* ನರ್ಸಿಂಗ್ ಕೋರ್ಸ್ ಪಠ್ಯದಲ್ಲಿ ವಿವಾದಾತ್ಮಕ ಅಂಶ* ಶಾಲಾ ಪಠ್ಯದಲ್ಲಿ ವರದಕ್ಷಿಣೆ ಲಾಭ, ನಷ್ಟಚರ್ಚೆ ವಿವಾದ
ಮುಂಬೈ(ಏ.06): ವರದಕ್ಷಿಣೆಯಂತಹ ಸಾಮಾಜಿಕ ಪಿಡುಗಿನ ‘ಅನುಕೂಲ ಹಾಗೂ ಲಾಭ’ಗಳ ಬಗ್ಗೆ ನರ್ಸಿಂಗ್ ಕೋರ್ಸ್ನಲ್ಲಿ ಪಠ್ಯವೊಂದನ್ನು ಅಳವಡಿಸಿರುವ ವಿಷಯ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಟಿ.ಕೆ. ಇಂದ್ರಾಣಿಯವರು ಎಂಬುವವರು ಬರೆದ ಈ ಪುಸ್ತಕದಲ್ಲಿ ವರದಕ್ಷಿಣೆಯ ಲಾಭ/ ನಷ್ಟಗಳೇನು ಎಂದು ವಿವರಿಸಲಾಗಿದೆ. ‘ವರದಕ್ಷಿಣೆ ಪದ್ಧತಿಯಿಂದಾಗಿ ಮಹಿಳೆಗೆ ತನ್ನ ಪೋಷಕರ ಮನೆ ಆಸ್ತಿ ಸಿಗುತ್ತದೆ, ಚೆನ್ನಾಗಿ ಓದಿದ ಮಹಿಳೆಗೆ ವರದಕ್ಷಿಣೆ ಕಡಿಮೆ ಕೇಳಬಹುದು ಎನ್ನುವ ಕಾರಣಕ್ಕಾಗಿ ಪೋಷಕರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬಹುದು, ವರದಕ್ಷಿಣೆ ಪಡೆಯುವುದರಿಂದ ಮದುವೆಯಾದ ಹೆಣ್ಣು ಮಗಳು ಹೊಸ ಮನೆಗೆ ಬೇಕಾದ ವಸ್ತು ಖರೀದಿಸಬಹುದು ಜೊತೆಗೆ, ವರದಕ್ಷಿಣೆ ಕೊಟ್ಟರೆ ಕುರೂಪಿ ಹೆಣ್ಣು ಮಗಳನ್ನು ಚೆನ್ನಾಗಿ ದುಡ್ಡಿರುವ ಕುರೂಪಿ ವರನಿಗೆ ಕೊಟ್ಟು ಮದುವೆ ಮಾಡಬಹುದು’ ಎಂದು ಪ್ರಸ್ತಾಪಿಸಲಾಗಿದೆ.
ಶಿವಸೇನೆಯ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಈ ಕುರಿತು ಕಿಡಿಕಾರಿದ್ದು, ‘ವಿದ್ಯಾರ್ಥಿಗಳಿಗೆ ಇಂತಹ ವಿಷಯಗಳನ್ನು ಬೋಧಿಸುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ ಎಂದಿದ್ದಾರೆ. ಮತ್ತೊಂದೆಡೆ ವರದಕ್ಷಿಣೆಯಂತ ಸಾಮಾಜಿಕ ಪಿಡುಗಿನ ಲಾಭಗಳು ಎಂಬ ವಿಷಯವನ್ನು ಚರ್ಚಿಸಿ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ನೀಡಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನರಿಗೆ ಪತ್ರ ಬರೆದಿದ್ದಾರೆ. ಇನ್ನೊಂದೆಡೆ ಈ ಪುಸ್ತಕದ ಮಾರಾಟಕ್ಕಾಗಿ ಪ್ರಕಾಶಕರು ಹಾಗೂ ಲೇಖಕರು ಕೌನ್ಸಿಲ್ ಹೆಸರಿನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಭಾರತೀಯ ನರ್ಸಿಂಗ್ ಕೌನ್ಸಿಲ್ ಕಿಡಿಕಾರಿದೆ.
