ಆಂಧ್ರದಲ್ಲಿ ನಿಗೂಢ ರೋಗ| ಒಂದೇ ನಗರದ 200ಕ್ಕೂ ಅಧಿಕ ಮಂದಿಗೆ ಮೂರ್ಛೆಯಂತಹ ಸಮಸ್ಯೆ| ಆಸ್ಪತ್ರೆಗೆ ದಾಖಲು, ಕೊರೋನಾ ಇಲ್ಲ| ಕಾರಣ ತಿಳಿಯದೆ ಕಂಗಾಲು

ಏಲೂರು (ಡಿ.07): ಕೊರೋನಾ ವೈರಸ್‌ನಿಂದ ಇಡೀ ಜಗತ್ತು ತತ್ತರಿಸುತ್ತಿರುವಾಗಲೇ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದಲ್ಲಿ ನಿಗೂಢ ಆರೋಗ್ಯ ಸಮಸ್ಯೆಯೊಂದು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ವಿವಿಧ ಪ್ರದೇಶಗಳಿಗೆ ಸೇರಿದ ಸುಮಾರು 200ಕ್ಕೂ ಅಧಿಕ ಮಂದಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರ ಬಾಯಿಯಲ್ಲಿ ನೊರೆ ತುಂಬಿಕೊಂಡಿದೆ. ಮೈಯಲ್ಲಿ ನಡುಕ ಕಂಡುಬಂದಿದೆ. ಮೂರ್ಛೆಯಂತೆ ಈ ಸಮಸ್ಯೆ ಕಂಡುಬಂದರೂ ನಿಖರವಾಗಿ ಯಾವ ರೋಗ ಎಂಬುದು ಗೊತ್ತಾಗದೆ ಆರೋಗ್ಯ ಅಧಿಕಾರಿಗಳು ಕಂಗಾಲಾಗಿದ್ದಾರೆ.

Add Asianetnews Kannada as a Preferred SourcegooglePreferred

"

ಸದ್ಯದಲ್ಲೇ ಬರಲಿದೆ ಕೋವಿಡ್‌ ಲಸಿಕೆ ; ಖದೀಮರಿಂದ ಭಾರೀ ಸ್ಕೆಚ್.. ಎಚ್ಚರ..ಎಚ್ಚರ

ಈವರೆಗೆ ಸುಮಾರು 228 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ರೋಗಿಗಳು ಒಂದೇ ಪ್ರದೇಶಕ್ಕೆ ಸೇರಿದವರಲ್ಲ. ಒಂದೇ ಸಮಾರಂಭದಲ್ಲಿ ಭಾಗವಹಿಸಿದವರೂ ಅಲ್ಲ. ಬಹುತೇಕ ಮಂದಿ ವೃದ್ಧರು ಹಾಗೂ ಮಕ್ಕಳಾಗಿದ್ದಾರೆ. ಎಲ್ಲರಿಗೂ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ನೆಗೆಟಿವ್‌ ಬಂದಿದೆ. ಪರಿಣತರ ತಂಡವೊಂದು ಭೇಟಿ ನೀಡಿ, ರೋಗಿಗಳನ್ನು ತಪಾಸಣೆಗೆ ಒಳಪಡಿಸಿದೆ. ರಕ್ತದ ಮಾದರಿಗಳನ್ನು ಪಡೆಯಲಾಗಿದ್ದು, ಅದರಲ್ಲೂ ಯಾವುದೇ ಸಮಸ್ಯೆ ಪತ್ತೆಯಾಗಿಲ್ಲ.

ಈವರೆಗೆ 70 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 76 ಮಹಿಳೆಯರು ಹಾಗೂ 46 ಮಕ್ಕಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 6 ವರ್ಷದ ಬಾಲಕಿಯೊಬ್ಬಳ ಪರಿಸ್ಥಿತಿ ವಿಷಮಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ವಿಜಯವಾಡದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತುರ್ತು ವೈದ್ಯಕೀಯ ಕೇಂದ್ರವನ್ನು ವಿಜಯವಾಡದಲ್ಲಿ ತೆರೆಯಲಾಗಿದೆ.

ಈ ಜೇನುತುಪ್ಪವನ್ನು ಬಳಸುವ ಮುನ್ನ ಎಚ್ಚರ; ಸಂಶೋಧನೆ ಹೇಳ್ತಿದೆ ಭಯಂಕರ ವಿಚಾರ

ಮತ್ತಷ್ಟುಮಂದಿಗೆ ಸಮಸ್ಯೆ ಕಂಡುಬರಬಹುದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಏಲೂರಿನಲ್ಲಿ 150 ಹಾಗೂ ವಿಜಯವಾಡದಲ್ಲಿ 50 ಹಾಸಿಗೆಗಳನ್ನು ಸಜ್ಜುಗೊಳಿಸಿಟ್ಟುಕೊಳ್ಳಲಾಗಿದೆ.

ಆರೋಗ್ಯಾಧಿಕಾರಿಗಳು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಲು ಉದ್ದೇಶಿಸಿದ್ದಾರೆ. ಕಲಬೆರಕೆ ಆಹಾರ ಅಥವಾ ನೀರನ್ನು ರೋಗಿಗಳು ಸೇವಿಸಿದ್ದರೆ ಎಂಬುದನ್ನು ಈ ತಂಡಗಳು ಪತ್ತೆ ಹಚ್ಚಲಿವೆ. ಏಲೂರಿನಲ್ಲಿ ವೈದ್ಯಕೀಯ ಶಿಬಿರವೊಂದನ್ನು ಕೂಡ ತೆರೆಯಲಾಗಿದೆ.

ಏಕಾಏಕಿ ಕುಸಿದು ಬೀಳುತ್ತಾರೆ. ಬಾಯಿಯಲ್ಲಿ ನೊರೆ ಬರುತ್ತದೆ. ಮೈ ನಡುಗಲು ಆರಂಭಿಸುತ್ತದೆ. ಬೇಗನೆ ಚೇತರಿಸಿಕೊಳ್ಳುತ್ತಾರೆ. ಮತ್ತೆ ಅವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈವರೆಗೆ ಯಾರಿಗೂ ಅಪಾಯವಾಗಿಲ್ಲ.

- ಕೆ. ಸುನಂದಾ, ಆರೋಗ್ಯಾಧಿಕಾರಿ