ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾಳ ಬಿಡುಗಡೆಗೆ ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಮಧ್ಯಸ್ಥಿಕೆ ವಹಿಸಿದ್ದಾರೆ. ಶಶಿ ತರೂರ್ ಈ ಪ್ರಯತ್ನವನ್ನು ಶ್ಲಾಘಿಸಿದ್ದು, ಕೇರಳ ಜನತೆ ಯಶಸ್ಸಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಆದರೆ, ತಲಾಲ್ ಕುಟುಂಬ ಕ್ಷಮೆ ನೀಡೊಲ್ಲವೆಂದು ಪಟ್ಟು ಹಿಡಿದಿದೆ.

ದೆಹಲಿ (ಜು.17) : ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾಳ ಬಿಡುಗಡೆಗೆ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ನಡೆಸುತ್ತಿರುವ ಪ್ರಯತ್ನಗಳನ್ನು ಶಶಿ ತರೂರ್ ಶ್ಲಾಘಿಸಿದ್ದಾರೆ. ಕಾಂತಪುರಂರವರ ಮಧ್ಯಸ್ಥಿಕೆ ಹೊಸ ಭರವಸೆ ಮೂಡಿಸಿದೆ. ಈ ಪ್ರಯತ್ನ ಯಶಸ್ವಿಯಾಗಲಿ ಎಂದು ಕೇರಳ ಜನತೆ ಪ್ರಾರ್ಥಿಸುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿರುವಾಗ ಕಾಂತಪುರಂರವರು ಒಂದು ಶಕ್ತಿಯುತ ಸಂದೇಶ ನೀಡಿದ್ದಾರೆ ಎಂದು ಶಶಿ ತರೂರ್ ಎನ್‌ಡಿಟಿವಿ ಲೇಖನದಲ್ಲಿ ಬರೆದಿದ್ದಾರೆ. ನಿಮಿಷಾಳ ಬಿಡುಗಡೆಗೆ ಸೂಕ್ತ ಮತ್ತು ಬಲಿಷ್ಠ ರಾಜತಾಂತ್ರಿಕ ಮಧ್ಯಸ್ಥಿಕೆ ಅಗತ್ಯ. ಕೇಂದ್ರ ಸರ್ಕಾರ ಮತ್ತು ಇತರ ಸಂಘಟನೆಗಳು ಅವರ ಬಿಡುಗಡೆಗೆ ಶ್ರಮಿಸುತ್ತಿವೆ ಎಂದು ತರೂರ್ ಹೇಳಿದ್ದಾರೆ.

ಇದೇ ವೇಳೆ, ನಿಮಿಷಾ ಬಿಡುಗಡೆಯ ಬಗ್ಗೆ ಆಶಾವಾದ ವ್ಯಕ್ತಪಡಿಸಿರುವ ಮಧ್ಯಸ್ಥಿಕೆ ತಂಡ, ಕೊಲೆಯಾದ ತಲಾಲ್ ಕುಟುಂಬದವರನ್ನು ಮತ್ತೆ ಭೇಟಿಯಾಗಿದ್ದಾಗಿ ತಿಳಿಸಿದೆ. ಸಂಬಂಧಪಟ್ಟ ಸಮುದಾಯದ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಾಗಿದೆ. ಮುಂದಿನ ಚರ್ಚೆಗಳ ಮೂಲಕ ಒಪ್ಪಂದಕ್ಕೆ ಬರಬಹುದು ಎಂಬ ವಿಶ್ವಾಸವಿದೆ ಎಂದು ಮಧ್ಯಸ್ಥಿಕೆ ತಂಡ ಹೇಳಿದೆ. ಆದರೆ, ನಿಮಿಷಾಗೆ ಕ್ಷಮೆ ನೀಡುವುದಿಲ್ಲ ಎಂದು ತಲಾಲ್‌ನ ಸಹೋದರ ನಿನ್ನೆ ತಿಳಿಸಿದ್ದಾರೆ. ಕ್ಷಮೆ ನೀಡುವುದಿಲ್ಲ ಎಂದು ಈ ಹಿಂದೆಯೇ ಹೇಳಿದ್ದ ಸಹೋದರ ಅಬ್ದುಲ್ ಫತ್ತಾಹ್ ಮೆಹದಿ, ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಮರಣದಂಡನೆಯನ್ನು ಮುಂದೂಡುವ ಆದೇಶ ಹೊರಬಿದ್ದ ಬಳಿಕ ತಲಾಲ್‌ನ ಸಹೋದರ ಅಬ್ದುಲ್ ಫತ್ತಾಹ್ ಮೆಹದಿ ಪ್ರತಿಕ್ರಿಯೆ ನೀಡಿದ್ದಾರೆ. ನಡೆದಿದ್ದು ಕ್ರೂರ ಕೊಲೆ, ತಪ್ಪು ಸಾಬೀತಾಗಿರುವ ಪ್ರಕರಣದಲ್ಲಿ ಶಿಕ್ಷೆ ನೀಡಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮರಣದಂಡನೆ ಬಿಟ್ಟು ಬೇರೆ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮಗೆ ಕೊಲೆ ಮಾಡಿದ್ದ ಮಹಿಳೆಯ ವಿರುದ್ಧ ಪ್ರತೀಕಾರವೇ ಮುಖ್ಯವಾಗಿದೆ ಎಂದು ಕೋರ್ಟ್ ಮುಂದೆ ಪಟ್ಟು ಹಿಡಿದಿದ್ದಾರೆ.

ಕೊಲೆ ಮಾತ್ರವಲ್ಲ, ವರ್ಷಗಳ ಕಾಲ ನಡೆದ ನ್ಯಾಯಾಂಗ ಕ್ರಮಗಳು ಕುಟುಂಬಕ್ಕೆ ತೊಂದರೆ ಕೊಟ್ಟಿವೆ. ಭಾರತೀಯ ಮಾಧ್ಯಮಗಳು ವಿಷಯವನ್ನು ತಿರುಚಿ ವರದಿ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಎಷ್ಟೇ ವಾದ ಇದ್ದರೂ ಕ್ರೂರ ಕೊಲೆಗೆ ಸಮರ್ಥನೆ ಇಲ್ಲ ಎಂದು ಸಹೋದರ ಹೇಳಿದ್ದಾರೆ. ಮರಣದಂಡನೆಯನ್ನು ಮುಂದೂಡುವ ಮುನ್ನ ಬಿಬಿಸಿಗೆ ಪ್ರತಿಕ್ರಿಯೆ ನೀಡಿದ್ದರು. ಮರಣದಂಡನೆ ನೀಡಬೇಕೆಂದು ಒತ್ತಾಯಿಸಿ ಯೆಮೆನ್‌ನಲ್ಲಿ ಒಂದು ಗುಂಪು ಪ್ರಚಾರ ನಡೆಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಈ ಪ್ರಚಾರ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಆತಂಕವಿದೆ.

ಕಾಂತಪುರಂ ಅಬೂಬಕರ್ ಯಾರು? ಹಿನ್ನೆಲೆಯೇನು?

ಕೇರಳದ 94 ವರ್ಷದ ಮುಸ್ಲಿಂ ಧಾರ್ಮ ಗುರು ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಪೂರ್ಣ ಹೆಸರು ಶೇಖ್ ಅಬು ಬಕರ್ ಅಹ್ಮದ್. ಇವರನ್ನು 'ಭಾರತದ ಗ್ರ್ಯಾಂಡ್ ಮುಫ್ತಿ' ಎಂದು ಕರೆಯಲಾಗುತ್ತದೆ. ಕೇರಳದ ಮುಸ್ಲಿಮರಲ್ಲಿ ಈ ಬಿರುದು ಹೊಂದಿರುವ ಧರ್ಮಗುರುಗಳನ್ನು ಅತ್ಯಂತ ಗೌರವವಾಗಿ ನೋಡಲಾಗುತ್ತದೆ. ರಾಜತಾಂತ್ರಿಕವಾಗಿ ಕಷ್ಟಕರ ಕೆಲಸಗಳನ್ನ ಅಬೂಬಕರ್ ಮುಸ್ಲಿಯಾರ್ ಮಾಡಿದ್ದು, ಯೆಮೆನ್‌ನ ಹೌತಿ ನಿಯಂತ್ರಿತ ಪ್ರದೇಶದಲ್ಲಿರುವ ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಲು ಯಶಸ್ವಿಯಾಗಿದ್ದಾರೆ. ಸದ್ಯ ಕೇರಳದ ಕೋಝಿಕ್ಕೋಡ್‌ನಲ್ಲಿ ವಾಸವಾಗಿರುವ ಅಬೂಬಕರ್ ಮುಸ್ಲಿಯಾರ್, ಅಖಿಲ ಭಾರತ ಸುನ್ನಿ ಜಮಿಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ದಕ್ಷಿಣ ಏಷ್ಯಾದ ಸುನ್ನಿ ಮುಸ್ಲಿಮರ ಪ್ರಮುಖ ಧರ್ಮಗುರಗಳಲ್ಲಿ ಒಬ್ಬರಾಗಿದ್ದಾರೆ. ಮರ್ಕಜ್ ಜ್ಞಾನ ನಗರದ ಅಧ್ಯಕ್ಷರಾಗಿರುವ ಇವರು, ಇಸ್ಲಾಮಿಕ್ ಸಂಪ್ರದಾಯವನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸುವ ಕೆಲಸವನ್ನೂ ಕೂಡ ಮಾಡುತ್ತಿದ್ದಾರೆ.