ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಮಹಾರಾಷ್ಟ್ರದ ಲಾತೂರು ಮೂಲದ ರಸಾಯನಶಾಸ್ತ್ರ ಪ್ರಾಧ್ಯಾಪಕ ಪಿ.ವಿ. ಕುಲಕರ್ಣಿಯನ್ನು ಬಂಧಿಸಿದೆ. ಪ್ರಶ್ನೆಪತ್ರಿಕೆ ರೂಪಿಸುವ ತಂಡದಲ್ಲಿದ್ದ ಈತ, ಲಕ್ಷಾಂತರ ರೂಪಾಯಿ ಪಡೆದು ಪ್ರಶ್ನೆಗಳನ್ನು ಲೀಕ್ ಮಾಡಿದ್ದ ಸಿಬಿಐ ತನಿಖೆಯಿಂದ ಬಯಲು

ನವದೆಹಲಿ (ಮೇ.16): ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನು ಹತ್ತಿರುವ ಸಿಬಿಐ, ಮಹಾರಾಷ್ಟ್ರದ ಲಾತೂರು ಮೂಲದ ರಸಾಯನಶಾಸ್ತ್ರ ಪ್ರಾಧ್ಯಾಪಕನೊಬ್ಬನನ್ನು ಶುಕ್ರವಾರ ಬಂಧಿಸಿದೆ. ಈತ ಪ್ರಶ್ನೆಪತ್ರಿಕೆ ರೂಪಿಸುವ ತಂಡದಲ್ಲಿದ್ದು, ತನ್ನ ಮನೆಯಲ್ಲೇ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ ಪ್ರಶ್ನೆಗಳನ್ನು ಲೀಕ್‌ ಮಾಡಿದ್ದ ಎಂಬ ಆಘಾತಕಾರಿ ಮಾಹಿತಿಯನ್ನು ಬಯಲಿಗೆಳೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಿ.ವಿ. ಕುಲಕರ್ಣಿ ಬಂಧಿತ ಪ್ರಾಧ್ಯಾಪಕ. ಈತ ಹಲವು ವರ್ಷಗಳಿಂದ ನೀಟ್‌ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಂಡದಲ್ಲಿದ್ದ. ಏಪ್ರಿಲ್‌ ಕೊನೆಯ ವಾರದಲ್ಲಿ ತನ್ನ ಮನೆಯಲ್ಲೇ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ, ಮೇ 3ರಂದು ನಡೆಯಲಿರುವ ಪರೀಕ್ಷೆಯ ಪ್ರಶ್ನೆ ಮತ್ತು ಉತ್ತರಗಳನ್ನು ತಿಳಿಸಿಕೊಟ್ಟಿದ್ದ. ಮೇ 14ರಂದು ಸಿಬಿಐನಿಂದ ಬಂಧಿಸಲ್ಪಟ್ಟ ಮತ್ತೊಬ್ಬ ಆರೋಪಿ ಮನೀಷಾ ವಾಘ್ಮೋರೆ ಸಹಾಯದಿಂದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಿದ್ದ. ವಿದ್ಯಾರ್ಥಿಗಳು ಇವರಿಗೆ ಲಕ್ಷಾಂತರ ರುಪಾಯಿಗಳನ್ನು ಪಾವತಿಸಿದ್ದರು ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಸಿಬಿಐ ದೇಶದ ಹಲವೆಡೆ ಶೋಧ ನಡೆಸಿ, ಹತ್ತಾರು ದಾಖಲೆ, ಮೊಬೈಲ್‌ ಫೋನ್‌ಗಳು ಹಾಗೂ ಇತರ ಉಪಕರಣಗಳನ್ನು ವಶಕ್ಕೆ ಪಡೆದಿದೆ. ಈ ವಸ್ತುಗಳ ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದೆ.