ವಿಭಜನೆ ಬಳಿಕ ಸಂಕಷ್ಟಕ್ಕೆ ಸಿಕ್ಕ ಪಾಕ್ ಮತ್ತೆ ಭಾರತ ಸೇರಲಿ: ಭಾಗವತ್!
ವಿಭಜನೆ ಬಳಿಕ ಸಂಕಷ್ಟಕ್ಕೆ ಸಿಕ್ಕ ಪಾಕ್ ಮತ್ತೆ ಭಾರತ ಸೇರಲಿ: ಭಾಗವತ್| ‘ಅಖಂಡ ಭಾರತ’ದ ಅಗತ್ಯತೆಯ ಬಗ್ಗೆ ಪ್ರತಿಪಾದಿಸಿರುವ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಹೈದರಾಬಾದ್(ಫೆ.26): ‘ಅಖಂಡ ಭಾರತ’ದ ಅಗತ್ಯತೆಯ ಬಗ್ಗೆ ಪ್ರತಿಪಾದಿಸಿರುವ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಭಾರತದಿಂದ ಬೇರ್ಪಟ್ಟಿರುವ ಪಾಕಿಸ್ತಾನ ಈಗ ಸಂಕಷ್ಟಕ್ಕೆ ಸಿಲುಕಿರುವುದೇ ಇದಕ್ಕೊಂದು ಜ್ವಲಂತ ಉದಾಹರಣೆ ಆಗಿದೆ ಎಂದು ಹೇಳಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಹಿಂದೂ ಧರ್ಮದ ಮೂಲಕ ಅಖಂಡ ಭಾರತದ ಪರಿಕಲ್ಪನೆ ಸಾಧ್ಯವಿದೆ. ವಿಶ್ವದ ಕಲ್ಯಾಣಕ್ಕೋಸ್ಕರ ವೈಭವದ ಅಖಂಡ ಭಾರತ ನಿರ್ಮಾಣವನ್ನು ಸಾಕಾರಗೊಳಿಸಬಹುದು. ಈ ಹಿಂದೆ ಪಾಕಿಸ್ತಾನ ವಿಂಗಡನೆ ಆಗಿರುವುದನ್ನು ಯಾರೂ ನಂಬಿರಲಿಲ್ಲ. ಆದರೆ, ಪಾಕಿಸ್ತಾನ ಭಾರತದಿಂದ ವಿಭಜನೆಗೊಂಡಿತು. ಇಂದು ಆ ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಹೀಗಾಗಿ ಭಾರತದ ಜೊತೆ ಗುರುತಿಸಿಕೊಂಡಿದ್ದ ಪ್ರದೇಶಗಳು ತಮ್ಮ ಮುಂಬರುವ ವಿಪತ್ತಿನಿಂದ ಪಾರಾಗಲು ಭಾರತದ ಜೊತೆ ಮತ್ತೆ ವಿಲೀನಗೊಳ್ಳುವ ಅಗತ್ಯವಿದೆ.
ಆದರೆ, ಅದನ್ನು ಬಲವಂತವಾಗಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಜನರಲ್ಲಿ ದೇಶಭಕ್ತಿಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಭಾರತ ಏಕೀಕರಣಗೊಂಡರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆ. ವಿಸುದೈವ ಕುಟುಂಬಕಂ (ಇಡೀ ವಿಶ್ವವೇ ಒಂದು ಕುಟುಂಬ) ಎಂದು ನಂಬಿರುವ ಭಾರತ ವಿಶ್ವಕ್ಕೆ ಮತ್ತೊಮ್ಮೆ ಸಂತೋಷ ಹಾಗೂ ಶಾಂತಿಯನ್ನು ನೀಡಬಹುದಾಗಿದೆ ಎಂದು ಹೇಳಿದ್ದಾರೆ.