ಸಿಂಧೂ ನದಿ ನೀರಿನ ಕೊರತೆಯಿಂದ ಪಾಕಿಸ್ತಾನದಲ್ಲಿ ತೀವ್ರ ಬಿಕ್ಕಟ್ಟು. ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳೆಗಳು ಒಣಗುತ್ತಿದ್ದು, ಆಹಾರ ಬಿಕ್ಕಟ್ಟಿನ ಭೀತಿ ಎದುರಾಗಿದೆ.

ಪಾಕಿಸ್ತಾನವು ಪ್ರಸ್ತುತ ತನ್ನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದಕ್ಕೆ ದೊಡ್ಡ ಕಾರಣವೆಂದರೆ ಸಿಂಧೂ ಜಲ ಒಪ್ಪಂದದಡಿಯಲ್ಲಿ ಭಾರತವು ಒದಗಿಸುವ ನೀರಿನಲ್ಲಿ ಭಾರಿ ಕಡಿತಗೊಳಿಸಿರುವುದು ಎಂದು ನಂಬಲಾಗಿದೆ. ಸ್ಥಳೀಯ ಜಲ ತಜ್ಞರ ಪ್ರಕಾರ, ಭಾರತದಿಂದ ಹರಿಯುವ ಚೆನಾಬ್ ನದಿಯ ಹರಿವು 92% ರಷ್ಟು ಕಡಿಮೆಯಾಗಿದೆ, ಇದರಿಂದಾಗಿ ಪಂಜಾಬ್ ಮತ್ತು ಸಿಂಧ್‌ನಂತಹ ದೊಡ್ಡ ಕೃಷಿ ಪ್ರದೇಶಗಳ ಬೆಳೆಗಳು ವಿನಾಶದ ಅಂಚಿನಲ್ಲಿವೆ. ಮೇ 29ರಂದು 98,200 ಕ್ಯೂಸೆಕ್‌ನಿಂದ ಈಗ ಕೇವಲ 7,200 ಕ್ಯೂಸೆಕ್‌ಗೆ ಕುಸಿದಿದೆ, ಇದು 'ಡೆಡ್‌ ಲೆವೆಲ್'ಕ್ಕಿಂತಲೂ ಕೆಳಗಿಳಿದಿದೆ. ಇದರಿಂದ ಖಾರಿಫ್ ಬೆಳೆಗಳ 40% ಒಣಗಿದ್ದು, ಉಳಿದವು ಅಪಾಯದಲ್ಲಿವೆ.

Add Asianetnews Kannada as a Preferred SourcegooglePreferred

ಆರೂವರೆ ಕೋಟಿ ರೈತರಿಂದ ಇಸ್ಲಾಬಾದ್‌ಗೆ ಪಾದಾಯಾತ್ರೆ ಎಚ್ಚರಿಕೆ:

ಚೆನಾಬ್‌ಗೆ ಅವಲಂಬಿತವಾಗಿರುವ ಪಂಜಾಬ್ ಮತ್ತು ಸಿಂಧ್‌ನ 6.5 ಕೋಟಿ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ನೀರಿನ ಕೊರತೆ ಮತ್ತು ಬೆಳೆ ನಾಶದಿಂದ ಕಂಗಾಲಾದ ರೈತ ಸಂಘಟನೆಗಳು ಇಸ್ಲಾಮಾಬಾದ್‌ಗೆ ಪಾದಯಾತ್ರೆ ನಡೆಸುವ ಎಚ್ಚರಿಕೆ ನೀಡಿವೆ. ಸರ್ಕಾರದ ನಿಷ್ಕ್ರಿಯತೆ ಮತ್ತು ಭಾರತದ ವಿರುದ್ಧ ರಾಜತಾಂತ್ರಿಕ ಕ್ರಮಗಳ ಕೊರತೆಯನ್ನು ರೈತ ಮುಖಂಡರು ಖಂಡಿಸಿದ್ದಾರೆ.

4,500 ಬಿಲಿಯನ್ ರೂ. ನಷ್ಟ, ಆಹಾರ ಬಿಕ್ಕಟ್ಟು ಆತಂಕ:

ಕೃಷಿ ಸಂಸ್ಥೆ 'ಪಿಆರ್‌ಎ' ಮತ್ತು ನೀರಾವರಿ ಇಲಾಖೆಯ ವರದಿಗಳ ಪ್ರಕಾರ, ಮಳೆ ಕೊರತೆ ಮತ್ತು ಸಿಂಧ್ ನೀರು ಬಂದ್ ಆಗಿರುವುದರಿಂದ ಪಾಕಿಸ್ತಾನಕ್ಕೆ 4,500 ಬಿಲಿಯನ್ ರೂ. ನಷ್ಟವಾಗಿದೆ. ಅಂತರ್ಜಲ ಮಟ್ಟ ಕುಸಿದಿದ್ದು, ಸಾವಿರಾರು ಕೊಳವೆ ಬಾವಿಗಳು ಬತ್ತಿವೆ. ಮಂಗಳಾ ಅಣೆಕಟ್ಟಿನಂತಹ ಪ್ರಮುಖ ನೀರಿನ ಮೂಲಗಳು ಒಣಗಿದ್ದು, ತಜ್ಞರು ರಾಷ್ಟ್ರೀಯ ಆಹಾರ ಬಿಕ್ಕಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಭಾರತಕ್ಕೆ ಪಾಕಿಸ್ತಾನದ ಮನವಿ

ಸಿಂಧೂ ಜಲ ಒಪ್ಪಂದದ ಪುನಃಸ್ಥಾಪನೆಗೆ ಪಾಕಿಸ್ತಾನವು ಭಾರತಕ್ಕೆ ನಾಲ್ಕು ಔಪಚಾರಿಕ ಪತ್ರಗಳನ್ನು ಕಳುಹಿಸಿದೆ, ಇವುಗಳಲ್ಲಿ ಒಂದು 'ಆಪರೇಷನ್ ಸಿಂದೂರ್' ನಂತರದ್ದು. ಈ ಪತ್ರಗಳನ್ನು ಪಾಕ್ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಸೈಯದ್ ಅಲಿ ಮುರ್ತಾಜಾ ಭಾರತದ ಜಲಶಕ್ತಿ ಸಚಿವಾಲಯಕ್ಕೆ ಕಳುಹಿಸಿದ್ದಾರೆ.

'ಗ್ರೀನ್ ಪಾಕಿಸ್ತಾನ' ಯೋಜನೆಗೆ ರೈತರ ಕಿಡಿ

ರೈತರು 'ಗ್ರೀನ್ ಪಾಕಿಸ್ತಾನ'ನಂತಹ ಸರ್ಕಾರದ ಯೋಜನೆಗಳನ್ನು "ಕಾಗದದ ಮೇಲಿನ ನೆಪ" ಎಂದು ಟೀಕಿಸಿದ್ದಾರೆ. 'ನಮಗೆ ಕಾಗದದ ಹಸಿರು ಬೇಡ, ಹೊಲಗಳಲ್ಲಿ ನೀರು ಬೇಕು' ಎಂದು ಆಗ್ರಹಿಸಿದ್ದಾರೆ. ನೀರಾವರಿ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳದ ಸರ್ಕಾರ ಮೇಲಿಖ ಯೋಜನೆಗಳಿಗೆ ಒತ್ತು ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬಿಕ್ಕಟ್ಟಿನಿಂದ ಪಾಕಿಸ್ತಾನದ ಕೃಷಿ, ಆರ್ಥಿಕತೆ ಮತ್ತು ಜನಜೀವನ ತೀವ್ರ ಸಂಕಷ್ಟಕ್ಕೆ ಸಿಲ್ಕಿದ್ದು, ತುರ್ತು ಕ್ರಮಗಳ ಅಗತ್ಯವಿದೆ.