ಮುಂಬೈ ವಿಮಾನ ನಿಲ್ದಾಣದ ಬಳಿ ರಮ್ಜಾನ್ ಸಮಯದಲ್ಲಿ ನಮಾಜ್ ಮಾಡಲು ಅನುಮತಿ ಕೋರಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ವಿಮಾನ ನಿಲ್ದಾಣದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಧರ್ಮಕ್ಕಿಂತ ಭದ್ರತೆಯೇ ಮುಖ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು,
ಏರ್ಪೋರ್ಟ್ ಬಳಿ ನಮಾಜ್ಗೆ ನಕಾರ
ಮುಂಬೈ(ಮಾ 6) ರಮ್ಜಾನ್ ಸಮಯದಲ್ಲಿ ವಿಮಾನ ನಿಲ್ದಾಣದ ಬಳಿ ನಮಾಜ್ ಮಾಡಲು ಅನುವು ಮಾಡುವಂತೆ ಕೋರಲಾಗಿದ್ದ ಮನವಿಗಳನ್ನು ತಿರಸ್ಕರಿಸಿರುವ ಬಾಂಬೆ ಹೈಕೋರ್ಟ್, ‘ಎಲ್ಲಿ ಬೇಕಾದರೂ ಪ್ರಾರ್ಥನೆ (ನಮಾಜ್) ಮಾಡುವುದು ಧಾರ್ಮಿಕ ಹಕ್ಕು ಎನಿಸಿಕೊಳ್ಳುವುದಿಲ್ಲ’ ಎಂದಿದೆ.
ಛತ್ರಪತಿ ಶಿವಾಜಿ ಮಹಾರಾಜ್ ಏರ್ಪೋರ್ಟ್ ಬಳಿಯಿರುವ ಖಾಲಿ ಜಾಗದಲ್ಲಿ ನಮಾಜ್ ಮಾಡಲು ಅನುಮತಿಸಬೇಕು ಅಥವಾ ಅದಕ್ಕಾಗಿ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಟ್ಯಾಕ್ಸಿ ಮತ್ತು ರಿಕ್ಷಾ ಚಾಲಕರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ‘ರಮ್ಜಾನ್ ತಿಂಗಳಲ್ಲಿ ನಮಾಜ್ ಕಡ್ಡಾಯವಾದರೂ, ವಿಮಾನ ನಿಲ್ದಾಣದಂತಹ ಸುರಕ್ಷತೆಗೆ ಆದ್ಯತೆ ನೀಡಬೇಕಾದ ಸ್ಥಳಗಳಲ್ಲಿ ಧರ್ಮಕ್ಕಿಂದ ಭದ್ರತೆ ಮುಖ್ಯವಾಗುತ್ತದೆ ’ ಎಂದು ಅಭಿಪ್ರಾಯಪಟ್ಟಿದೆ. ಜತೆಗೆ, ‘ಸಮೀಪದಲ್ಲಿರುವ ಮದರಸಾಗಳಲ್ಲಿ ನಮಾಜ್ ಮಾಡಿ’ ಎಂದು ಸೂಚಿಸಿದೆ.
ಈ ಮೊದಲು, ನಮಾಜ್ಗಾಗಿ ಸೂಕ್ತ ಜಾಗವನ್ನು ನೀಡುವಂತೆ ಕೋರ್ಟ್ ವಿಮಾನನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ ಜನದಟ್ಟಣೆ, ಭದ್ರತಾ ಕಾಳಜಿ ಮತ್ತು ವಿಮಾನ ನಿಲ್ದಾಣದ ಅಭಿವೃದ್ಧಿ ಯೋಜನೆಗಳಿಂದಾಗಿ, ಸಮೀಕ್ಷೆ ನಡೆಸಲಾದ 7 ಸ್ಥಳಗಳು ಪ್ರಾರ್ಥನೆಗೆ ಸೂಕ್ತವಾಗಿಲ್ಲ ಎಂದು ಅವರು ಕೋರ್ಟ್ಗೆ ವರದಿ ಸಲ್ಲಿಸಿದ್ದರು.


