ಭ್ರಷ್ಟಾಚಾರದ ಬಗ್ಗೆ ನೀವು ಮಾತನಾಡುತ್ತಿದ್ದೀರಿ. ಅದಕ್ಕೂ ಮುನ್ನ ಡೆಟಾಲ್‌ನಿಂದ ನಿಮ್ಮ ಮುಖ ತೊಳೆದುಕೊಳ್ಳಿ ಎಂದು ಕಾಂಗ್ರೆಸ್‌ಗೆ ನಿರ್ಮಲಾ ಸೀತಾರಾಮನ್‌ ತಿರುಗೇಟು ನೀಡಿದರು.

ನವದೆಹಲಿ (ಫೆಬ್ರವರಿ 11, 2023): ‘ಯುಪಿಎ ಸರ್ಕಾರ ತೈಲ ಬಾಂಡ್‌ಗಳ ರೂಪದಲ್ಲಿ ಸಾಲದ ಪಾಪ ಮಾಡಿ ಹೋಗಿತ್ತು. ಅದನ್ನು ತೀರಿಸುತ್ತಿದ್ದೇವೆ’ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಉತ್ತರಿಸಿ ಮಾತನಡಿದ ಅವರು, ‘ಕಚ್ಚಾತೈಲ ದರ ಏರಿದರೂ ದೇಶದಲ್ಲಿ ತೈಲದರ ಏರಿಸದಂತೆ ತೈಲ ಕಂಪನಿಗಳಿಗೆ ಯುಪಿಎ ಸರ್ಕಾರ ಸೂಚಿಸಿತ್ತು. ಇದರ ನಷ್ಟ ಭರಿಸಿಕೊಡಲು ತೈಲ ಬಾಂಡ್‌ಗಳನ್ನು ಸರ್ಕಾರ ನೀಡಿತ್ತು. 1.71 ಲಕ್ಷ ಕೋಟಿ ರೂ. ತೈಲ ಬಾಂಡ್‌ ಅನ್ನು ನೀಡಲಾಗಿತ್ತು. ಇದರ ಬಡ್ಡಿ ಸೇರಿ 2.34 ಲಕ್ಷ ಕೋಟಿ ರೂ.ಗಳನ್ನು ಮೋದಿ ಸರ್ಕಾರ ಕಟ್ಟಿದೆ. ಇನ್ನು 1.07 ಲಕ್ಷ ಕೋಟಿ ರೂ. ಬಾಕಿ ಇದೆ. 2025-26 ರೊಳಗೆ ಈ ಬಾಕಿಯೂ ತೀರಲಿದೆ’ ಎಂದರು.

Add Asianetnews Kannada as a Preferred SourcegooglePreferred

ಈ ನಡುವೆ ‘ಹೊಸ ತೆರಿಗೆ ಪದ್ಧತಿಯ (New Tax Regime) ಅನುಸಾರ ಆದಾಯ ತೆರಿಗೆ (Income Tax) ಪಾವತಿ ಮಿತಿಯನ್ನು 7 ಲಕ್ಷ ರೂ. ಗೆ ಹೆಚ್ಚಿಸಲಾಗಿದ್ದು, ಇದು ಜನರ ಬಳಿ ಹೆಚ್ಚು ಹಣವನ್ನು ಉಳಿಸುತ್ತದೆ. ಇದರಿಂದಾಗಿ ಮಧ್ಯಮ ವರ್ಗಕ್ಕೆ (Middle Class) ಹೆಚ್ಚಿನ ಅನುಕೂಲವಾಗಲಿದೆ’ ಎಂದು ನಿರ್ಮಲಾ ಸೀತಾರಾಮನ್‌ (Nirmala Sitharaman) ಹೇಳಿದರು. 

ಇದನ್ನು ಓದಿ: ಅದಾನಿ ಕೇಸಿಂದ ಆರ್ಥಿಕತೆಗೆ ಪೆಟ್ಟಿಲ್ಲ: ನಿರ್ಮಲಾ ಸೀತಾರಾಮನ್‌; ಮೋದಿಗೆ 3 ಪ್ರಶ್ನೆ ಕೇಳಿದ ಕಾಂಗ್ರೆಸ್‌

ಡೆಟಾಲ್‌ನಿಂದ ಮುಖ ತೊಳೆಯಿರಿ: ಕಾಂಗ್ರೆಸ್‌ಗೆ ಚಾಟಿ
‘ಸರ್ಕಾರ ಭ್ರಷ್ಟಾಚಾರ ನಡೆಸಿದೆ’ ಎಂದು ಆರೋಪ ಮಾಡಿದ ಕಾಂಗ್ರೆಸ್ಸನ್ನು (Congress) ತರಾಟೆಗೆ ತೆಗೆದುಕೊಂಡ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ‘ಭ್ರಷ್ಟಾಚಾರದ (Corruption) ಬಗ್ಗೆ ನೀವು ಮಾತನಾಡುತ್ತಿದ್ದೀರಿ. ಅದಕ್ಕೂ ಮುನ್ನ ಡೆಟಾಲ್‌ನಿಂದ ನಿಮ್ಮ ಮುಖ ತೊಳೆದುಕೊಳ್ಳಿ’ ಎಂದು ತಿರುಗೇಟು ನೀಡಿದರು. ‘ಅದಾನಿ ಸಮೂಹಕ್ಕೆ ಅನುಕೂಲ ಮಾಡಲಾಗಿದೆ’ ಎಂಬ ಕಾಂಗ್ರೆಸ್‌ ಆರೋಪಕ್ಕೆ ಉತ್ತರಿಸಿದ ನಿರ್ಮಲಾ ಸೀತಾರಾಮನ್‌, ‘ಇದು ಅಳಿಯನಿಗೆ ನೆರವು ನೀಡುವ ಕಾಂಗ್ರೆಸ್‌ ಅಲ್ಲ’ ಎಂದರು. 

ಇದನ್ನೂ ಓದಿ: ಅದಾನಿ ಸಮೂಹದ ಬಗ್ಗೆ ಮಾರುಕಟ್ಟೆ ನಿಯಂತ್ರಕರ ನಿಗಾ; ದೇಶದ ಇಮೇಜ್‌ಗೆ ಧಕ್ಕೆ ಇಲ್ಲ: ನಿರ್ಮಲಾ ಸೀತಾರಾಮನ್