* ಇತರೆ ಹಲವು ವಿವೇಚನಾ ಕೋಟಾ ಕೂಡಾ ರದ್ದು* ಕೇಂದ್ರೀಯ ವಿದ್ಯಾಲಯ ಸಂಸದರ ಕೋಟಾ ರದ್ದು* ಕೇಂದ್ರೀಯ ವಿದ್ಯಾಲಯದಿಂದ ಪರಿಷ್ಕೃತ ಮಾರ್ಗಸೂಚಿ* ಕೋವಿಡ್‌ನಿಂದ ಪೋಷಕರ ಕಳೆದುಕೊಂಡ ವಿದ್ಯಾರ್ಥಿಗಳ ದಾಖಲಾತಿಗೆ ಆದ್ಯತೆ

ನವದೆಹಲಿ(ಏ.27): ದೇಶಾದ್ಯಂತ ಇರುವ 1200ಕ್ಕೂ ಹೆಚ್ಚು ಕೇಂದ್ರೀಯ ವಿದ್ಯಾಲಯಗಳಲ್ಲಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವಂತೆ ಸಂಸದರ ಕೋಟಾದಡಿಯ ಪ್ರವೇಶಾತಿ ರದ್ದುಗೊಳಿಸಲಾಗಿದೆ. ಇದಲ್ಲದೇ ಇತರೆ ಹಲವು ವಿವೇಚನಾ ಕೋಟಾಗಳನ್ನೂ ರದ್ದು ಮಾಡಿ ಕೇಂದ್ರೀಯ ವಿದ್ಯಾಲಯ ಸಂಘಟನೆ ಪರಿಷ್ಕೃತ ದಾಖಲಾತಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದುವರೆಗಿನ ಮಾರ್ಗಸೂಚಿ ಅನ್ವಯ, ಯಾವುದೇ ಸಂಸದರು ತಲಾ 10 ವಿದ್ಯಾರ್ಥಿಗಳ ಹೆಸರನ್ನು ಶಿಫಾರಸು ಮಾಡಬಹುದಿತ್ತು. ಆದರೆ ಅದನ್ನು ಇದೀಗ ರದ್ದುಪಡಿಸಲಾಗಿದೆ. ಇದರ ಜೊತೆಗೆ ಶಿಕ್ಷಣ ಸಚಿವಾಲಯದ ಸಿಬ್ಬಂದಿ, ಸಂಸದರ ಅವಲಂಬಿತ ಮಕ್ಕಳು ಮತ್ತು ಮೊಮ್ಮಕ್ಕಳು, ನಿವೃತ್ತ ಸಿಬ್ಬಂದಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರ ಕೋಟಾವನ್ನು ಕೂಡ ರದ್ದುಪಡಿಸಲಾಗಿದೆ.

ಆದರೆ ಪರಮವೀರ ಚಕ್ರ, ಮಹಾವೀರ ಚಕ್ರ, ವೀರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರ, ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪುರಸ್ಕೃತರು, ರಾ ಸಿಬ್ಬಂದಿ ಮಕ್ಕಳ, ಕರ್ತವ್ಯದ ವೇಳೆ ಮೃತ ಕೇಂದ್ರ ನೌಕರರ ಮಕ್ಕಳು, ಕಲೆಯಲ್ಲಿ ವಿಶೇಷ ಪ್ರತಿಭೆ ಹೊಂದಿರುವವರ ಮಕ್ಕಳ ಕೋಟಾ ಮುಂದುವರೆಸಲಾಗಿದೆ.

ಇನ್ನು ಕೋವಿಡ್‌ನಿಂದ ಪೋಷಕರ ಕಳೆದುಕೊಂಡ ಮಕ್ಕಳಿಗೆ ಪ್ರವೇಶದಲ್ಲಿ ಆದ್ಯತೆ ನೀಡಬೇಕು. ಪ್ರತಿ ಶಾಲೆಯಲ್ಲೂ ಇಂಥ 10 ಮಕ್ಕಳಿಗೆ ಅವಕಾಶ ನೀಡಬೇಕು. ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗರಿಷ್ಠ ಮಟ್ಟಮುಟ್ಟಿದ್ದರೂ, ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ಇಂಥ ಪಟ್ಟಿಯನ್ನು ಆಯಾ ಜಿಲ್ಲಾಧಿಕಾರಿಗಳು ಸಿದ್ಧಪಡಿಸಲಿದ್ದಾರೆ ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.