Asianet Suvarna News Asianet Suvarna News

ಬಾಂಗ್ಲಾದ ಮಾನವ ಸ್ಮಗ್ಲರ್ಸ್‌ ವಿರುದ್ಧ ಎನ್‌ಐಎ ಭರ್ಜರಿ ಬೇಟೆ: ಕರ್ನಾಟಕ ಸೇರಿದಂತೆ ದೇಶದ 8 ರಾಜ್ಯಗಳಲ್ಲಿ ರೇಡ್‌

ಬಿಎಸ್‌ಎಫ್‌ ಮತ್ತು ಸ್ಥಳೀಯ ಪೊಲೀಸರ ಸಹಯೋಗದಲ್ಲಿ ಏಕಕಾಲಕ್ಕೆ ಎನ್‌ಐಎ ಈ ಕಾರ್ಯಾಚರಣೆಯನ್ನು ಕೈಗೊಂಡಿದ್ದು, 55 ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ಮಾನವ ಕಳ್ಳಸಾಗಣೆ ಜಾಲಗಳು ಭಾರತ - ಬಾಂಗ್ಲಾದೇಶ ಗಡಿಯಲ್ಲಿ ಅಕ್ರಮ ವಲಸಿಗರು ದೇಶ ಪ್ರವೇಶಿಸುವಂತೆ ಮಾಡಲು ಸಹಾಯ ಮಾಡುತ್ತಿದ್ದವು ಎಂದು ಎನ್‌ಐಎ ಹೇಳಿದೆ.

nia carries out nationwide raids over human trafficking cases ash
Author
First Published Nov 9, 2023, 8:17 AM IST

ನವದೆಹಲಿ (ನವೆಂಬರ್  9, 2023): ಭಾರತ - ಬಾಂಗ್ಲಾದೇಶ ಗಡಿಯ ಮೂಲಕ ಅಕ್ರಮವಾಗಿ ಗಡಿಯಾಚೆಗಿನ ಜನರನ್ನು ಭಾರತದೊಳಕ್ಕೆ ನುಸುಳಿಸಿ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ದಂಧೆಕೋರರ ವಿರುದ್ಧ ಸಮರ ಸಾರಿರುವ ರಾಷ್ಟ್ರಯ ತನಿಖಾ ದಳ (ಎನ್‌ಐಎ),  ಬುಧವಾರ ಕರ್ನಾಟಕ ಸೇರಿ 8 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿ ನಡೆಸಿದೆ. ಈ ವೇಳೆ 5 ಜಾಲಗಳನ್ನು ಭೇದಿಸಿದ್ದು, ಕರ್ನಾಟಕದಲ್ಲಿ 10 ಸೇರಿ ಒಟ್ಟಾರೆ 44 ಮಂದಿಯನ್ನು ಬಂಧಿಸಿದೆ.

ಬಿಎಸ್‌ಎಫ್‌ ಮತ್ತು ಸ್ಥಳೀಯ ಪೊಲೀಸರ ಸಹಯೋಗದಲ್ಲಿ ಏಕಕಾಲಕ್ಕೆ ಎನ್‌ಐಎ ಈ ಕಾರ್ಯಾಚರಣೆಯನ್ನು ಕೈಗೊಂಡಿದ್ದು, 55 ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ಮಾನವ ಕಳ್ಳಸಾಗಣೆ ಜಾಲಗಳು ಭಾರತ - ಬಾಂಗ್ಲಾದೇಶ ಗಡಿಯಲ್ಲಿ ಅಕ್ರಮ ವಲಸಿಗರು ದೇಶ ಪ್ರವೇಶಿಸುವಂತೆ ಮಾಡಲು ಸಹಾಯ ಮಾಡುತ್ತಿದ್ದವು ಎಂದು ಎನ್‌ಐಎ ಹೇಳಿದೆ. ಕರ್ನಾಟಕ, ತ್ರಿಪುರಾ, ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಹರ್ಯಾಣ, ರಾಜಸ್ಥಾನ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ, ಪುದುಚೇರಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. 

ಇದನ್ನು ಓದಿ: ಬೆಂಗಳೂರಲ್ಲಿ ಬಾಂಗ್ಲಾದ ರೋಹಿಂಗ್ಯಾ ಮುಸ್ಲಿಮರಿಂದ ಉಗ್ರ ಚಟುವಟಿಕೆ: 10 ಕಡೆ ಎನ್‌ಐಎ ದಾಳಿ

ಈ ವೇಳೆ ತ್ರಿಪುರಾದಲ್ಲಿ 21, ಕರ್ನಾಟಕದಲ್ಲಿ 10, ಅಸ್ಸಾಂನಲ್ಲಿ 5, ಪಶ್ಚಿಮ ಬಂಗಾಳದಲ್ಲಿ 3, ತಮಿಳುನಾಡಿನಲ್ಲಿ 2, ಪುದುಚೇರಿ, ತೆಲಂಗಾಣ ಮತ್ತು ಹರ್ಯಾಣದಲ್ಲಿ ತಲಾ ಒಬ್ಬರನ್ನು ಬಂಧಿಸಲಾಗಿದೆ. ಅಲ್ಲದೇ, ಮ್ಯಾನ್ಮಾರ್‌ನ ರೋಹಿಂಗ್ಯಾ ಮುಸ್ಲಿಂ ಎಂದು ಗುರುತಿಸಲಾದ ಜಾಫರ್‌ ಆಲಂ ಸೇರಿದಂತೆ ಹಲವರನ್ನು ಜಮ್ಮು ಕಾಶ್ಮೀರದಲ್ಲಿ ವಶಕ್ಕೆ ಪಡೆಯಲಾಗಿದೆ.
ಈ ದಾಳಿಯ ಸಮಯದಲ್ಲಿ ನಕಲಿ ಆಧಾರ್‌ ಹಾಗೂ ಪಾನ್‌ ಕಾರ್ಡ್‌ಗಳು, ಡಿಜಿಟಲ್‌ ಡಿವೈಸ್‌ಗಳು, 20 ಲಕ್ಷ ರೂ ನಗದು ಮತ್ತು 3 ಲಕ್ಷ ರೂ. ವಿದೇಶಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ. 

ಬೆಂಗಳೂರು, ಗುವಾಹಟಿ, ಚೆನ್ನೈ ಹಾಗೂ ಜೈಪುರದಲ್ಲಿ 4 ಅಕ್ರಮ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಾಗಿದ್ದವು. ಇದನ್ನು ಆಧರಿಸಿ ದಾಳಿ ನಡೆಸಲಾಗಿದೆ. ಇದಕ್ಕೂ ಮೊದಲು ಸೆಪ್ಟೆಂಬರ್ 9 ರಂದು ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದರಲ್ಲಿ ಭಾರತ - ಬಾಂಗ್ಲಾ ಗಡಿಯಲ್ಲಿ ಮ್ಯಾನ್ಮಾರ್‌ನ ರೋಹಿಂಗ್ಯಾ ಮುಸ್ಲಿಮರನ್ನು ಅಕ್ರಮವಾಗಿ ದೇಶಕ್ಕೆ ಕರೆತರುವ ಜಾಲ ಇದೆ ಎಂಬ ದೂರು ಇತ್ತು. 

ಇದನ್ನೂ ಓದಿ: ಕರ್ನಾಟಕ ಸೇರಿ ದೇಶವ್ಯಾಪಿ ದಾಳಿಗೆ ಸಂಚು: 7 ಶಂಕಿತ ಐಸಿಸ್‌ ಉಗ್ರರ ವಿರುದ್ಧ ಚಾರ್ಜ್‌ಶೀಟ್‌

ಬಳಿಕ ಈ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕೈವಾಡ ಇರುವುದರಿಂದ ಅಕ್ಟೋಬರ್‌ 6 ರಂದು ಎನ್‌ಐಎ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಬುಧವಾರದ ದಾಳಿಯ ಬಳಿಕ ಎನ್‌ಐಎ 3 ಹೊಸ ಪ್ರಕಣಗಳನ್ನು ದಾಖಲಿಸಿದ್ದು, ತನಿಖೆ ಮುಂದುವರೆಸಿದೆ ಎಂದು ಎನ್‌ಐಎ ವಕ್ತಾರರು ಹೇಳಿದ್ದಾರೆ. 

ಇದನ್ನೂ ಓದಿ: ಆರೆಸ್ಸೆಸ್ ನಾಯಕರ ಫೋಟೋ ಇಟ್ಕೊಳ್ಳೋದು ಭಯೋತ್ಪಾದಕ ಕೃತ್ಯವಲ್ಲ: ಪಿಎಫ್‌ಐ ಕಾರ್ಯಕರ್ತರಿಗೆ ಹೈಕೋರ್ಟ್‌ ಜಾಮೀನು!

Follow Us:
Download App:
  • android
  • ios