ಬಿಟ್‌ಕಾಯಿನ್‌ ತನಿಖೆಗೆ ಭಾರತಕ್ಕೆ ಎಫ್‌ಬಿಐ ಬಂದಿಲ್ಲ ನಿಖೆಗಾಗಿ ಅಮೆರಿಕದಿಂದ ಕೋರಿಕೆಯೂ ಬಂದಿಲ್ಲ ಇಂತಹ ವರದಿಗಳು ಊಹಾತ್ಮಕ, ಆಧಾರವಿಲ್ಲದ್ದು  

ನವದೆಹಲಿ(ಏ.11): ಕರ್ನಾಟಕ ರಾಜಕಾರಣದಲ್ಲಿ (Karnataka Politics) ಭಾರಿ ಸಂಚಲನ ಮೂಡಿಸಿದ್ದ ಹಾಗೂ ಈಗಾಗಲೇ ಕರ್ನಾಟಕ ಪೊಲೀಸರು ತನಿಖೆ ನಡೆಸುತ್ತಿರುವ ಬಿಟ್‌ಕಾಯಿನ್‌ (Bitcoin) ಪ್ರಕರಣದ ಕುರಿತು ತನಿಖೆ ನಡೆಸಲು ಅಮೆರಿಕದ ಕೇಂದ್ರೀಯ ತನಿಖಾ ದಳ ಎಫ್‌ಬಿಐ (FBI) ತಂಡವೊಂದು ಭಾರತಕ್ಕೆ ಆಗಮಿಸಿದೆ ಎಂಬ ವರದಿಗಳನ್ನು ಸಿಬಿಐ (CBI) ಅತ್ಯಂತ ಸ್ಪಷ್ಟವಾಗಿ ನಿರಾಕರಿಸಿದೆ. ‘ಇಂತಹ ವರದಿಗಳು ಊಹಾತ್ಮಕವಾದುವು ಹಾಗೂ ಯಾವುದೇ ಆಧಾರ ಇಲ್ಲದಂಥವು’ ಎಂದು ಹೇಳಿದೆ.

‘ಬಿಟ್‌ಕಾಯಿನ್‌ ಕುರಿತು ತನಿಖೆ ನಡೆಸಲು ಎಫ್‌ಬಿಐ ತನ್ನ ತಂಡವನ್ನು ಭಾರತಕ್ಕೆ (India) ಕಳುಹಿಸಿಲ್ಲ ಅಥವಾ ತನಿಖೆಗೆ ಅನುಮತಿ ಕೋರಿ ಎಫ್‌ಬಿಐ ಈವರೆಗೆ ತನ್ನ ಬಳಿ ಯಾವುದೇ ಕೋರಿಕೆಯನ್ನೂ ಇಟ್ಟಿಲ್ಲ. ಹೀಗಾಗಿ ತನಿಖೆಗೆ ಅನುಮತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸಿಬಿಐ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದೆ. ಬಿಟ್‌ಕಾಯಿನ್‌ ಹಗರಣದ ತನಿಖೆ ನಡೆಸಲು ಎಫ್‌ಬಿಐ ಭಾರತಕ್ಕೆ ಬಂದಿದೆಯೇ ಎಂದು ಕಾಂಗ್ರೆಸ್‌(Congress Leader) ನಾಯಕರು ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಸಿಬಿಐನಿಂದ ಸ್ಪಷ್ಟನೆ ಬಿಡುಗಡೆಯಾಗಿದೆ.

Bitcoinನಂಥ ಕ್ರಿಪ್ಟೋಕರೆನ್ಸಿಗೆ ಮಾನ್ಯತೆ ಇಲ್ಲ, ನಿಯಂತ್ರಣಕ್ಕೆ ಶೀಘ್ರ ಮಸೂದೆ

ಅಂತಾರಾಷ್ಟ್ರೀಯ ಪೊಲೀಸ್‌ ಸಂಸ್ಥೆಯಾಗಿರುವ ಇಂಟರ್‌ಪೋಲ್‌ಗೆ (InterPol) ಭಾರತದಲ್ಲಿ ಸಿಬಿಐ ಸಂಸ್ಥೆ ರಾಷ್ಟ್ರೀಯ ಕೇಂದ್ರೀಯ ದಳವಾಗಿದೆ. ಎಫ್‌ಬಿಐ ಸೇರಿದಂತೆ ಅಂತಾರಾಷ್ಟ್ರೀಯ ಕಾನೂನುಪಾಲನಾ ಸಂಸ್ಥೆಗಳ ಜತೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಿಬಿಐ ವಕ್ತಾರ ಆರ್‌.ಸಿ. ಜೋಶಿ (R C Joshi) ಹೇಳಿದ್ದಾರೆ.

ಶತಕೋಟಿ ಡಾಲರ್‌ ಬಿಟ್‌ಕಾಯಿನ್‌ ತನಿಖೆ ನಡೆಸಲು ಎಫ್‌ಬಿಐ ದೆಹಲಿಗೆ (Delhi) ಬಂದಿದೆ ಎನ್ನಲಾಗಿದೆ. ಬಿಜೆಪಿಯ (BJP) ಹಲವು ಸಂಗತಿಗಳು ಹೊರಬರಲಿವೆ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ (Priyanka Kharge) ಟ್ವೀಟ್‌ ಮಾಡಿದ್ದರು. ಬಿಟ್‌ಕಾಯಿನ್‌ ಹಗರಣದ ಪದರಗಳು ಕೊನೆಗೂ ಬಯಲಾಗುತ್ತಿವೆ ಎಂದು ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ ರಣದೀಪ್‌ ಸುರ್ಜೇವಾಲಾ (Ranadeep surjewala)ಕೂಡ ಟ್ವೀಟ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ ಸ್ಪಷ್ಟನೆ ನೀಡಿದೆ.

Bitcoin: ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ನೀಡಲ್ಲ: ಕೇಂದ್ರ

ಡ್ರಗ್ಸ್‌ (Drugs) ಹಾಗೂ ಬಿಟ್‌ ಕಾಯಿನ್‌ (Bitcoin) ದಂಧೆಯಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳೂ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಕಳೆದ ವರ್ಷ ಪ್ರತಿಪಕ್ಷ ಕಾಂಗ್ರೆಸ್‌ (Congress) ಆಗ್ರಹಿಸಿತ್ತು. ಡ್ರಗ್ಸ್‌ ಹಾಗೂ ಬಿಟ್‌ ಕಾಯಿನ್‌ ಹಗರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳಿದ್ದಾರೆ ಎಂಬ ಮಾಹಿತಿ ಇದೆ. ಇದೇ ಕಾರಣಕ್ಕೆ ತನಿಖಾಧಿಕಾರಿಗಳು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬ ವರದಿ ಕಳವಳಕಾರಿಯಾದುದು. ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ಕೇಂದ್ರ ಬಿಜೆಪಿ ಸರ್ಕಾರ ಪ್ರಭಾವ ಬೀರಿ ತನಿಖೆಯ ಹಾದಿ ತಪ್ಪಿಸದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು.

ಹಲವು ಸಂಸ್ಥೆಗಳು ಡಿಜಿಟಲ್‌ ಕರೆನ್ಸಿ ಸೇವೆಯನ್ನು ವಿಶ್ವದಲ್ಲಿ ಒದಗಿಸುತ್ತಿವೆ. ಅದರಲ್ಲಿ ಬಿಟ್‌ಕಾಯಿನ್‌ ಭಾರಿ ಜನಪ್ರಿಯವಾಗಿದೆ. ಗೂಢಲಿಪಿ ತಂತ್ರ ಆಧರಿಸಿ ಡಿಜಿಟಲ್‌ ಕರೆನ್ಸಿಯ ಮೌಲ್ಯ ಹಾಗೂ ವರ್ಗಾವಣೆಯನ್ನು ನಿಯಂತ್ರಿಸಲಾಗುತ್ತದೆ. ಈ ಸೇವೆ ಬಗ್ಗೆ ಹಲವು ರಾಷ್ಟ್ರಗಳಲ್ಲಿ ಕಳವಳವಿದೆ. ಆದರೆ ಜಪಾನ್‌ ಮಾತ್ರ ಇದಕ್ಕೆ ಕಾನೂನಿನ ಮಾನ್ಯತೆ ನೀಡಿದೆ.

2013ರಿಂದಲೂ ಡಿಜಿಟಲ್‌ ಕರೆನ್ಸಿ ಬಗ್ಗೆ ಆರ್‌ಬಿಐ ಎಚ್ಚರಿಕೆ ನೀಡುತ್ತಲೇ ಬಂದಿತ್ತು. ಇದನ್ನು ಆರಂಭದಲ್ಲೇ ಚಿವುಟಿ ಹಾಕಬೇಕು. ಇಲ್ಲದೇ ಹೋದಲ್ಲಿ ಆರ್ಥಿಕತೆ ಅಪಾಯವಾಗಬಹುದು ಎಂದು ಹೇಳಿಕೊಂಡು ಬಂದಿತ್ತು. 2018ರ ಏ.6ರಂದು ಸುತ್ತೋಲೆ ಹೊರಡಿಸಿದ್ದ ಆರ್‌ಬಿಐ, ಬಿಟ್‌ಕಾಯಿನ್‌ನಂತಹ ಡಿಜಿಟಲ್‌ ಕರೆನ್ಸಿ ಸೇವಾ ಸಂಸ್ಥೆಗಳಿಗೆ ಯಾವುದೇ ರೀತಿಯ ಸೇವೆಗಳನ್ನು ಒದಗಿಸದಂತೆ ಬ್ಯಾಂಕುಗಳು ಹಾಗೂ ಹಣಕಾಸು ಸೇವಾ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.

ಆದರೆ ಈ ಕ್ರಮದ ವಿರುದ್ಧ ಭಾರತೀಯ ಇಂಟರ್ನೆಟ್‌ ಹಾಗೂ ಮೊಬೈಲ್‌ ಸಂಘ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ವರ್ಚುವಲ್‌ ಕರೆನ್ಸಿ ಮೂಲಕ ತಾವು ಕಾನೂನುಬದ್ಧವಾಗಿ ಉದ್ಯಮ ಚಟುವಟಿಕೆಗಳನ್ನು ಪರಿಣಾಮಕಾರಿಯನ್ನು ನಡೆಸುತ್ತಿದ್ದೇವೆ. ಇದೇನು ನೈಜ ಕರೆನ್ಸಿ ಏನಲ್ಲ. ಒಂದು ರೀತಿ ಸರಕು ಇದ್ದಂತೆ. ಡಿಜಿಟಲ್‌ ಕರೆನ್ಸಿಗೆ ನಿಷೇಧ ಹೇರುವ ಕಾನೂನೇ ದೇಶದಲ್ಲಿಲ್ಲ. ಹೀಗಾಗಿ ನಿಷೇಧ ಹೇರುವ ಅಧಿಕಾರ ಆರ್‌ಬಿಐಗೆ ಇಲ್ಲ ಎಂದು ವಾದಿಸಿತ್ತು.