ಪ್ರತೀಕ್‌ ದೋಶಿ ಗುಜರಾತ್‌ ಮೂಲದವರಾಗಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಿ ಮೋದಿ ನೆಚ್ಚಿನ ಅಧಿಕಾರಿಗಳಲ್ಲಿ ಇವರೂ ಒಬ್ಬರು ಎನ್ನಲಾಗಿದೆ.

ಬೆಂಗಳೂರು (ಜೂನ್ 9, 2023): ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಪರಕಾಲ ವಾಙ್ಮಯಿ - ಪ್ರತೀಕ್ ದೋಶಿ ಅವರನ್ನು ವಿವಾಹವಾಗಿದ್ದಾರೆ. ಆಪ್ತ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದ ವಿವಾಹದಲ್ಲಿ ಯಾವುದೇ ರಾಜಕೀಯ ನಾಯಕರು ಸಹ ಭಾಗಿಯಾಗಿಲ್ಲ ಎಂದು ವರದಿಗಳು ಹೇಳುತ್ತಿವೆ. ಅಷ್ಟು ಸರಳವಾಗಿ ಈ ವಿವಾಹ ಸಮಾರಂಭ ನಡೆದಿದೆ.

ಆದರೂ ಈ ಸಮಾರಂಭದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ಇದೇ ರೀತಿ ವೈರಲ್‌ ಆದ ವಿಡಿಯೋವೊಂದರಲ್ಲಿ ನಿರ್ಮಲಾ ಸೀತಾರಾಮನ್‌ ವಧುವಿನ ಹಿಂದೆ ನಿಂತಿದ್ದು, ಮೊಳಕಾಲ್ಮೂರು ಸೀರೆಯುಟ್ಟು ಮಿಂಚಿದ್ದಾರೆ. ಉಡುಪಿಯ ಅದಮಾರು ಮಠದ ಬ್ರಾಹ್ಮಣ ಸಂಪ್ರದಾಯ ಪ್ರಕಾರ ಈ ವಿವಾಹ ನೆರವೇರಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಮಗಳ ಮದುವೆಯಲ್ಲಿ ಮೊಳಕಾಲ್ಮೂರು ಸೀರೆಯುಟ್ಟ ಸಚಿವೆ ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್‌ ಅಳಿಯ ಯಾರು ಗೊತ್ತಾ..?
ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಪರಕಾಲ ವಾಙ್ಮಯಿ ದಿ ಹಿಂದೂ ಪತ್ರಿಕೆಯ ಮಾಜಿ ಬರಹಗಾರ್ತಿ ಮತ್ತು ಪ್ರಸ್ತುತ ಮಿಂಟ್ ಲೌಂಜ್‌ನಲ್ಲೂ ಅನೇಕ ಲೇಖನಗಳನ್ನು ಬರೆದಿದ್ದಾರೆ. ಮಿಂಟ್ ಲೌಂಜ್‌ನ ಪುಸ್ತಕಗಳು ಮತ್ತು ಸಂಸ್ಕೃತಿ ವಿಭಾಗಕ್ಕೆ ವೈಶಿಷ್ಟ್ಯ ಲೇಖಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ವಿಭಾಗದಿಂದ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ ಮತ್ತು ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಮೆಡಿಲ್ ಸ್ಕೂಲ್ ಆಫ್ ಜರ್ನಲಿಸಂನಿಂದ ಪತ್ರಿಕೋದ್ಯಮದಲ್ಲಿ MS ಪದವಿ ಪಡೆದಿದ್ದಾರೆ.

ಇನ್ನೊಂದೆಡೆ, ಇವರ ಪತಿ ಗುಜರಾತ್‌ ಮೂಲದವರಾಗಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಿ ಮೋದಿ ನೆಚ್ಚಿನ ಅಧಿಕಾರಿಗಳಲ್ಲಿ ಇವರೂ ಒಬ್ಬರು ಎನ್ನಲಾಗಿದೆ. ಸದ್ಯ, ಪ್ರಧಾನಿ ನರೇಂದ್ರ ಮೋದಿಯ ಪ್ರಮುಖ ಸಹಾಯಕರಾಗಿ ಪ್ರತೀಕ್‌ ದೋಶಿ ಕೆಲಸ ಮಾಡುತ್ತಿದ್ದು, ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗಲೂ ಅವರು ಸಿಎಂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ರು ಎಂದು ಹಲವು ಮೂಲಗಳು ತಿಳಿಸಿವೆ. 

ಇದನ್ನೂ ಓದಿ: ಬಿಜೆಪಿ ಸರ್ಕಾರದಲ್ಲಿ ರಾಜ್ಯ ಹೆಚ್ಚು ಅಭಿವೃದ್ಧಿ ಆಗಿದೆ; ಕಾಂಗ್ರೆಸ್ ಅವಧಿಯಲ್ಲಿ ರೈತರ ಆತ್ಮಹತ್ಯೆ ಅಧಿಕ: ನಿರ್ಮಲಾ ಸೀತಾರಾಮನ್

PMO ವೆಬ್‌ಸೈಟ್‌ನ ಪ್ರಕಾರ ಪ್ರತೀಕ್ ದೋಶಿ, ವಿಶೇಷ ಕರ್ತವ್ಯದ (OSD) ಅಧಿಕಾರಿಯಾಗಿದ್ದು, ಅವರು ಸಂಶೋಧನೆ ಮತ್ತು ಕಾರ್ಯತಂತ್ರ ವಿಭಾಗದಲ್ಲಿ ಮಹತ್ವದ ಪಾತ್ರವನ್ನು ಹೊಂದಿದ್ದಾರೆ. 1961 ರ ಭಾರತ ಸರ್ಕಾರದ (ವ್ಯವಹಾರದ ಹಂಚಿಕೆ) ನಿಯಮಗಳಿಗೆ ಅನುಸಾರವಾಗಿ ಸಂಶೋಧನೆ ಮತ್ತು ಕಾರ್ಯತಂತ್ರದಂತಹ ವಿಷಯಗಳಲ್ಲಿ ಪ್ರಧಾನ ಮಂತ್ರಿಗೆ ಕಾರ್ಯದರ್ಶಿಯ ಸಹಾಯವನ್ನು ಒದಗಿಸುವುದು ಇವರ ಕೆಲಸ. 

ಅಂದ ಹಾಗೆ, ಪ್ರತೀಕ್ ದೋಶಿ ಸಿಂಗಾಪುರ ಮ್ಯಾನೇಜ್‌ಮೆಂಟ್ ಸ್ಕೂಲ್‌ನಿಂದ ಪದವೀಧರರಾಗಿದ್ದು, ಅವರು ಈ ಹಿಂದೆ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗುಜರಾತ್ ಮುಖ್ಯಮಂತ್ರಿ ಕಚೇರಿಯಲ್ಲಿ (CMO) ಸಂಶೋಧನಾ ಸಹಾಯಕರಾಗಿ ಸೇವೆ ಸಲ್ಲಿಸಿದ್ದರು. 2014 ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಸ್ಥಾನವನ್ನು ವಹಿಸಿಕೊಂಡ ನಂತರ, ಜೂನ್ 2019 ರಲ್ಲಿ ಪ್ರತೀಕ್‌ ದೋಶಿಗೆ ಜಂಟಿ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಲಾಯಿತು ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ವಿಶ್ವ ಆರ್ಥಿಕ ಪ್ರಗತಿಯಲ್ಲಿ ಭಾರತದ ಪಾಲು ಶೇ. 15: ಐಎಂಎಫ್‌ ಮೆಚ್ಚುಗೆ; ಕೇಂದ್ರ ಬಜೆಟ್‌ಗೂ ಶ್ಲಾಘನೆ

ಕುತೂಹಲಕಾರಿಯಾಗಿ, ಪ್ರತೀಕ್ ದೋಶಿ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯವಾಗಿಲ್ಲ. ಇನ್ನೊಂದೆಡೆ, 20 ಮೇ 1991 ರಂದು ಚೆನ್ನೈನಲ್ಲಿ ಜನಿಸಿದ ಪರಕಾಲ ವಾಙ್ಮಯಿ ಕೂಡ ಸಾರ್ವಜನಿಕರ ಕಣ್ಣಿನಿಂದ ದೂರವೇ ಉಳಿದಿದ್ದಾರೆ.

ಇದನ್ನೂ ಓದಿ: ಡೆಟಾಲ್‌ನಿಂದ ಮುಖ ತೊಳೆಯಿರಿ: ಕಾಂಗ್ರೆಸ್‌ಗೆ ನಿರ್ಮಲಾ ಸೀತಾರಾಮನ್‌ ಚಾಟಿ