ಮಧ್ಯಪ್ರದೇಶದ ಇಂದೋರ್‌ನ ಆಸ್ಪತ್ರೆಗಲ್ಲಿ ಕೊರೋನಾ ರೋಗಿಗಳು ಆಮ್ಲಜನಕ ಇಲ್ಲದೇ ಪರದಾಟ| ಫೋಟೋಶೂಟ್‌ಗೆ ಆಮ್ಲಜನಕ ಟ್ಯಾಂಕರ್‌ ತಡೆದ ಬಿಜೆಪಿಗರು!

ಇಂದೋರ್(ಏ.20)‌: ಒಂದೆಡೆ ಮಧ್ಯಪ್ರದೇಶದ ಇಂದೋರ್‌ನ ಆಸ್ಪತ್ರೆಗಲ್ಲಿ ಕೊರೋನಾ ರೋಗಿಗಳು ಆಮ್ಲಜನಕ ಇಲ್ಲದೇ ಪರದಾಟ ನಡೆಸುತ್ತಿದ್ದರೆ, ಇತ್ತ ಬಿಜೆಪಿ ಸಂಸದರು ಹಾಗೂ ಶಾಸಕರು ಫೋಟೋಶೂಟ್‌ಗಾಗಿ 30 ಟನ್‌ ಆಮ್ಲಜನಕ ಸಾಗಿಸುತ್ತಿದ್ದ ಟ್ಯಾಂಕರ್‌ ಅನ್ನು ಗಂಟೆಗಳ ಕಾಲ ತಡೆಹಿಡಿದ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟ್ಯಾಂಕರ್‌ ಚಾಲಕ ಗುಜರಾತಿನ ಜಾಮ್‌ನಗರದಿಂದ ನಿರಂತರವಾಗಿ 700 ಕಿ.ಮೀ. ಕ್ರಮಿಸಿ ಶನಿವಾರ ರಾತ್ರಿ ಇಂದೋರ್‌ಗೆ ಆಗಮಿಸಿದ್ದ. ಆದರೆ, ಚಂದನ್‌ನಗರದಲ್ಲಿ ಟ್ಯಾಂಕರ್‌ ಅನ್ನು ತಡೆದ ಬಿಜೆಪಿ ಕಾರ್ಯಕರ್ತರು ವಾಹನಕ್ಕೆ ಬಲೂನ್‌ ಹಾಗೂ ಹಾರಗಳನ್ನು ಹಾಕಿ ಸಿಂಗರಿಸಿದರು. ಬಳಿಕ ಸ್ಥಳೀಯ ಬಿಜೆಪಿ ಅಧ್ಯಕ್ಷ ಗೌರವ್‌ ರಣದೇವ್‌ ಹಾಗೂ ಸಚಿವರ ತುಳಿಸಿರಾಮ್‌ ಶೀಲವಂತ್‌ ಅವರು ಆಗಮಿಸಿ ಫೋಟೋಶೂಟ್‌ ನಡೆಸಿದರು. ಅಲ್ಲದೇ ಬಿಜೆಪಿ ನಾಯಕರು ಒಬ್ಬರಾದ ಬಳಿಕ ಒಬ್ಬರಂತೆ ಭಾಷಣವನ್ನೂ ಮಾಡಿದರೂ.

ಇದಾದ ಬಳಿಕ ಟ್ಯಾಂಕರ್‌ ಆಮ್ಲಜನಕ ಘಟಕಕ್ಕೆ ಬಂದು ತಲುಪಬೇಕು ಎನ್ನುವಷ್ಟರಲ್ಲಿ ಬಿಜೆಪಿ ಸಂಸದ ಶಂಕರ್‌ ಲಾವಾನಿ ಹಾಗೂ ಇಬ್ಬರು ಶಾಸಕರು ಸ್ವಾಗತ ಕಾರ್ಯಕ್ರಮದ ನೆಪದಲ್ಲಿ ಕಾಲಹರಣ ಮಾಡಿದರು. ಅಲ್ಲದೇ ಪೂಜಾರಿಯನ್ನು ಕರೆಸಿ ಪೂಜೆಯನ್ನು ನೆರವೇರಿಸಿದ ಬಳಿಕವೇ ಟ್ಯಾಂಕರ್‌ ಅನ್ನು ಆಮ್ಲಜನಕ ಘಟಕಕ್ಕೆ ಒಯ್ಯಲು ಅನುಮತಿ ನೀಡಲಾಯಿತು. ಈ ವೇಳೆಗಾಗಲೇ ಮೂರ್ನಾಲ್ಕು ಗಂಟೆಗಳು ಕಳೆದುಹೋಗಿದ್ದವು.

ಆಮ್ಲಜನಕ ಟ್ಯಾಂಕರ್‌ಗಳಿಗೆ ಆ್ಯಂಬುಲೆನ್ಸ್‌ ರೀತಿ ದಾರಿ ಬಿಡುವಂತೆ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಸೂಚಿಸಿದ್ದರೂ, ಪ್ರಚಾರ ಪಡೆದುಕೊಳ್ಳುವ ಉದ್ದೇಶಕ್ಕಾಗಿ ಟ್ಯಾಂಕರ್‌ ಅನ್ನು ತಡೆ ಹಿಡಿದ ಬಿಜೆಪಿ ಮುಖಂಡರ ವರ್ತನೆ ಟೀಕೆಗೆ ಗುರಿಯಾಗಿದೆ.