ಇದ್ದಕ್ಕಿದ್ದಂತೆ ಓರ್ವ ವ್ಯಕ್ತಿ ಸಂದರ್ಶಕರ ಗ್ಯಾಲರಿಯಿಂದ ಜಿಗಿದ. ಮೊದಲು ಈತ ಅಲ್ಲಿಂದ ಜಾರಿ ಬಿದ್ದನೇನೋ ಎಂದು ಭಾವಿಸಿದೆ. ಕೂಡಲೇ ಇನ್ನೊಬ್ಬ ವ್ಯಕ್ತಿಯೂ ಜಿಗಿದ. ಆಗ ಇದು ಉದ್ದೇಶಪೂರ್ವಕ ಕೃತ್ಯ ಎಂದು ನನಗೆ ಅರ್ಥವಾಯಿತು ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ. 

ನವದೆಹಲಿ (ಡಿಸೆಂಬರ್ 14, 2023): ‘ಮೊದಲು ಯಾರೋ ಸಂದರ್ಶಕರ ಗ್ಯಾಲರಿಯಿಂದ ಬಿದ್ದುಬಿಟ್ಟರೇನೋ ಎಂದು ನಾನು ಭಾವಿಸಿದ್ದೆ. ಆಮೇಲೆ ಇದು ಉದ್ದೇಶಪೂರ್ವಕ ಕುಕೃತ್ಯ ಎಂದು ಗೊತ್ತಾಯಿತು’ ಎಂದು ಲೋಕಸಭೆಯಲ್ಲಿ ಭದ್ರತಾ ಲೋಪ ಸಂಭವಿಸಿದ ವೇಳೆ ಹಾಜರಿದ್ದ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಹೇಳಿದ್ದಾರೆ.

ಸಂಸತ್ತಿನ ಮೇಲೆ ನಡೆದ ಏಕಾಏಕಿ ದಾಳಿ ಮತ್ತು ಅಪರಿಚಿತರು ಒಳನುಗ್ಗಿದ ವೇಳೆ ತಮಗಾದ ಆತಂಕದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಚಿದಂಬರಂ ‘ಶೂನ್ಯ ವೇಳೆ ಪ್ರಾರಂಭವಾಗಿತ್ತು. ನಾನು ಮಾತನಾಡಲು ಸಂಸತ್ತಿನಲ್ಲಿ ನನ್ನ ಸರದಿಗಾಗಿ ಕಾಯುತ್ತಿದ್ದೆ. ಆಗ ಇದ್ದಕ್ಕಿದ್ದಂತೆ ಓರ್ವ ವ್ಯಕ್ತಿ ಸಂದರ್ಶಕರ ಗ್ಯಾಲರಿಯಿಂದ ಜಿಗಿದ. ಮೊದಲು ಈತ ಅಲ್ಲಿಂದ ಜಾರಿ ಬಿದ್ದನೇನೋ ಎಂದು ಭಾವಿಸಿದೆ. ಕೂಡಲೇ ಇನ್ನೊಬ್ಬ ವ್ಯಕ್ತಿಯೂ ಜಿಗಿದ. ಆಗ ಇದು ಉದ್ದೇಶಪೂರ್ವಕ ಕೃತ್ಯ ಎಂದು ನನಗೆ ಅರ್ಥವಾಯಿತು'.

ಇದನ್ನು ಓದಿ: ಮಹುವಾ ರೀತಿ ಪ್ರತಾಪ್‌ ಸಿಂಹ ವಜಾಕ್ಕೆ ಆಗ್ರಹ: ಇಂದು ವಿಪಕ್ಷಗಳ ತುರ್ತು ಸಭೆ; ರಾಷ್ಟ್ರಪತಿ ಮುರ್ಮು ಭೇಟಿ

ಆಗ ಇಬ್ಬರಲ್ಲಿ ಒಬ್ಬ ಸ್ಪೀಕರ್‌ ಕುರ್ಚಿಯೆಡೆಗೆ ಓಡಲು ಪ್ರಾರಂಭಿಸಿದನು. ಅವನು ತನ್ನ ಶೂ ತೆಗೆದು ಅಲ್ಲಿಂದ ಒಂದು ಡಬ್ಬಿ ತೆಗೆದು ಗಾಳಿಯಲ್ಲಿ ಏನೋ ಹಾರಿಸಿದ. ಮತ್ತೊಬ್ಬ ವ್ಯಕ್ತಿ ಕೂಡಾ ಅದೇ ರೀತಿ ಮಾಡತೊಡಗಿದ. ಆಗ ಎರಡೂ ಡಬ್ಬಿಗಳಿಂದ ಹಳದಿ ಬಣ್ಣದ ಹೊಗೆ ಹೊರಸೂಸುತ್ತಿತ್ತು. ಆ ಹೊಗೆ ಏನು ಎಂದು ನಮಗೆ ತಿಳಿಯಲಿಲ್ಲ. ಆದರೆ ಅದು ವಿಷಕಾರಿ ಹೊಗೆ ಆಗಿರಬಹುದು, ಸ್ಮೋಕ್‌ ಬಾಂಬ್ ಆಗಿರಬಹುದು ಅಥವಾ ಆಶ್ರವಾಯು ಆಗಿರಬಹುದು ಅಥವಾ ಇನ್ನೇನೋ ಆಗಿರುವ ಸಾಧ್ಯತೆ ಇತ್ತು ಎಂದು ಕಾರ್ತಿ ಹೇಳಿದ್ದಾರೆ.

ಸಂಸತ್ತಿನ ಮೇಲೆ ದಾಳಿ ನಡೆದ ದಿನದಂದೇ ಈ ಘಟನೆ ನಡೆದಿದೆ. ಇದು ಗಂಭೀರವಾದ ಭದ್ರತಾ ಉಲ್ಲಂಘನೆಯಾಗಿದೆ. ಇಬ್ಬರು ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯೊಳಗೆ ಡಬ್ಬಿಗಳನ್ನು ತರಲು ಸಮರ್ಥರಾಗಿದ್ದಾರೆ ಎಂಬುದು ಆಶ್ಚರ್ಯಕರ. ಸಂಸತ್ತಿನ ಗ್ಯಾಲರಿಗೆ ಬರಲು ಸಂಸದರ ಸಹಿ ಬೇಕು, ಐಡಿ ಕಾರ್ಡ್ ಬೇಕು. ಹೀಗಾಗಿ ಅಪರಿಚತರು ಅಲ್ಲಿಗೆ ಬರಬಹುದು ಎಂದು ಅನಿಸುವುದಿಲ್ಲ’ ಎಂದಿದ್ದಾರೆ.

ಸಂಸತ್‌ ಭದ್ರತಾ ಲೋಪ: ಸ್ಮೋಕ್‌ ಕ್ಯಾನ್‌ ಎಂದರೇನು? ಸಂಸತ್ತಿನ ವೀಕ್ಷಕರ ಪಾಸ್‌ ಪಡೆವ ಪ್ರಕ್ರಿಯೆ ಹೇಗಿದೆ ನೋಡಿ..

ವಿಷಾನಿಲ, ವಿಷಾನಿಲ ಎಂದು ಕೂಗಿದ ಸಂಸದೆ 
ಸಂದರ್ಶಕರ ಸೋಗಿನಲ್ಲಿ ಬಂದ ದಾಳಿಕೋರರು ಸಂಸತ್ತಿನಲ್ಲಿ ಹೊಗೆ ಬಾಂಬ್‌ ಸಿಡಿಸುತ್ತಿದ್ದಂತೆಯೇ ಗಾಬರಿಗೊಂಡ ಸಂಸದೆಯೊಬ್ಬರು ‘ವಿಷಕಾರಿ ಅನಿಲ ದಾಳಿ.. ವಿಷಾನಿಲ’ ಎಂದು ಕೂಗಿಕೊಂಡ ಘಟನೆ ನಡೆದಿದೆ. ದಾಳಿಕೋರರು ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಹಳದಿ ಬನ್ಣದ ಹೊಗೆ ಸೂಸುವ ಸ್ಮೋಕ್‌ ಬಾಂಬ್‌ ಸಿಡಿಸುತ್ತಿದ್ದಂತೆ ಎಲ್ಲ ಸಂಸದರು ಗಾಬರಿಗೊಂಡಿದ್ದರು. ಆಗಲೇ ಸಂಸದೆಯೊಬ್ಬರು ತೀರಾ ಭಯದಿಂದ ಕೂಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 
NEWS HOUR: ಸಂಸದೀಯ ಇತಿಹಾಸದಲ್ಲೇ ಅತಿದೊಡ್ಡ ಭದ್ರತಾ ಲೋಪ, ದಾಳಿಕೋರರಿಗೆ ಮೈಸೂರು ಲಿಂಕ್‌!