ಇಂದಿನಿಂದ ಆರಂಭವಾಗಲಿರುವ 2 ದಿನಗಳ ಜಿ 20 ದೇಶಗಳ ಪ್ರವಾಸೋದ್ಯಮ ಕಾರ್ಯಪಡೆ ಸಭೆಯ ಮೇಲೆ, 26/11 ಮಾದರಿ ದಾಳಿ ನಡೆಸಲು ಪಾಕಿಸ್ತಾನ ಸಂಚು ರೂಪಿಸಿದ್ದ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಇಂದಿನಿಂದ ಆರಂಭವಾಗಲಿರುವ 2 ದಿನಗಳ ಜಿ 20 ದೇಶಗಳ ಪ್ರವಾಸೋದ್ಯಮ ಕಾರ್ಯಪಡೆ ಸಭೆಯ ಮೇಲೆ, 26/11 ಮಾದರಿ ದಾಳಿ ನಡೆಸಲು ಪಾಕಿಸ್ತಾನ ಸಂಚು ರೂಪಿಸಿದ್ದ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಗಣ್ಯರನ್ನು ಪ್ರವಾಸಿ ತಾಣವಾದ ಗುಲ್ಮಾರ್ಗ್‌ ಕರೆದೊಯ್ಯುವ ಪ್ರಸ್ತಾಪವನ್ನು ಕಡೆಯ ಹಂತದಲ್ಲಿ ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Add Asianetnews Kannada as a Preferred SourcegooglePreferred

ಶ್ರೀನಗರದಲ್ಲಿ ಜಿ20 ಸಭೆ ಆಯೋಜನೆಗೆ ಆರಂಭದಿಂದಲೂ ವಿರೋಧ ಹೊಂದಿದ್ದ ಪಾಕಿಸ್ತಾನ ಇಲ್ಲಿ ಏನಾದರೂ ದುಷ್ಕೃತ್ಯಕ್ಕೆ ಸಂಚು ರೂಪಿಸಿರಬಹುದೆಂಬ ಶಂಕೆ ಮೊದಲಿನಿಂದಲೂ ಭದ್ರತಾ ಪಡೆಗಳಿಗೆ ಇತ್ತು. ಹೀಗಾಗಿ ಕಳೆದೊಂದು ತಿಂಗಳಿನಿಂದ ಕಣಿವೆ ರಾಜ್ಯದಲ್ಲಿ ಭಾರಿ ನಿಗಾ ಇಟ್ಟಿದ್ದ ಭದ್ರತಾ ಪಡೆಗಳು ಇತ್ತೀಚೆಗೆ ಫಾರುಖ್‌ ಅಹಮದ್‌ ವಾನಿ ಎಂಬಾತನನ್ನು ಬಂಧಿಸಿದ್ದವು. ಈತನ ವಿಚಾರಣೆ ವೇಳೆ, ಜಿ20 ಸಭೆ ಕಾರ್ಯಕ್ರಮ ನಡೆಯುವ ಹೊತ್ತಿನಲ್ಲಿ ಗುಲ್ಮಾಗ್‌ರ್‍ನ ಹೋಟೆಲ್‌ ಸೇರಿದಂತೆ ಎರಡು ಮೂರು ಸ್ಥಳಗಳ ಮೇಲೆ ಏಕಕಾಲಕ್ಕೆ ಮುಂಬೈ ಮಾದರಿ ಗುಂಡಿನ ದಾಳಿ ನಡೆಸಲು ಪಾಕಿಸ್ತಾನ ಮೂಲಕ ಉಗ್ರ ಸಂಘಟನೆಗಳು ಸಂಚು ರೂಪಿಸಿರುವ ವಿಷಯ ಬೆಳಕಿಗೆ ಬಂದಿದೆ.

ಕಾಶ್ಮೀರ ಹಿಂದಿನಂತಿಲ್ಲ, ಜಿ20ಗಾಗಿ ಭೂಲೋಕದ ಸ್ವರ್ಗವಾದ ಪಂಡಿತರ ನಾಡು!

ಫಾರುಖ್‌, ಹಿಜ್ಬುಲ್‌ ಮುಜಾಹಿದೀನ್‌ (Hizbul Mujahideen), ಜೈಷ್‌ ಎ ಮೊಹಮ್ಮದ್‌ (Jaish-e-Mohammed) ಸೇರಿದಂತೆ ಹಲವು ಉಗ್ರ ಸಂಘಟನೆ ಸ್ಲೀಪರ್‌ಸೆಲ್‌ (sleeper cell) (ಸಾಗಣೆ ವ್ಯವಸ್ಥೆ, ಹಣ ಪೂರೈಕೆ, ವಸತಿ ಇನ್ನಿತರೆ ನೆರವು ನೀಡುವುದು) ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ. ಜೊತೆಗೆ ಈತನಿಗೆ ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ಐಎಸ್‌ಐ (ISI) ಮತ್ತು ಹಲವು ಉಗ್ರ ಸಂಘಟನೆಗಳ ಜೊತೆಗೆ ನೇರ ನಂಟಿದೆ ಎಂಬ ವಿಷಯವೂ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಾಶ್ಮೀರದಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ.

ಬಾರಮುಲ್ಲಾದ (Baramulla) ಸೋಪೋರ್‌ ನಿವಾಸಿಯಾಗಿರುವ ಫಾರುಖ್‌ (Farooq), ಗುಲ್ಮಾರ್ಗ್‌ನ ಪಂಚತಾರಾ ಹೋಟೆಲ್‌ನಲ್ಲಿ (Five star) ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಇಂದಿನಿಂದ ಕಾಶ್ಮೀರದಲ್ಲಿ ಜಿ20 ಕಾರ‍್ಯಕಾರಿ ಸಭೆ: ಕಾಶ್ಮೀರದಲ್ಲಿ ಸೇನೆ ಸರ್ಪಗಾವಲು

ಜಿ20 ರಾಷ್ಟ್ರಗಳ ಕಾರ್ಯಕಾರಿ ಗುಂಪಿನ 3 ದಿನಗಳ ಸಭೆ ಇಂದಿನಿಂದ ಶ್ರೀನಗರದಲ್ಲಿ ಆರಂಭವಾಗಲಿದೆ. ಈ ಸಭೆಯಲ್ಲಿ 100ಕ್ಕೂ ಹೆಚ್ಚು ಅತಿಥಿಗಳು ಭಾಗಿಯಾಗಲಿದ್ದು, ಮೇ 24ಕ್ಕೆ ಅಂತ್ಯವಾಗಲಿದೆ. ಜಿ20 ಶೃಂಗ ಈ ವರ್ಷಾಂತ್ಯಕ್ಕೆ ನಡೆಯಲಿದ್ದು, ಅದಕ್ಕೆ ಮುನ್ನ ನಡೆಯುವ ಮಹತ್ವದ ಸಭೆ ಇದಾಗಿದೆ. ಆದರೆ, ಉಗ್ರರ ಉಪಟಳ ಇರುವ ಈ ರಾಜ್ಯದಲ್ಲಿ ಈ ಹಿಂದೆಂದೂ ಕಂಡಿರದ ರೀತಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ವಾಯುಪಡೆ, ನೌಕಾಪಡೆ ಮತ್ತು ಭೂಸೇನೆಗಳು ಸಹ ಭದ್ರತಾ ಕಾರ್ಯದಲ್ಲಿ ಭಾಗಿಯಾಗಿವೆ.

ಕಾಶ್ಮೀರದ ಜಿ20 ಶೃಂಗಸಭೆಗೆ ಕಮ್ಯಾಂಡೋ, ಸೇನೆ ಭದ್ರತೆ

ಸಭೆ ನಡೆಯುವ ಶೇರ್‌-ಎ-ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ನ ಸಮೀಪದಲ್ಲಿರುವ ದಾಲ್‌ ಸರೋವರವನ್ನು ಭಾರತೀಯ ನೌಕಾಪಡೆ ಸುಪರ್ದಿಗೆ ತೆಗೆದುಕೊಂಡಿದ್ದು, ಭದ್ರತೆ ಒದಗಿಸಿದೆ. ಇದಲ್ಲದೇ ಎನ್‌ಎಸ್‌ಜಿ ಕಮಾಂಡೋಗಳು (NSG Commando) ಇಡೀ ನಗರದ ಭದ್ರತೆಯನ್ನು ವಹಿಸಿಕೊಂಡಿದ್ದು, ಪ್ಯಾರಾಮಿಲಿಟರಿ ದಳದೊಂದಿಗೆ ಗಸ್ತು ನಡೆಸಿದ್ದಾರೆ. ಭದ್ರತೆಗಾಗಿ ಸೇನೆ, ಗಡಿ ಭದ್ರತಾ ಪಡೆ, ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ, ಸಶಸ್ತ್ರ ಸೀಮಾ ದಳ ಮತ್ತು ಜಮ್ಮು ಕಾಶ್ಮೀರ (Jammu Kashmir) ಪೊಲೀಸರನ್ನು ನಿಯೋಜಿಸಲಾಗಿದೆ.

ಅಹಿತಕರ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ನಾವು 3 ಹಂತದ ಭದ್ರತೆಯನ್ನು ಆಯೋಜನೆ ಮಾಡಿದ್ದೇವೆ ಎಂದು ಜಮ್ಮು ಕಾಶ್ಮೀರ ಎಡಿಜಿಪಿ ಹೇಳಿದ್ದಾರೆ.