ಮಹುವಾ ರೀತಿ ಪ್ರತಾಪ್ ಸಿಂಹ ವಜಾಕ್ಕೆ ಆಗ್ರಹ: ಇಂದು ವಿಪಕ್ಷಗಳ ತುರ್ತು ಸಭೆ; ರಾಷ್ಟ್ರಪತಿ ಮುರ್ಮು ಭೇಟಿ
ಸಂಸತ್ತಿನ ಲೋಕಸಭೆ ಪ್ರಾಂಗಣದಲ್ಲಿ ವೀಕ್ಷಕರ ಗ್ಯಾಲರಿಯಿಂದ ಜಿಗಿದು ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ ಬೆನ್ನಲ್ಲೇ ಇಂಡಿಯಾ ಕೂಟದ ನಾಯಕರು ಗುರುವಾರ ತುರ್ತು ಸಭೆ ನಡಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ.
![parliament security breach tmc demands to expel bjp mp pratap simha ash parliament security breach tmc demands to expel bjp mp pratap simha ash](https://static-ai.asianetnews.com/images/01hhh7p1bjt4a96bg93gqv88pm/whatsapp-image-2023-12-13-at-14-48-57_363x203xt.jpg)
ನವದೆಹಲಿ (ಡಿಸೆಂಬರ್ 14, 2023): ಬುಧವಾರ ನಡೆದಿದ್ದ ಸರ್ವಪಕ್ಷ ಸಭೆ ವೇಳೆ ದಾಳಿಕೋರರಿಗೆ ಪಾಸ್ ನೀಡಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ವಜಾ ಮಾಡಬೇಕೆಂದು ಟಿಎಂಸಿ ಆಗ್ರಹ ಮಾಡಿದೆ. ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ನಮ್ಮ ಪಕ್ಷದ ಸಂಸದೆ ಮಹುವಾ ಮೊಯಿತ್ರಾರನ್ನು ವಜಾ ಮಾಡಿದ ರೀತಿಯಲ್ಲೇ, ದಾಳಿಕೋರರಿಗೆ ಪಾಸ್ ನೀಡಿದ್ದಕ್ಕಾಗಿ ಪ್ರತಾಪ್ ಸಿಂಹ ವಜಾ ಮಾಡುವಂತೆ ಸಂಸದರು ಆಗ್ರಹಿಸಿದರು.
ವಿಪಕ್ಷಗಳ ತುರ್ತು ಸಭೆ: ರಾಷ್ಟ್ರಪತಿ ಮುರ್ಮು ಭೇಟಿ
ಸಂಸತ್ತಿನ ಲೋಕಸಭೆ ಪ್ರಾಂಗಣದಲ್ಲಿ ವೀಕ್ಷಕರ ಗ್ಯಾಲರಿಯಿಂದ ಜಿಗಿದು ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ ಬೆನ್ನಲ್ಲೇ ಇಂಡಿಯಾ ಕೂಟದ ನಾಯಕರು ಗುರುವಾರ ತುರ್ತು ಸಭೆ ನಡಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ಈ ಕುರಿತು ಮಾತನಾಡಿದ ಟಿಎಂಸಿ ಸಂಸದ ಸುದೀಪ್ ಬಂಡೋಪಾದ್ಯಾಯ, ‘ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.
ಇದನ್ನು ಓದಿ: ಸಂಸತ್ ಭದ್ರತಾ ಲೋಪ: ಸ್ಮೋಕ್ ಕ್ಯಾನ್ ಎಂದರೇನು? ಸಂಸತ್ತಿನ ವೀಕ್ಷಕರ ಪಾಸ್ ಪಡೆವ ಪ್ರಕ್ರಿಯೆ ಹೇಗಿದೆ ನೋಡಿ..
ಸಿಆರ್ಪಿಎಫ್ ಡಿಜಿ ನೇತೃತ್ವದಲ್ಲಿ ತನಿಖೆ ಆದೇಶ
ಸಂಸತ್ತಿನ ಭದ್ರತಾ ಲೋಪದ ಕುರಿತು ಸಿಆರ್ಪಿಎಫ್ ಡಿಜಿ ನೇತೃತ್ವದಲ್ಲಿ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. ಭದ್ರತೆ ಪರಿಶೀಲಿಸುವಂತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಗೃಹ ಸಚಿವಾಲಯಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಶೂನಲ್ಲಿ ಬಚ್ಚಿಟ್ಟಿದ್ದ ಹೊಗೆಡಬ್ಬಿ ಗುರುತಿಸದ ಸ್ಕ್ಯಾನರ್
‘ಹೊಗೆಬಾಂಬ್’ ಸಿಡಿಸಿದ ದಾಳಿಕೋರರು ಹೇಗೆ ಅತಿ ಭದ್ರತೆಯ ಸಂಸತ್ ಭವನದೊಳಗೆ ಪ್ರವೇಶಿಸಿದರು ಎಂಬುದೇ ಪ್ರಶ್ನೆಯಾಗಿದೆ. ಇಬ್ಬರು ವ್ಯಕ್ತಿಗಳು ತಮ್ಮ ಬೂಟುಗಳೊಳಗೆ ಹಳದಿ ಹೊಗೆ ಡಬ್ಬಿ ಬಚ್ಚಿಟ್ಟಿದ್ದರು. ಸಂಸತ್ ಭವನದೊಳಗೆ ಯಾರೇ ಪ್ರವೇಶ ಮಾಡಲಿ ಅವರನ್ನು ಭದ್ರತಾ ಸಿಬ್ಬಂದಿ ದೈಹಿಕ ತಪಾಸಣೆ ಮಾಡುತ್ತಾರೆ ಹಾಗೂ ಸ್ಕ್ಯಾನರ್ನಲ್ಲಿ ಅವರ ಪೂರ್ಣ ದೇಹ ಸ್ಕ್ಯಾನ್ ಆಗುತ್ತದೆ. ಮೊದಲು ದೈಹಿಕ ಭದ್ರತಾ ಸಿಬ್ಬಂದಿ ಅವರ ಬೂಟನ್ನು ತಪಾಸಣೆ ಮಾಡಿಲ್ಲ. ನಂತರ ಸ್ಕ್ಯಾನರ್ ಕೂಡ ಅವರು ಶೂನಲ್ಲಿ ಹೊಗೆ ಡಬ್ಬಿ ಇರಿಸಿಕೊಂಡಿದ್ದನ್ನು ಗುರುತಿಸಲು ವಿಫಲವಾಗಿದೆ.
NEWS HOUR: ಸಂಸದೀಯ ಇತಿಹಾಸದಲ್ಲೇ ಅತಿದೊಡ್ಡ ಭದ್ರತಾ ಲೋಪ, ದಾಳಿಕೋರರಿಗೆ ಮೈಸೂರು ಲಿಂಕ್!