಳಸಬಹುದಾದ ಭೂಮಿಯನ್ನು ಹೊಂದಿರಬೇಕು. ಈ ಯೋಜನೆಯ ಪ್ರಯೋಜನವು ಕೃಷಿಯೋಗ್ಯ ಭೂಮಿಯನ್ನು ಕೃಷಿಗಾಗಿ ಬಳಸುವ ರೈತ ಕುಟುಂಬಗಳಿಗೆ ಮಾತ್ರ ಲಭ್ಯವಿರುತ್ತದೆ. ಕೃಷಿ ಮಾಡಲು ಸಾಧ್ಯವಾಗದ -ಭೂಮಿಯನ್ನು ಹೊಂದಿರುವವರು ಅಥವಾ ಕೃಷಿಯೇತರ ಉದ್ದೇಶಗಳಿಗಾಗಿ ಭೂಮಿಯನ್ನು ಬಳಸುವವರು ಅರ್ಹರಲ್ಲ.

-ಕೃಷಿಯು ರೈತರ ಆದಾಯದ ಪ್ರಮುಖ ಭಾಗವಾಗಿರಬೇಕು. ಒಬ್ಬ ರೈತನ ಆದಾಯವು ಸರ್ಕಾರಿ ಉದ್ಯೋಗಗಳು, ವ್ಯವಹಾರ ಅಥವಾ ಕೃಷಿಯನ್ನು ಹೊರತುಪಡಿಸಿ ಯಾವುದೇ ಇತರ ಮೂಲಗಳಿಂದ ಬರುವ ಆದಾಯವನ್ನು ಒಳಗೊಂಡಿದ್ದರೆ, ಅವರು ಇದಕ್ಕೆ ಅರ್ಹರಲ್ಲ.

-ತಿಂಗಳಿಗೆ ₹10,000 ಅಥವಾ ಅದಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿರುವವರು ಸಹ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ.

-ಆದಾಯ ತೆರಿಗೆ ಪಾವತಿಸುವ ಯಾರಾದರೂ ಈ ಕಾರ್ಯಕ್ರಮಕ್ಕೆ ಅರ್ಹರಲ್ಲ.

ಒಂದು ವೇಳೆ ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ pmkisan-ict@govi.in ಈ ಇಮೇಲ್ ಐಡಿಯನ್ನು ಸಂಪರ್ಕಿಸಿ. -ಪಿಎಂ ಕಿಸಾನ್ ಯೋಜನೆ ಸಹಾಯವಾಣಿ ಸಂಖ್ಯೆ- 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092 ಅನ್ನು ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಬಹುದು.