ಕಾಂಗ್ರೆಸ್ನಲ್ಲಿದ್ದ ಏಕೈಕ ದೇಶಭಕ್ತ ಅಮರಿಂದರ್, ಸೋಶಿಯಲ್ ಮೀಡಿಯಾದಲ್ಲಿ #JoinBJP ಟ್ರೆಂಡ್!
- ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ
- ಪಂಜಾಬ್ ಕಾಂಗ್ರೆಸ್ ಒಳಜಗಳ, ಸಿಧು ಕುತಂತ್ರಕ್ಕೆ ಬೇಸತ್ತ ಅಮರಿಂದರ್
- ಅಮರಿಂದರ್ ಸಿಂಗ್ ಪರ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ
- ಕಾಂಗ್ರೆಸ್ ಪಕ್ಷದ ಏಕೈಕ ದೇಶಭಕ್ತ, #JoinBJP ಅಭಿಯಾನ
ನವದೆಹಲಿ(ಸೆ.18): ಪಂಜಾಬ್ ಕಾಂಗ್ರೆಸ್ನಲ್ಲಿ ಎದ್ದ ಬಿರುಗಾಳಿಗೆ ಇದೀಗ ಮುಖ್ಯಮಂತ್ರಿ ವಿಕೆಟ್ ಪತನಗೊಂಡಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆಗೆ ನೀಡಿದ್ದಾರೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕುತಂತ್ರಕ್ಕೆ ಬೇಸತ್ತ ಅಮರಿಂದರ್ ಇಂದು ರಾಜ್ಯಪಾಲರ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಅಮರಿಂದರ್ ನಿರ್ಧಾರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ #JoinBJP ಟ್ರೆಂಡ್ ಶುರುವಾಗಿದೆ.
ಪಂಜಾಬ್ ಕಾಂಗ್ರೆಸ್ನಲ್ಲಿ ಬಿರುಕು: ಪಂಜಾಬ್ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಮರಿಂದ್ ಸಿಂಗ್ ರಾಜೀನಾಮೆ!
ಪಾಕಿಸ್ತಾನ ವಿರುದ್ಧ, ಕಾಶ್ಮೀರ ಪರ ಮಾತನಾಡಿದ ಯಾರೂ ಕಾಂಗ್ರೆಸ್ ಪಕ್ಷದಲ್ಲಿ ಉಳಿದಿಲ್ಲ. ಇದೀಗ ಇದೇ ಕ್ಯಾಪ್ಟನ್ ಅಮರಿಂದರ್ ಸಿಂಗ್ಗೂ ಅದೇ ಪರಿಸ್ಥಿತಿ ಎದುರಾಗಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಏಕೈಕ ದೇಶಭಕ್ತ ಕ್ಯಾಪ್ಟನ್ ಅಮರಿಂದರ್ ಸಿಂಗ್ ಎಂದು ಸಾಮಾಜಿಕ ಜಾಲತಾಣದಲ್ಲಿ ಅಮರಿಂದರ್ ಪರ ಅಭಿಯಾನಗಳು ಆರಂಭಗೊಂಡಿದೆ. ಇದರ ಜೊತೆಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿ ಸೇರಿಕೊಳ್ಳುವಂತೆ #JoinBJP ಅಭಿಯಾನ ಜೋರಾಗಿದೆ.
ಹಲವು ನಾಯಕರು ಅಮರಿಂದರ್ ಸಿಂಗ್ ಪರ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಕುತಂತ್ರ, ಅವಮಾನಕ್ಕೆ ದಕ್ಷ ಆಡಳಿತಗಾರನನ್ನು ಪಕ್ಕಕ್ಕೆ ಸರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ನಡೆಸಿಕೊಂಡ ರೀತಿ ನೋವಾಗಿದೆ. ಕಾಂಗ್ರೆಸ್ನಲ್ಲಿದ್ದ ಏಕೈಕ ದೇಶಭಕ್ತ. ಖಲಿಸ್ತಾನ ಉಗ್ರರ ಬೆಂಬಲಿಸುವ ಕೆನಡಾ ಮಂತ್ರಿ ಭೇಟಿಯಾಗಲು ನಿರಾಕರಿಸಿದ ಅಪ್ಪಟ ಭಾರತೀಯ ಅಮರಿಂದರ್ ಎಂದು ಬಿಜೆಪಿ ನಾಯಕ ತಜಿಂದರ್ ಸಿಂಗ್ ಪಾಲ್ ಬಗ್ಗಾ ಟ್ವೀಟ್ ಮಾಡಿದ್ದಾರೆ.
ನವಜೋತ್ ಸಿಂಗ್ ಸಿಧು ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಪಾಕಿಸ್ತಾನ ಅಪ್ಪಿಕೊಂಡು, ಪಾಕಿಸ್ತಾನವೇ ಬೆಸ್ಟ್, ಕಾಶ್ಮೀರ ಭಾರತದಲ್ಲ ಎಂದ ನವಜೋತ್ ಸಿಂಗ್ ಸಿಧುಗೆ ಕಾಂಗ್ರೆಸ್ ಯಾವುದೇ ಅಳುಕಿಲ್ಲದೆ ಸಿಎಂ ಪಟ್ಟ ಕಟ್ಟುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.