ಜಂತರ್ ಮಂತರ್ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿಯವರನ್ನು ನಿಂದಿಸಿದ್ದ ಬಾಲಕಿಯ ತಾಯಿ, ಇದೀಗ ಪ್ರಧಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಮಗಳನ್ನು ಕ್ಷಮಿಸಿ ಹೊಸ ಜೀವನ ನೀಡಿದ್ದಾರೆ ಎಂದು ಹೇಳಿರುವ ಅವರು, ಮಗಳ ಉಜ್ವಲ ಭವಿಷ್ಯಕ್ಕಾಗಿ ಆಕೆಯನ್ನು ದತ್ತು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ದೆಹಲಿ: ಜಂತರ್ ಮಂತರ್ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದ ಬಾಲಕಿಯ ತಾಯಿ, ಇದೀಗ ಪ್ರಧಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ತನ್ನನ್ನು ಇಷ್ಟೆಲ್ಲಾ ನಿಂದಿಸಿದರೂ ಮಗಳನ್ನು ಕ್ಷಮಿಸಿದ ಪ್ರಧಾನಿ ಮೋದಿಯವರ ನಿರ್ಧಾರ 'ಮಹತ್ತರವಾದದ್ದು' ಎಂದು ಅವರು ಬಣ್ಣಿಸಿದ್ದಾರೆ. ಪ್ರಧಾನಿಗಳು ನನ್ನ ಮಗಳಿಗೆ ಹೊಸ ಜೀವನವನ್ನೇ ಕೊಟ್ಟಿದ್ದಾರೆ ಎಂದು ತಾಯಿ ಹೇಳಿದ್ದಾರೆ. ನಮಗೆ ತುಂಬಾ ಅವಮಾನವಾಗಿದೆ, ನಾವು ಮತ್ತೆ ಮತ್ತೆ ಕ್ಷಮೆ ಕೇಳುತ್ತೇವೆ ಎಂದು ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡುತ್ತಾ ತಾಯಿ ಹೇಳಿಕೊಂಡಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಈ ದೇಶದ ರಾಜ. ಅವರ ಮುಂದೆ ನಾವೆಲ್ಲಾ ಏನೂ ಅಲ್ಲ. ತನ್ನನ್ನು ಇಷ್ಟೆಲ್ಲಾ ನಿಂದಿಸಿದ ಹುಡುಗಿಯನ್ನು ಕ್ಷಮಿಸುವ ಮೂಲಕ ಅವರು ದೊಡ್ಡ ಗುಣ ಮೆರೆದಿದ್ದಾರೆ. ನಾನು ಕೈ ಮುಗಿದು ಅವರಿಗೆ ಧನ್ಯವಾದ ಹೇಳುತ್ತೇನೆ. ಇಂದು ನನ್ನ ಮಗಳ ಹುಟ್ಟುಹಬ್ಬ, ಅವಳಿಗೆ ಮೋದಿಯವರಿಂದ ಸಿಕ್ಕ ದೊಡ್ಡ ಉಡುಗೊರೆ ಇದು. ಅವರು ನನ್ನ ಮಗಳಿಗೆ ಜೀವದಾನ ಮಾಡಿದ್ದಾರೆ. ನನ್ನ ಮಗಳಿಗೆ ಇಂದು ಹೊಸ ಜೀವನ ಸಿಕ್ಕಿದೆ’ ಎಂದು ತಾಯಿ ಭಾವುಕರಾಗಿ ನುಡಿದಿದ್ದಾರೆ.
ಹುಡುಗಿಯನ್ನು ದತ್ತು ತೆಗೆದುಕೊಂಡು ಭವಿಷ್ಯವನ್ನು ಉಜ್ವಲಗೊಳಿಸಿ
ಅಲ್ಲದೆ, ತನ್ನ ಮಗಳ ಉಜ್ವಲ ಭವಿಷ್ಯಕ್ಕಾಗಿ ಪ್ರಧಾನಿಗಳೇ ಆಕೆಯನ್ನು ದತ್ತು ತೆಗೆದುಕೊಳ್ಳಬೇಕೆಂದು ತಾಯಿ ಮನವಿ ಮಾಡಿದ್ದಾರೆ. ‘ಮೋದಿ ಜೀ, ದಯವಿಟ್ಟು ಈ ಹುಡುಗಿಯನ್ನು ದತ್ತು ತೆಗೆದುಕೊಂಡು ಅವಳ ಭವಿಷ್ಯವನ್ನು ಉಜ್ವಲಗೊಳಿಸಿ. ನಮಗೆ ನಾಚಿಕೆಯಾಗುತ್ತಿದೆ, ನಾವು ಮತ್ತೆ ಮತ್ತೆ ಕ್ಷಮೆ ಕೇಳುತ್ತೇವೆ’ ಎಂದು ಅವರು ಹೇಳಿದ್ದಾರೆ. ತಮ್ಮ ಮಗಳ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ಹಿಂಪಡೆಯುವಂತೆಯೂ ತಾಯಿ ಒತ್ತಾಯಿಸಿದ್ದಾರೆ. ಎಫ್ಐಆರ್ನಲ್ಲಿ ಮಗಳ ವಯಸ್ಸನ್ನು ತಪ್ಪಾಗಿ ದಾಖಲಿಸಲಾಗಿದೆ, ಆಕೆಗೆ ಕೇವಲ 15 ವರ್ಷ ಎಂದು ತಾಯಿ ಸ್ಪಷ್ಟಪಡಿಸಿದ್ದಾರೆ.
ತಮಗೆ ಇನ್ಸ್ಟಾಗ್ರಾಂ ಖಾತೆ ಇಲ್ಲ ಎಂದು ಹೇಳಿದ ತಾಯಿ, ವಿಡಿಯೋ ವೈರಲ್ ಆದ ನಂತರ ತಮ್ಮ ಕುಟುಂಬ ತೀವ್ರ ಆನ್ಲೈನ್ ನಿಂದನೆಗೆ ಗುರಿಯಾಗಿದೆ ಎಂದು ಹೇಳಿದ್ದಾರೆ. ‘ನಮ್ಮಂಥ ಪೋಷಕರು ಸಾಯಬೇಕು" ಎಂದೆಲ್ಲಾ ಜನರು ನಿಂದಿಸಿದ್ದಾರೆ. ನನಗೆ ಮಾತನಾಡಲು ಪದಗಳೇ ಸಿಗುತ್ತಿಲ್ಲ. 10 ರಿಂದ 20 ವರ್ಷದೊಳಗಿನ ಮಕ್ಕಳು ಸುಲಭವಾಗಿ ಬೇರೆಯವರ ಮಾತಿಗೆ ಮರುಳಾಗುತ್ತಾರೆ, ಶೋಷಣೆಗೆ ಒಳಗಾಗುತ್ತಾರೆ,’ ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಮಕ್ಕಳ ಇನ್ಸ್ಟಾಗ್ರಾಂ, ಫೇಸ್ಬುಕ್ ಬಳಕೆಯನ್ನು ನಿಷೇಧಿಸಬೇಕು ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪ್ರತಿಭಟನೆಗಳಲ್ಲಿ ಭಾಗವಹಿಸುವುದನ್ನು ತಡೆಯಬೇಕು ಎಂದು ತಾಯಿ ಪ್ರಧಾನಿಗಳಿಗೆ ಮನವಿ ಮಾಡಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಈ ಅಪ್ರಾಪ್ತ ಬಾಲಕಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಳು. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದರ ಬೆನ್ನಲ್ಲೇ, ಬಾಲಕಿ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಳು. ಇದು ತನ್ನ ಮೊದಲ ಮತ್ತು ಕೊನೆಯ ತಪ್ಪು ಎಂದು ಆಕೆ ಹೇಳಿದ್ದಳು.


