Weird News: ಕಬಡ್ಡಿ ಆಟಗಾರರಿಗೆ ಟಾಯ್ಲೆಟ್ನಲ್ಲಿಟ್ಟಿದ್ದ ಊಟ ಬಡಿಸಿದ ಅಧಿಕಾರಿ
Bizarre Incident: ಉತ್ತರ ಪ್ರದೇಶದ ಸಹರನ್ಪುರ ಜಿಲ್ಲೆಯಲ್ಲಿ ಅಸಹ್ಯ ಘಟನೆಯೊಂದು ನಡೆದಿದ್ದು, ಕ್ರೀಡಾಕೂಟದಲ್ಲಿ ಭಾಗಿಯಾದ ಆಟಗಾರರಿಗೆ ಟಾಯ್ಲೆಟ್ನಲ್ಲಿ ಇಟ್ಟಿದ್ದ ಅಡುಗೆಯನ್ನು ಬಡಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ.
ಸಹರನ್ಪುರ್: ಉತ್ತರ ಪ್ರದೇಶದ ಸಹರನ್ಪುರ ಜಿಲ್ಲಾ ಕಬಡ್ಡಿ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಆಟಗಾರರಿಗೆ ಟಾಯ್ಲೆಟ್ನ ಫ್ಲೋರ್ ಮೇಲೆ ಇಟ್ಟಿದ್ದ ಊಟ ಬಡಿಸಿದ್ದಾರೆ. ಈ ಪ್ರಕರಣದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಂಬಂಧಪಟ್ಟ ಅಧಿಕಾರಿಯನ್ನು ವಜಾಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಸ್ಥಳೀಯ ಕ್ರೀಡಾ ಸಂಕೀರ್ಣದ ಟಾಯ್ಲೆಟ್ನಲ್ಲಿ ಊಟವನ್ನು ಇಡಲಾಗಿತ್ತು. ಅಲ್ಲಿಂದಲೇ ಅದನ್ನು ತಂದು ದಣಿದ ಆಟಗಾರರಿಗೆ ಬಡಿಸಲಾಗಿದೆ. ಇದನ್ನು ಕೇಳುವುದಕ್ಕೇ ಅಸಹ್ಯವಾಗುತ್ತಿದೆ, ಇನ್ನು ತಿಂದವರ ಪರಿಸ್ಥಿತಿ ಏನಾಗಿರಬಹುದು. ಸಹರನಪುರದ ಭೀಮರಾವ್ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸುಮಾರು 200 ಆಟಗಾರು 17 ವರ್ಷದ ಹುಡುಗಿಯರ ಕಬಡ್ಡಿ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಈ ವೇಳೆ ಈ ಘಟನೆ ನಡೆಯಲಾಗಿದೆ. ಟಾಯ್ಲೆಟ್ನೊಳಗೆ ದೊಡ್ಡ ಪಾತ್ರೆಯಲ್ಲಿ ಅನ್ನ ಇರುವುದು ವಿಡಿಯೋದಲ್ಲಿ ಕಾಣುತ್ತದೆ.
ಸಹರನ್ಪುರ ಜಿಲ್ಲಾ ಕ್ರೀಡಾಧಿಕಾರಿ ಅನಿಮೇಶ್ ಸಕ್ಸೇನಾರನ್ನು ವಜಾಗೊಳಿಸಿ ಜಿಲ್ಲಾ ನ್ಯಾಯಾಧೀಶರು ಆದೇಶಿಸಿದ್ದಾರೆ. ಕ್ರೀಡಾಕೂಟದಲ್ಲಿ ಆಟಗಾರರ ಊಟದ ವಿಚಾರದಲ್ಲಿ ತಪ್ಪು ನಡೆದಿರುವುದು ಪತ್ತೆಯಾಗಿದೆ, ಈ ಕಾರಣಕ್ಕಾಗಿ ಅವರನ್ನು ಅಮಾನತ್ತುಗೊಳಿಸಲಾಗಿದೆ ಎಂದು ನ್ಯಾಯಾಧೀಶ ಅಖಿಲೇಶ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: 16 ವರ್ಷದ ಬಾಲಕಿಯನ್ನು ಮದುವೆಯಾದ 52ರ ವರ: 3 ತಿಂಗಳಾದ್ಮೇಲೆ ಗೊತ್ತಾಯ್ತು ಆಕೆ ಅಪ್ರಾಪ್ತೆಯೆಂದು
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಕ್ರೀಡಾಧಿಕಾರಿ ಅನಿಮೇಶ್ ಸಕ್ಸೇನಾ ಕ್ರೀಡಾಂಗಣದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆ ಸ್ಮಿಮ್ಮಿಂಗ್ ಪೂಲ್ ಮುಂದಿರುವ ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ಅಡುಗೆಗೆ ಅವಕಾಶ ಮಾಡಲಾಗಿತ್ತು. ಮಳೆ ಸುರಿಯುತ್ತಿದ್ದ ಕಾರಣದಿಂದ ಮಾಡಿದ ಅಡುಗೆಯನ್ನು ಅಲ್ಲೇ ಇಡಲಾಗಿತ್ತು, ಎಂದು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: 4 ಬಾರಿ ಹಾವು ಕಚ್ಚಿದ್ರೂ "ಐಯಾಮ್ ಸ್ಟೆಡಿ" ಎಂದು ಗಟ್ಟಿ ನಿಂತ ವ್ಯಕ್ತಿ; ಕುಡುಕರ ಶಕ್ತಿ ಅಂದ್ರೆ ಏನಂದುಕೊಂಡ್ರಿ!
ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಆಟಗಾರ್ತಿಯೊಬ್ಬರ ಪ್ರಕಾರ "ಅನ್ನ, ಅಡುಗೆಗಳನ್ನು ಟಾಯ್ಲೆಟ್ನ ಫ್ಲೋರ್ ಮೇಲೆ ಇಡಲಾಗಿತ್ತು. ಅಡುಗೆ ಮಾಡಿದ ಸ್ಥಳದಿಂದ ದೊಡ್ಡ ಪಾತ್ರೆಯಲ್ಲಿ ತುಂಬಿಕೊಂಡು ಟಾಯ್ಲೆಟ್ ಫ್ಲೋರ್ ಮೇಲೆ ಇಡುತ್ತಿದ್ದರು. ಪೇಪರ್ ಮೇಲೆ ಪೂರಿಗಳನ್ನು ಹಾಗೆಯೇ ನೆಲದ ಮೇಲೆ ಇಡಲಾಗಿತ್ತು. ಅದಾದ ನಂತರ ಆಟಗಾರರಿಗೆ ಊಟ ಬಡಿಸಲಾಗಿದೆ."
ಮಂಗಳವಾರ ಬೆಳಗ್ಗೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಘಟನೆ ಮತ್ತೆ ಚರ್ಚೆಗೆ ಬಂದಿದೆ. ಗಂಡಸರ ಶೌಚಾಲಯದಲ್ಲಿ ಆಹಾರವನ್ನು ಇಟ್ಟಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಕಾಂಗ್ರೆಸ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಯೋಗಿ ಆದಿತ್ಯನಾಥ್ ಸರ್ಕಾರವನ್ನು ಖಂಡಿಸಿದ್ದಾರೆ. ಸುಳ್ಳು ಜಾಹೀರಾತು ನೀಡಲು ಹಣ ಖರ್ಚು ಮಾಡುವ ಸರ್ಕಾರಕ್ಕೆ ಕಬಡ್ಡಿ ಆಟಗಾರರಿಗೆ ಸರಿಯಾದ ಊಟದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ತೆಲಂಗಾಣ ರಾಷ್ಟ್ರ ಸಮಿತಿ ಕೂಡ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅಸಹ್ಯಕರ ಘಟನೆ ಎಂದು ಬಣ್ಣಿಸಿದೆ. ಹಲವು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ನಾಯಕರು ಈ ಘಟನೆಯನ್ನು ಖಂಡಿಸಿದ್ದಾರೆ.