57 ವರ್ಷಗಳ ಹಿಂದೆ ಬರೀ 35 ರೂಪಾಯಿಗಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಪ್ರಭು ಲಾಲ್‌ನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಹೊಸ ಗುರುತು ಸೃಷ್ಟಿಸಿಕೊಂಡು ಗುತ್ತಿಗೆದಾರನಾಗಿದ್ದರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಕೋಟಾ (ಜ.29): ಕಾನೂನಿನ ಕೈಗಳು ಉದ್ದವಾಗಿರುತ್ತವೆ ಮತ್ತು ಅಪರಾಧಿ ಎಷ್ಟೇ ಮರೆಮಾಚಲು ಪ್ರಯತ್ನಿಸಿದರೂ, ಒಂದಲ್ಲಾ ಒಂದು ದಿನ ಕಾನೂನು ಅವನನ್ನು ಹಿಡಿಯುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ರಾಜಸ್ಥಾನ ಪೊಲೀಸರು 57 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ. 1967ರಿಂದಲೂ ತಲೆಮರೆಸಿಕೊಂಡಿದ್ದ ಈ ಆರೋಪಿ, ಹೊಸ ಗುರುತು ಹಾಗೂ ಬದಲಾದ ವೇಷದೊಂದಿಗೆ ರಾಜಧಾನಿ ನವದೆಹಲಿಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯ ನಂತರ ಕೋಟಾದಿಂದ ಓಡಿ ದೆಹಲಿಯಲ್ಲಿ ನೆಲೆಸಿದ್ದ: ರಾಜಸ್ಥಾನದ ಕೋಟಾ ಜಿಲ್ಲೆಯ ಸುಕೇತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 57 ವರ್ಷಗಳ ಹಿಂದೆ ಅಂದರೆ, 1967 ರಲ್ಲಿ ಕೊಲೆ ನಡೆದಿತ್ತು. ಈ ಕೊಲೆಯ ಆರೋಪಿ ಪ್ರಭು ಲಾಲ್, ಆಗ ಕೇವಲ 15 ವರ್ಷ ವಯಸ್ಸಿನವನಾಗಿದ್ದ. ಕೊಲೆಯ ನಂತರ ಪೊಲೀಸರಿಂದ ತಪ್ಪಿಸಿಕೊಳ್ಳಲು ರಾಜಸ್ಥಾನವನ್ನು ತೊರೆದು ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದಲ್ಲದೆ, ಅಲ್ಲಿ ತನ್ನ ಗುರುತನ್ನು ಬದಲಾಯಿಸಿಕೊಂಡಿದ್ದ. ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿ ನೆಲೆಸಿದ ಪ್ರಭುಲಾಲ್‌, ಮನೆ ನಿರ್ಮಾಣ ಕೆಲಸದ ಉದ್ಯೋಗ ಆರಂಭಿಸಿದ್ದು ಮಾತ್ರವಲ್ಲದೆ, ಸರ್ಕಾರದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರನೂ ಆಗಿದ್ದ.

35 ರೂಪಾಯಿ ಜಗಳಕ್ಕೆ ಕೊಲೆ: ಸುಕೇತ್ ಠಾಣಾಧಿಕಾರಿ ಚೋಟು ಲಾಲ್ ಪ್ರಕಾರ, ಪ್ರಭು ಲಾಲ್ 1967 ರಲ್ಲಿ ಕೇವಲ 35 ರೂಪಾಯಿ ಸಲುವಾಗಿ ಭವಾನ ದರ್ಜಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ್ದ. ಭವಾನ ದರ್ಜಿಗೆ 35 ರೂಪಾಯಿಗೆ ತನ್ನ ಸೈಕಲ್‌ಅನ್ನು ಮಾರಿದ್ದ. ಆದರೆ ಕೆಲವು ದಿನಗಳ ನಂತರ ಹಣವನ್ನು ಹಿಂದಿರುಗಿಸಿ ಸೈಕಲ್ ಅನ್ನು ಹಿಂತಿರುಗಿಸಲು ಕೇಳಿದ್ದ. ಇದರಿಂದ ಇಬ್ಬರ ನಡುವೆ ಜಗಳ ನಡೆದು ಕೋಪದಲ್ಲಿ ಪ್ರಭು ಲಾಲ್, ಭವಾನ ದರ್ಜಿ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಘಟನೆಯ ನಂತರ ಅವನು ಸ್ಥಳದಿಂದ ಪರಾರಿಯಾಗಿದ್ದ.

ಗರ್ಲ್‌ಫ್ರೆಂಡ್‌ನ 4 ತಿಂಗಳ ಮಗುವನ್ನು ನೆಲಕ್ಕೆ ಬಡಿದು ಸಾಯಿಸಿದ 15 ವರ್ಷದ ಬಾಯ್‌ಫ್ರೆಂಡ್‌!

57 ವರ್ಷದ ನಂತರ ಸಿಕ್ಕಿದ್ದು ಹೇಗೆ: ರಾಜಸ್ಥಾನ ಪೊಲೀಸರು ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಹಿಡಿಯಲು ವಿಶೇಷ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರಿಗೆ ಪ್ರಭು ಲಾಲ್ ದೆಹಲಿಯಲ್ಲಿ ವಾಸಿಸುತ್ತಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ. ಪೊಲೀಸರು ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.

ಹೆಂಡ್ತಿ ಟಾರ್ಚರ್‌ಗೆ 'ಡ್ಯಾಡಿ ಐ ಆ್ಯಮ್ ಸಾರಿ..' ಎಂದು ಬರೆದಿಟ್ಟು ಪ್ರಾಣಬಿಟ್ಟ ಪೀಟರ್‌!

ಹೊಸ ಹೆಸರು, ಹೊಸ ಗುರುತು: ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಭು ಲಾಲ್ ತನ್ನ ಹೆಸರನ್ನು ಮಾತ್ರ ಬದಲಾಯಿಸಿದ್ದು ಮಾತ್ರವಲ್ಲ ತನ್ನ ಹಳ್ಳಿಗೆ ಎಂದಿಗೂ ಹಿಂತಿರುಗಿರಲಿಲ್ಲ. ಯಾರಿಗೂ ತನ್ನ ಬಗ್ಗೆ ಮಾಹಿತಿ ಸಿಗದಂತೆ ಯಾವುದೇ ಸಂಬಂಧಿಕರೊಂದಿಗೆ ಸಂಪರ್ಕದಲ್ಲಿರಲಿಲ್ಲ. ಆದರೆ ಕಾನೂನಿನಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗಲಿಲ್ಲ ಮತ್ತು ಅಂತಿಮವಾಗಿ 72 ನೇ ವಯಸ್ಸಿನಲ್ಲಿ ಅವನು ಸಿಕ್ಕಿಬಿದ್ದ. ಈಗ ಅವನನ್ನು ರಾಜಸ್ಥಾನಕ್ಕೆ ಕರೆತಂದು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ