Modi Cabinet: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ಕಿಂಗ್ ಮೇಕರ್ ಆಗಿದ್ದು, ಪ್ರಬಲ ಖಾತೆಗಳನ್ನ ತಮಗೆ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. 

ನವದೆಹಲಿ: ಜೂನ್ 8ರ ಬದಲಾಗಿ ಜೂನ್ 9ರಂದು ನರೇಂದ್ರ ಮೋದಿ (Narendra Modi) ಮೂರನೇ ಬಾರಿಗೆ ಪ್ರಧಾನಿಯಾಗಿ ಪದಗ್ರಹಣ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ. ನರೇಂದ್ರ ಮೋದಿ ಜೊತೆಯಲ್ಲಿ ಸಂಪುಟ ಸಚಿವರು ಸಹ ಪ್ರಮಾಣವಚನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದ್ರೆ ಬಿಜೆಪಿಗೆ ಬಹುಮತ ಸಿಗದ ಹಿನ್ನೆಲೆ ಮಿತ್ರಪಕ್ಷಗಳ ಬೆಂಬಲ ಪಡೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ಕಿಂಗ್ ಮೇಕರ್ ಆಗಿದ್ದು, ಪ್ರಬಲ ಖಾತೆಗಳನ್ನ ತಮಗೆ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. 

Add Asianetnews Kannada as a Preferred SourcegooglePreferred

240 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಸಂಪುಟ ರಚನೆಯ ಸಂಬಂಧ ದೊಡ್ಡದಾದ ಲಕ್ಷ್ಮಣ ರೇಖೆ ಎಳೆದಿದೆಯಂತೆ. ರಸ್ತೆ ಅಭಿವೃದ್ಧಿ, ರೈಲ್ವೆ ಇಲಾಖೆ, ಮೂಲಸೌಕರ್ಯ ಅಭಿವೃದ್ಧಿ ಕಲ್ಯಾಣ, ಕೃಷಿ ಇಲಾಖೆಗಳನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ಬಗ್ಗೆ ಮಾತನಾಡಿದೆಯಂತೆ. ಇದರ ಜೊತೆಯಲ್ಲಿ ಸ್ಪೀಕರ್ ಸ್ಥಾನವೂ ಸೇರಿದಂತೆ ಹಣಕಾಸು, ರಕ್ಷಣೆ, ಗೃಹ ಸೇರಿದಂತೆ ಪ್ರಮುಖ ಎಲ್ಲಾ ಖಾತೆಗಳನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಮಿತ್ರಪಕ್ಷಗಳಾದ ಟಿಡಿಪಿಗೆ ವಿಮಾನಯಾನ, ಕಬ್ಬಿಣ ಮತ್ತು ಉಕ್ಕು ಇಲಾಖೆ ನೀಡುವ ಸಾಧ್ಯತೆಗಳಿವೆ. ಶಿವಸೇನೆಗೆ ಬೃಹತ್ ಕೈಗಾರಿಕೆ, ಜೆಡಿಯುಗೆ ಗ್ರಾಮೀಣ ಮತ್ತು ಪಂಚಾಯತ್ ಅಭಿವೃದ್ಧ ಖಾತೆಗಳು ಸಿಗುವ ಸಾಧ್ಯತೆಗಳಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇನ್ನು ಕರ್ನಾಟಕದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಸಿಗುವ ಸಾಧ್ಯತೆಗಳಿವೆ. 

300ರ ಗಡಿ ದಾಟಿದ ಎನ್‌ಡಿಎ- ಬಿಜೆಪಿಗೆ ಸಿಕ್ತು ಪಕ್ಷೇತರರು, ಸ್ಥಳೀಯ ಪಕ್ಷಗಳ ಬೆಂಬಲ

ನಿತೀಶ್, ಚಂದ್ರಬಾಬು ಬೇಡಿಕೆಗಳೇನು? 

ಎನ್‌ಡಿಗೆ ಬೆಂಬಲ ಸೂಚಿಸಿರವ ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಟಿಡಿಪಿಯ ಮುಖ್ಯಸ್ಥ ಚಂದ್ರಬಾಬು ನಾಯ್ಡು ತಮ್ಮದೇ ಆದ ಕೆಲವು ಬೇಡಿಕೆಗಳನ್ನು ಇರಿಸಿದ್ದಾರೆ ಎನ್ನಲಾಗಿದೆ. ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ನಿತೀಶ್ ಕುಮಾರ್ ಆಗ್ರಹಿಸಿದ್ದರಂತೆ. ಇದರ ಜೊತೆಗೆ 4 ರಿಂದ 5 ಕ್ಯಾಬಿನೆಟ್ ಖಾತೆ ನೀಡಬೇಕೆಂದಿದ್ದಾರಂತೆ. 

ಮೋದಿ, ಅಮಿತ್ ಶಾ ಮುಂದೆ ಮಹತ್ವದ ಬೇಡಿಕೆ ಇಟ್ಟ ನಿತೀಶ್ ಕುಮಾರ್?

2018ರಲ್ಲಿ ರಾಜ್ಯಕ್ಕೆ ನೀಡುವ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪ ಉಂಟಾಗಿದ್ದರಿಂದ ಚಂದ್ರಬಾಬು ನಾಯ್ಡು ಎನ್‌ಡಿಎ ಒಕ್ಕೂಟದಿಂದ ಹೊರ ಬಂದಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇದೀಗ ಮತ್ತೊಮ್ಮೆ ಎನ್‌ಡಿಎ ಜೊತೆ ಕೈ ಜೋಡಿಸಿದ್ದಾರೆ. ಆಂಧ್ರಪ್ರದೇಶಕ್ಕೆ ಆರ್ಟಿಕಲ್ 371ರ ಮೂಲಕ ವಿಶೇಷ ಸ್ಥಾನಮಾನ ನೀಡಬೇಕು. ಮೂರರಿಂದ ನಾಲ್ಕು ಸಂಸದರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಇಬ್ಬರು ನಾಯಕರು ಐಎನ್‌ಡಿಐಎ ಒಕ್ಕೂಟ ತಮಗೆ ನೀಡಿರುವ ಆಫರ್‌ಗಳ ಲಿಸ್ಟ್‌ನ್ನು ಬಿಜೆಪಿ ಮುಂದೆ ಇರಿಸಿದ್ದಾರೆ ಎನ್ನಲಾಗಿದೆ.