ಮಹಾರಾಷ್ಟ್ರದಲ್ಲಿ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ರಿಯಾಯಿತಿ ದರದ ಟಿಕೆಟ್‌ನಿಂದ ಸಾರಿಗೆ ನಿಗಮಕ್ಕೆ ದಿನಕ್ಕೆ 3 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಸಚಿವ ಪ್ರತಾಪ್‌ ಸರನಾಯಕ್‌ ಹೇಳಿದ್ದಾರೆ. ನಷ್ಟ ಹೆಚ್ಚಾದರೆ ಯೋಜನೆ ನಿಲ್ಲಿಸುವ ಪ್ರಸ್ತಾಪ ಬರಬಹುದು ಎಂದು ಎಚ್ಚರಿಸಿದ್ದಾರೆ.

ಮುಂಬೈ (ಫೆ.23): ಮಹಾರಾಷ್ಟ್ರದ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಶೇ.50 ರಿಯಾಯ್ತಿ ದರದಲ್ಲಿ ಟಿಕೆಟ್‌ ನೀಡುವ ಗ್ಯಾರಂಟಿ ಯೋಜನೆಯಿಂದಾಗಿ ಸಾರಿಗೆ ನಿಗಮಕ್ಕೆ ದಿನಕ್ಕೆ 3 ಕೋಟಿ ರು. ನಷ್ಟವಾಗುತ್ತಿದೆ ಎಂದು ರಾಜ್ಯ ಸಾರಿಗೆ ಸಚಿವ ಪ್ರತಾಪ್‌ ಸರನಾಯಕ್‌ ಹೇಳಿದ್ದಾರೆ.

ಧಾರಾಶಿವ್‌ನಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಸಚಿವರು, ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ಶೇ.50ರಷ್ಟು ರಿಯಾಯ್ತಿ ದರ ನೀಡಲಾಗಿದೆ. ಜೊತೆಗೆ ಹಿರಿಯ ನಾಗರಿಕರು ಸಹ ರಿಯಾಯ್ತಿ ದರದಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದ ನಿಗಮಕ್ಕೆ ನಿತ್ಯ 3 ಕೋಟಿ ರು. ನಷ್ಟವಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ, ಸಾರಿಗೆ ಸಂಸ್ಥೆ ನಡೆಸುವುದು ತುಂಬಾ ಕಷ್ಟ. ಆಗ ರಿಯಾಯ್ತಿ ಯೋಜನೆ ನಿಲ್ಲಿಸುವ ಪ್ರಸ್ತಾಪ ಮಾಡಬೇಕಾಗುತ್ತದೆ ಎಂದರು.

ಇದನ್ನೂ ಓದಿ: ಮರಾಠಿ ಪುಂಡಾಟಿಕೆ ಮತ್ತಷ್ಟು ತೀವ್ರ,, ಕರ್ನಾಟಕದ ವೋಲ್ವೋ ಬಸ್‌ಗೆ ಮಸಿ ಬಳಿದ ಪುಂಡರು!

ಸ್ಕೀಂ ನಿಲ್ಲಿಸಲ್ಲ- ಸಿಎಂ, ಡಿಸಿಎಂ:

ಈ ನಡುವೆ, ಸರನಾಯಕ್‌ ಹೇಳಿಕೆ ಸಂಚಲನಕ್ಕೆ ಕಾರಣ ಆಗುತ್ತಿದ್ದಂತೆಯೇ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಯಾವುದೇ ಕಾರಣಕ್ಕೂ ಗ್ಯಾರಂಟಿ ಸ್ಕೀಂ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.