ತುರ್ತು ಸೇವೆ ನಡುವೆ ಆ್ಯಂಬುಲೆನ್ಸ್ ಪೆಟ್ರೋಲ್ ಖಾಲಿ, ನಡು ರಸ್ತೆಯಲ್ಲಿ ರೋಗಿ ಸಾವು!
ಕೊರೋನಾ ಬಳಿಕ ಭಾರತದ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಿದೆ. ಮೂಲಭೂತ ಸೌಕರ್ಯಗಳನ್ನು ಹಿಚ್ಚಿಸಲಾಗಿದೆ. ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ ಹಲವು ಭಾಗಗಳಲ್ಲಿ ಸಿಬ್ಬಂದಿಗಳು, ಆಡಳಿ ಮಂಡಳಿಗಳಲ್ಲಿ ಬದಲಾವಣೆಯಾಗಿಲ್ಲ. ಇದರ ಪರಿಣಾಮ ಇದೀಗ ದಾರಿ ನಡುವೆ ಆ್ಯಂಬುಲೆನ್ಸ್ನಲ್ಲೇ ಸಾವು ಕಂಡ ಘಟನೆ ನಡೆದಿದೆ.
ಜೈಪುರ(ನ.26): ಭಾರತದಲ್ಲಿ ಈಗಲೂ ಸೂಕ್ತ ಚಿಕಿತ್ಸೆ ಸಿಗದೆ, ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್, ತುರ್ತು ಸೇವೆಗಳು ಸಿಗದೆ ನಿಧನರಾಗುತ್ತಿರುವ ಸಂಖ್ಯೆ ಹೆಚ್ಚೇ ಇದೆ. ಕೊರೋನಾ ಬಳಿಕ ಭಾರತದಲ್ಲಿ ಆಸ್ಪತ್ರೆ ಮೂಲಭೂತ ಸೌಕರ್ಯ, ಅತ್ಯಾಧುನಿಕ ಸಲಕರಣೆ, ಆಕ್ಸಿಜನ್ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಬದಲಿಸಲಾಗಿದೆ. ಆದರೂ ಸಮಸ್ಯೆ ಅಂತ್ಯಗೊಂಡಿಲ್ಲ. ಇದೀಗ ರಾಜಸ್ಥಾನದ ಬನ್ಸವಾರದ ವ್ಯಕ್ತಿ ದಾರಿ ಮಧ್ಯದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಇದಕ್ಕೆ ಕಾರಣ ರೋಗಿಯನ್ನು ಆಸ್ಪತ್ರೆ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಪೆಟ್ರೋಲ್ ಖಾಲಿಯಾಗಿತ್ತು. ಹೀಗಾಗಿ ರೋಗಿಯನ್ನು ತಕ್ಕ ಸಮಯದಲ್ಲಿ ಆಸ್ಪತ್ರೆ ದಾಖಲಿಸಲು ಸಾಧ್ಯವಾಗಿಲ್ಲ. ಪರಿಣಾಣ ರೋಗಿ ಮೃತಪಟ್ಟ ಘಟನೆ ನಡೆದಿದೆ.
ಪೆಟ್ರೋಲ್ ಖಾಲಿಯಾಗಿ ಮಾರ್ಗ ಮಧ್ಯೆದಲ್ಲಿ ಆ್ಯಂಬುಲೆನ್ಸ್ ನಿಂತಿದೆ. ಈ ವೇಳೆ ಚಾಲಕ, ಆ್ಯಂಬುಲೆನ್ಸ್ ಪೆಟ್ರೋಲ್ ಖಾಲಿಯಾಗಿದೆ ಎಂದು ಆ್ಯಂಬುಲೆನ್ಸ್ನಲ್ಲಿದ್ದ ರೋಗಿಯ ಸಂಬಂಧಿಕರಿಗೆ ಹೇಳಿದ್ದಾನೆ. ದಿಕ್ಕೆ ತೋಚದ ಸಂಬಂಧಿಕರು ಆ್ಯುಂಬುಲೆನ್ಸ್ ತಳ್ಳಿ ಆಸ್ಪತ್ರೆ ಸಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಸ್ಪತ್ರೆ ದಾರಿ ದೂರವಿದ್ದ ಕಾರಣ ಸಂಬಂಧಿಕರ ಹೋರಾಟಕ್ಕೆ ಯಶಸ್ಸು ಸಿಗಲಿಲ್ಲ. ತಳ್ಳುತ್ತಾ ಕೆಲ ದೂರ ಸಾಗಿದಾಗಲೇ ರೋಗಿ ಮೃತಪಟ್ಟಿದ್ದಾರೆ.
Ambulance ಸಿಗದೆ ಬೈಕ್ನಲ್ಲಿ ಮಗಳ ಮೃತದೇಹವನ್ನು 65 ಕಿ.ಮೀ. ಹೊತ್ತೊಯ್ದ ಪೋಷಕರು
ರಾಜಸ್ಥಾನದಲ್ಲಿ ಈ ಘಟನೆ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಸಚಿವ ಪ್ರತಾಪ್ ಸಿಂಗ್ ಕಚಾರಿಯಾವಾಸ್ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ತುರ್ತು ಸೇವೆ ನಡುವೆ ಪೆಟ್ರೋಲ್ ಖಾಲಿಯಾಗಿದೆ ಅನ್ನೋದು ಆಡಳಿತ ಮಂಡಳಿಯ ನಿರ್ಲಕ್ಷ್ಯವಾಗಿದೆ. 108 ಆ್ಯಂಬುಲೆನ್ಸ್ ಸೇವೆಯ ನಿರ್ವಹಣೆಯನ್ನು ಖಾಸಗಿ ಕಂಪನಿ ಮಾಡುತ್ತಿದೆ. ಈ ರೋಗಿಯ ಸಾವಿಗೆ ಖಾಸಗಿ ಕಂಪನಿ ಹಾಗೂ ಆಡಳಿತ ಮಂಡಳಿ ಕಾರಣ ಎಂದು ಪ್ರತಾಪ್ ಸಿಂಗ್ ಹೇಳಿದ್ದಾರೆ.
ಸರ್ಕಾರ ಅಪಘಾತ ಸೇರಿದಂತೆ ತುರ್ತು ಸೇವೆಗಳನ್ನು ಉಚಿತವಾಗಿಸಿದೆ. ಇದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ಸರ್ಕಾರವೇ ಭರಿಸಲಿದೆ. ಆದರೆ ಇಲ್ಲಿ ಪೆಟ್ರೋಲ್ ಖಾಲಿಯಾಗಿರುವ ಕಾರಣ ರೋಗಿಯನ್ನು ತಕ್ಕ ಸಮಯದಲ್ಲಿ ಆಸ್ಪತ್ರೆ ದಾಖಲಿಸಲು ಸಾಧ್ಯವಾಗಿಲ್ಲ ಎಂದು ಸಚಿವರು ಹೇಳಿದ್ದಾರೆ. ನಿರ್ಲಕ್ಷ್ಯ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಾಪ್ ಸಿಂಗ್ ಹೇಳಿದ್ದಾರೆ.
ಮದುವೆ ಹಿನ್ನೆಲೆ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್; ಟ್ರಾಫಿಕ್ನಲ್ಲಿ ಸಿಲುಕಿ ಪರದಾಡಿದ ಅಂಬುಲೆನ್ಸ್
ಘಟನೆಯ ವರದಿ ಕೇಳಿದ್ದೇವೆ. 108 ಆ್ಯಂಬುಲೆನ್ಸ್ ನಿರ್ವಹಣೆಯನ್ನು ಖಾಸಗಿ ಕಂಪನಿ ಮಾಡುತ್ತಿದೆ. ಇದು ಕಂಪನಿಯ ನಿರ್ಲಕ್ಷ್ಯ ಹಾಗೂ ಬೇಜಾಬ್ದಾರಿತನವಾಗಿದೆ. ಕಂಪನಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಬನ್ಸವಾರ ಆರೋಗ್ಯ ಅಧಿಕಾರಿ ಹೇಳಿದ್ದಾರೆ. ಇತ್ತ ಮೃತಪಟ್ಟ ರೋಗಿ ಸಂಬಂಧಿಕರನ್ನು ಭೇಟಿಯಾಗುವುದಾಗಿ ಸಚಿವ ಪ್ರತಾಪ್ ಸಿಂಗ್ ಹೇಳಿದ್ದಾರೆ. ರೋಗಿ ಕುಟುಂಬಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇತ್ತ ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಆರೋಗ್ಯ ಸೇವೆಯನ್ನು ನಿರ್ಲಕ್ಷ್ಯಿಸಿದೆ. ಆ್ಯಂಬುಲೆನ್ಸ್ ನಿರ್ವಹಣೆಯನ್ನು ಖಾಸಗಿ ಕಂಪನಿ ನೀಡಿ, ಮೇಲ್ವಿಚಾರಣೆ ಮಾಡಿಲ್ಲ. ಇದೀಗ ಎಲ್ಲಾ ಹೊಣೆಯನ್ನು ಖಾಸಗಿ ಕಂಪನಿಗೆ ಹೊರಿಸಿ ನಾಟಕವಾಡುತ್ತಿದೆ ಅನ್ನೋ ಆಕ್ರೋಶ ವ್ಯಕ್ತವಾಗುತ್ತಿದೆ.