ನಾಸಿಕ್ ಪೊಲೀಸ್ ಆಯುಕ್ತರ ಆದೇಶ ಮಸೀದಿ ಬಳಿ ಹನುಮಾನ್ ಚಾಲೀಸಾ ಪಠಿಸುವಂತಿಲ್ಲ ಮಸೀದಿಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧ  

ಮಸೀದಿಯ 100 ಮೀಟರ್‌ಗಳ ವ್ಯಾಪ್ತಿಯಲ್ಲಿ ಧ್ವನಿ ವರ್ಧಕದಲ್ಲಿ ಹನುಮಾನ್ ಚಾಲೀಸಾವನ್ನು ಪ್ರಸಾರ ಮಾಡುವಂತಿಲ್ಲ ಎಂದು ನಾಸಿಕ್ ಪೊಲೀಸರು ಸೂಚನೆ ನೀಡಿದ್ದಾರೆ. ಅಜಾನ್ ವಿವಾದದ ಮಧ್ಯೆ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ ಮಸೀದಿಗಳ 100 ಮೀಟರ್ ವ್ಯಾಪ್ತಿಯಲ್ಲಿ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾವನ್ನು ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ.

ರಾಜ್ ಠಾಕ್ರೆ ಅವರು ಧ್ವನಿವರ್ಧಕಗಳಿಂದ ಆಜಾನ್ ಪ್ರಸಾರ ಮಾಡುವುದನ್ನು ನಿಷೇಧಿಸಬೇಕೆಂದು ಪದೇ ಪದೇ ಕರೆ ನೀಡಿದ್ದರು. ಮುಸ್ಲಿಂ ಸಮುದಾಯವು ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದು ಹಾಕುವ ಬೇಡಿಕೆಯನ್ನು ಮಾನವೀಯ ದೃಷ್ಟಿಕೋನದಿಂದ ನೋಡಬೇಕು ಎಂದು ಅವರು ಹೇಳಿದ್ದರು.

ಈ ಮಧ್ಯೆ ನಾಸಿಕ್ ಪೊಲೀಸ್ ಕಮಿಷನರ್ ಸೋಮವಾರ ಆದೇಶ ಹೊರಡಿಸಿದ್ದು, ಮೇ 3 ರೊಳಗೆ ಎಲ್ಲಾ ಧಾರ್ಮಿಕ ಸ್ಥಳಗಳು ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಪಡೆಯುವಂತೆ ನಿರ್ದೇಶನ ನೀಡಿದ್ದಾರೆ. ಗಡುವಿನ ನಂತರ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಾಸಿಕ್ ಪೊಲೀಸ್ ಆಯುಕ್ತ ದೀಪಕ್ ಪಾಂಡೆ (Deepak Pandey) ತಿಳಿಸಿದ್ದಾರೆ.

ರಾಜ್ಯಾದ್ಯಂತ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಪದೇ ಪದೇ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ಭಾನುವಾರ, ಠಾಕ್ರೆ ಹಿಂದೂಗಳಿಗೆ ಮೇ 3 ರವರೆಗೆ ಕಾಯಿರಿ ನಂತರವೂ ಧ್ವನಿ ವರ್ಧಕಗಳನ್ನು ತೆಗೆದು ಹಾಕದಿದ್ದರೆ ಮಸೀದಿಗಳ ಮುಂದೆ ಹನುಮಾನ್ ಚಾಲೀಸಾವನ್ನು ಪಠಿಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದರು.

ಮಸೀದಿಯಲ್ಲಿ ಧ್ವನಿವರ್ಧಕ: ರಾಜ್‌ ಠಾಕ್ರೆ ವಾರ್ನಿಂಗ್ ಬೆನ್ನಲ್ಲೇ ಮಹತ್ವದ ತೀರ್ಪು ಕೈಗೊಂಡ ಉದ್ಧವ್ ಸರ್ಕಾರ!

ಅಜಾನ್‌ನ್ನು ಪ್ರಸಾರ ಮಾಡುವುದು ಧಾರ್ಮಿಕ ವಿಷಯಕ್ಕಿಂತ ಸಾಮಾಜಿಕ ಸಮಸ್ಯೆಯಾಗಿದೆ ಮತ್ತು ಧ್ವನಿವರ್ಧಕಗಳ ಬಳಕೆಯನ್ನು ಮುಂದುವರೆಸಿದರೆ ಅವರು (ಮುಸ್ಲಿಮರು) ಧ್ವನಿವರ್ಧಕದಲ್ಲಿ ನಮ್ಮ ಪ್ರಾರ್ಥನೆಯನ್ನು ಸಹ ಆಲಿಸಬೇಕಾಗುತ್ತದೆ ಎಂದು ಠಾಕ್ರೆ ಹೇಳಿದ್ದರು.

ಠಾಕ್ರೆಯವರ ಎಚ್ಚರಿಕೆಯ ಹಿನ್ನೆಲೆಯಲ್ಲಿ, ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ಅಥವಾ ಭಜನೆ ನುಡಿಸಲು ಅನುಮತಿ ತೆಗೆದುಕೊಳ್ಳಬೇಕು ಎಂದು ನಾಸಿಕ್ ಪೊಲೀಸ್ ಕಮಿಷನರ್ ಹೇಳಿದ್ದಾರೆ ಎಂದು ANI ವರದಿ ಮಾಡಿದೆ. ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಗುರಿಯನ್ನು ಉಲ್ಲೇಖಿಸಿದ ಪಾಂಡೆ, ಆಜಾನ್‌ನ ಮೊದಲು ಮತ್ತು ನಂತರ 15 ನಿಮಿಷಗಳ ಸಮಯದಲ್ಲಿ ಹನುಮಾನ್ ಚಾಲೀಸಾ ಅಥವಾ ಭಜನೆ ಪ್ರಸಾರಕ್ಕೆ ಮಸೀದಿಯ 100 ಮೀಟರ್ ಒಳಗೆ ಅನುಮತಿಸಲಾಗುವುದಿಲ್ಲ ಎಂದು ಹೇಳಿದರು.

Raj Thackeray vs PFI ಕಾನೂನಿಗಿಂತ ಇಸ್ಲಾಂ ದೊಡ್ಡದಲ್ಲ, PFI ಬೆದರಿಕೆಗೆ ತಿರುಗೇಟು ನೀಡಿದ ರಾಜ್ ಠಾಕ್ರೆ!

ಎಲ್ಲಾ ಧಾರ್ಮಿಕ ಸ್ಥಳಗಳು ಮೇ 3 ರೊಳಗೆ ಧ್ವನಿವರ್ಧಕಗಳ ಬಳಕೆಗೆ ಅನುಮತಿಯನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಮೇ 3 ರ ನಂತರ ಯಾರಾದರೂ ಆದೇಶವನ್ನು ಉಲ್ಲಂಘಿಸುವುದು ಕಂಡುಬಂದರೆ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಂಡೆ ಉಲ್ಲೇಖಿಸಿದ್ದಾರೆ.

ಏತನ್ಮಧ್ಯೆ, ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆ ಕುರಿತು ಮಾರ್ಗಸೂಚಿಗಳನ್ನು ಮುಂದಿನ 1-2 ದಿನಗಳಲ್ಲಿ ಹೊರಡಿಸಲಾಗುವುದು ಎಂದು ಮಹಾರಾಷ್ಟ್ರ ಗೃಹ ಸಚಿವ (Maharashtra home minister) ದಿಲೀಪ್ ವಾಲ್ಸೆ ಪಾಟೀಲ್ (Dilip Walse Patil) ಹೇಳಿದ್ದಾರೆ. ನಾವು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಮೇಲೆ ಕಣ್ಣಿಟ್ಟಿದ್ದೇವೆ. ರಾಜ್ಯದಲ್ಲಿ ಶಾಂತಿ ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎನ್‌ಸಿಪಿ ನಾಯಕನನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.