ಮಹಾರಾಷ್ಟ್ರದಲ್ಲಿ ಗೂಡ್ಸ್, ಪ್ಯಾಸೆಂಜರ್ ರೈಲು ಡಿಕ್ಕಿ: 50 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಮಹಾರಾಷ್ಟ್ರದ ಗೋಂಡಿಯಾದಲ್ಲಿ ನಸುಕಿನ ಜಾವ 2.30 ರ ವೇಳೆಗೆ ಗೂಡ್ಸ್ ರೈಲು ಹಾಗೂ ಪ್ಯಾಸೆಂಜರ್ ರೈಲು ಪರಸ್ಪರ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ದೇಶದಲ್ಲಿಂದು ಮತ್ತೊಂದು ರೈಲು ದುರಂತ ಸಂಭವಿಸಿದೆ. ಮಹಾರಾಷ್ಟ್ರದ ಗೋಂಡಿಯಾದಲ್ಲಿ ಬುಧವಾರ ನಸುಕಿನ ಜಾವ ಪ್ಯಾಸೆಂಜರ್ ರೈಲು ಹಾಗೂ ಗೂಡ್ಸ್ ರೈಲು ಪರಸ್ಪರ ಡಿಕ್ಕಿಯಾಗಿದ್ದು, ಈ ಹಿನ್ನೆಲೆ 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತಕ್ಕೆ ಪ್ಯಾಸೆಂಜರ್ ರೈಲಿನ ಮೂರು ಬೋಗಿಗಳು ಹಳಿ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಗೋಂಡಿಯಾದಲ್ಲಿ ಬುಧವಾರ ನಸುಕಿನ ಜಾವ 2.30ರ ವೇಳೆಗೆ ಪ್ಯಾಸೆಂಜರ್ ರೈಲು ಹಾಗೂ ಗೂಡ್ಸ್ ರೈಲು ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಅಪಘಾತವಾಗಿದೆ. ಈ ಹಿನ್ನೆಲೆ ಪ್ರಯಾಣಿಕ ರೈಲಿನಲ್ಲಿದ್ದ 3 ಬೋಗಿಗಳು ಹಳಿ ತಪ್ಪಿದ್ದು, ಈ ಘಟನೆಯಲ್ಲಿ 50 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರೂ ಪ್ರಾಣ ಕಳೆದುಕೊಂಡಿಲ್ಲ ಎಂದು ತಿಳಿದುಬಂದಿದೆ.
ಕೋಲಾರ: ಮುಳಬಾಗಿಲು ಬಳಿ ಖಾಸಗಿ ಬಸ್ ಪಲ್ಟಿ, ಇಬ್ಬರ ಸಾವು
ಹಳಿ ತಪ್ಪಿದ ಪ್ಯಾಸೆಂಜರ್ ರೈಲು ಛತ್ತೀಸ್ಗಢದ ಬಿಲಾಸ್ಪುರದಿಂದ ರಾಜಸ್ಥಾನದ ಜೋಧಪುರಕ್ಕೆ ತೆರಳುತ್ತಿತ್ತು. ಇನ್ನು, ಸಿಗ್ನಲ್ ನೀಡುವಲ್ಲಿ ಉಂಟಾದ ಎಡವಟ್ಟಿನಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಪ್ರಯಾಣಿಕ ರೈಲಿನ ಲೋಕೋಪೈಲಟ್ ಎಮರ್ಜೆನ್ಸಿ ಬ್ರೇಕ್ ಅನ್ನು ಹಾಕಿದರೂ ಗೂಡ್ಸ್ ರೈಲಿನ ಜತೆ ಡಿಕ್ಕಿಯಾಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದೂ ಹೇಳಲಾಗಿದೆ. ಆದರೆ, ಬೆಳಗ್ಗಿನ ಜಾವ 4: 30 ರ ವೇಳೆಗೆ ಹಳಿ ತಪ್ಪಿದ ರೈಲಿನ ಬೋಗಿಗಳನ್ನು ಸರಿ ಪಡಿಸಲಾಗಿದೆ. ನಂತರ, ಅಪಘಾತ ನಡೆದ ಸ್ಥಳದಿಂದ ಬೆಳಗ್ಗೆ 5: 24 ರ ವೇಳೆಗೆ ಹೊರಟಿತು ಹಾಗೂ 5:44ಕ್ಕೆ ಗೋಂಡಿಯಾ ರೈಲು ನಿಲ್ದಾಣವನ್ನು ಅಪಘಾತಕ್ಕೊಳಗಾದ ಪ್ರಯಾಣಿಕ ರೈಲು ತೆರಳಿತು ಎಂದೂ ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಹಾಗೂ 5: 45 ರ ವೇಳೆಗೆ ಅಪ್ ಹಾಗೂ ಡೌನ್ ಟ್ರಾಫಿಕ್ ಪುನಾರಂಭವಾಯಿತು ಎಂದೂ ರೈಲ್ವೆ ಇಲಾಖೆ ತಿಳಿಸಿದೆ.
ಎಕ್ಸ್ಪ್ರೆಸ್ ರೈಲಿನ 4 ಟೈರ್ಗಳು ಟ್ರ್ಯಾಕ್ನಿಂದ ಹೊರಕ್ಕೆ ಬಂದು ಈ ಅಪಘಾತವಾಗಿದ್ದು, ಯಾವ ಪ್ರಯಾಣಿಕರಿಗೂ ಗಂಭೀರ ಗಾಯಗಳಾಗಿಲ್ಲ ಎಂದೂ ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ರೈಲ್ವೆ ಸುರಕ್ಷತಾ ಆಯುಕ್ತ ಈ ಅಪಘಾತ ಸಂಬಂಧ ತನಿಖೆ ನಡೆಸಲಿದೆ ಎಂದೂ ಹೇಳಿದ್ದಾರೆ.
ಹರ್ಯಾಣದ ಗುರುಗ್ರಾಮದಲ್ಲಿ ರೈಲಿಗೆ ತಗುಲಿ ಮೂವರ ಸಾವು
ಇನ್ನೊಂದೆಡೆ, ಹರ್ಯಾಣದ ಗುರುಗ್ರಾಮದಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಮೂವರು ಗೆಳೆಯರಿಗೆ ರೈಲು ಡಿಕ್ಕಿ ಹೊಡೆದು ಅವರು ಮೃತಪಟ್ಟಿರುವ ಘಟನೆಯೂ ನಡೆದಿದೆ. ಈ ಮೂವರನ್ನು ಆದಿಲ್, ಫೈಜಾನ್ ಹಾಗೂ ಸಾಹುಲ್ ಎಂದು ಗುರುತಿಸಲಾಗಿದ್ದು, ಈ ಮೂವರೂ ಸಹ 18 ರಿಂದ 23 ವರ್ಷ ವಯಸ್ಸಿನೊಳಗಿನವರು ಎಂದು ತಿಳಿದುಬಂದಿದೆ. ಈ ಘಟನೆ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಒಂದು ರೈಲ್ವೆ ಹಳಿಯ ಮೇಲೆ ಇವರು ನಡೆದುಕೊಂಡು ಹೋಗುತ್ತಿದ್ದರು. ಆ ವೇಳೆ ಆ ಹಳಿಯಲ್ಲಿ ಡಬ್ಬಲ್ ಡೆಕ್ಕರ್ ರೈಲು ಬರುತ್ತಿರುವುದನ್ನು ನೋಡಿ ಮತ್ತೊಂದು ಹಳಿಗೆ ಹೋದರು. ಆದರೆ, ಆ ಹಳಿಯಲ್ಲಿ ರೆವಾರಿಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಡೀಸೆಲ್ ಮಲ್ಟಿಪಲ್ ಯುನಿಟ್ ರೈಲು ಬಂದು ಅವರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮೂವರೂ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
37 ITBP ಸೈನಿಕರು, ಇಬ್ಬರು ಕಾಶ್ಮೀರ ಪೊಲೀಸರು ತೆರಳುತ್ತಿದ್ದ ವಾಹನ ಅಪಘಾತ: 6 ಸೈನಿಕರ ಸಾವು
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ದೆಹಲಿ - ರೆವಾರಿ ರೈಲು ಮಾರ್ಗದಲ್ಲಿ ಹಿರಿಯ ಮಹಿಳೆಯೊಬ್ಬರು ಮೃತಪಟ್ಟಿರುವುದು ವರದಿಯಾಗಿದೆ. ಧನವಾಸ್ ಬಳಿ ರೈಲೊಂದಕ್ಕೆ ಡಿಕ್ಕಿ ಹೊಡೆದು 62 ವರ್ಷದ ಕಮಲಾದೇವಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು, ಆ ಮಹಿಳೆ ರೈಲಿನಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಕಮಲಾದೇವಿಯ ಸಂಬಂಧಿಕರು ಹೇಳಿಕೊಂಡಿದ್ದಾರೆ ಎಂದೂ ವರದಿಯಾಗಿದೆ.