ವಿಧಾನಸಭೆ ಚುನಾವಣೆಗಳಲ್ಲಿ ಅನುಭವಿಸಿದ ಸೋಲನ್ನು ಅರಗಿಸಿಕೊಳ್ಳಲಾಗದೆ ವಿಪಕ್ಷಗಳ ಸಂಸದರು ಕಲಾಪ ಹಾಳುಗೆಡವುವುದಕ್ಕೆ ನೆಪ ಹುಡುಕುತ್ತಿದ್ದರು. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗಲೂ ಜವಾಬ್ದಾರಿಯುತವಾಗಿ ನಡೆದುಕೊಂಡಿಲ್ಲ, ಅಧಿಕಾರದಲ್ಲಿ ಇಲ್ಲದಿದ್ದಾಗಂತೂ ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಿಡಿ ಕಾರಿದ್ದಾರೆ.

ನವದೆಹಲಿ (ಡಿಸೆಂಬರ್ 23, 2023): ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಉಭಯ ಸದನಗಳ 146 ಸಂಸದರನ್ನು ಅಮಾನತುಗೊಳಿಸಿರುವುದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ, ವಿಪಕ್ಷಗಳ ಸಂಸದರೇ ತಮ್ಮನ್ನೂ ಸಸ್ಪೆಂಡ್‌ ಮಾಡುವಂತೆ ನಮ್ಮನ್ನು ಕೋರಿದ್ದರು ಎಂದು ಆರೋಪಿಸಿದ್ದಾರೆ.

Add Asianetnews Kannada as a Preferred SourcegooglePreferred

‘ಸದನದಲ್ಲಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಅಶಿಸ್ತು ತೋರಿದ ಕೆಲ ಸಂಸದರನ್ನು ಮೊದಲಿಗೆ ಅಮಾನತು ಮಾಡಲಾಗಿತ್ತು. ಬಳಿಕ ವಿಪಕ್ಷಗಳ ಇನ್ನಷ್ಟು ಸಂಸದರು ಬಂದು ‘ನಾವೂ ಹಾಗೇ ಮಾಡುತ್ತೇವೆ. ನಮ್ಮನ್ನೂ ಅಮಾನತು ಮಾಡಿ’ ಎಂದು ಕೋರಿದರು. ವಿಪಕ್ಷಗಳ ಸಂಸದರನ್ನು ಅಮಾನತು ಮಾಡುವ ಇಚ್ಛೆ ನಮಗಿರಲಿಲ್ಲ. ಸದನದಲ್ಲಿ ಶಿಸ್ತಿನಿಂದ ನಡೆದುಕೊಳ್ಳುವಂತೆ ಅವರಿಗೆ ಮನವಿ ಮಾಡಿದೆವು. ಆದರೆ ಅವರು ಕೇಳಲಿಲ್ಲ. ಕಾಂಗ್ರೆಸ್‌ ಸಂಸದರು ಇಷ್ಟು ಕೆಳಕ್ಕೆ ಇಳಿಯುತ್ತಾರೆಂದು ಭಾವಿಸಿರಲಿಲ್ಲ’ ಎಂದು ಹೇಳಿದ್ದಾರೆ.

ಇದನ್ನು ಓದಿ: 2024 ರಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳ ಪಣ: 146 ಸಂಸದರ ಸಸ್ಪೆಂಡ್‌ ಖಂಡಿಸಿ I.N.D.I.A ಬಲ ಪ್ರದರ್ಶನ

ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಜೊತೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೋಶಿ, ‘ಸದನದಲ್ಲಿ ಭಿತ್ತಿಫಲಕ ಪ್ರದರ್ಶಿಸಿದ್ದಕ್ಕೆ ಸಂಸದರನ್ನು ಅಮಾನತು ಮಾಡಲಾಗಿದೆ ಎಂದು ಇನ್ನುಳಿದವರಿಗೆ ತಿಳಿಸಿದ್ದೆವು. ಆಗ ಅವರು ತಾವೂ ಕೂಡ ಅಶಿಸ್ತು ಪ್ರದರ್ಶಿಸುತ್ತೇವೆ, ತಮ್ಮನ್ನೂ ಸಸ್ಪೆಂಡ್‌ ಮಾಡಿ ಎಂದು ಕೇಳಿದರು. ಇವುಗಳ ಮಧ್ಯೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮ ಸಹವರ್ತಿ ಸಂಸದರು ಸಾಂವಿಧಾನಿಕ ಹುದ್ದೆಯಲ್ಲಿರುವವರನ್ನು ಅಣಕಿಸುತ್ತಿದ್ದುದನ್ನು ವಿಡಿಯೋ ಮಾಡುತ್ತ ಎಂಜಾಯ್‌ ಮಾಡುತ್ತಿದ್ದರು’ ಎಂದು ಕಿಡಿಕಾರಿದರು.

ವಿಧಾನಸಭೆ ಚುನಾವಣೆಗಳಲ್ಲಿ ಅನುಭವಿಸಿದ ಸೋಲನ್ನು ಅರಗಿಸಿಕೊಳ್ಳಲಾಗದೆ ವಿಪಕ್ಷಗಳ ಸಂಸದರು ಕಲಾಪ ಹಾಳುಗೆಡವುವುದಕ್ಕೆ ನೆಪ ಹುಡುಕುತ್ತಿದ್ದರು. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗಲೂ ಜವಾಬ್ದಾರಿಯುತವಾಗಿ ನಡೆದುಕೊಂಡಿಲ್ಲ, ಅಧಿಕಾರದಲ್ಲಿ ಇಲ್ಲದಿದ್ದಾಗಂತೂ ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತದೆ. ಸಂಸತ್ತಿನಲ್ಲಿ ಅಂಗೀಕರಿಸಲಾದ 3 ಹೊಸ ಕ್ರಿಮಿನಲ್‌ ಮಸೂದೆಗಳ ಬಗ್ಗೆ ವಿಪಕ್ಷಗಳಿಗೆ ಆಕ್ಷೇಪವಿದ್ದರೆ ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗುವುದಕ್ಕೆ ಅವುಗಳಿಗೆ ಸ್ವಾತಂತ್ರ್ಯವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ಇದನ್ನು ಓದಿ: ಭಾರತೀಯ ಸಮಾಜದಲ್ಲಿ ಧಾರ್ಮಿಕ ತಾರತಮ್ಯವಿಲ್ಲ: ಪ್ರಧಾನಿ ಮೋದಿ