ಲೋಕಸಭಾ ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬ ವಿಪಕ್ಷಗಳ ಆರೋಪವನ್ನು ಸಂಸದ ತೇಜಸ್ವಿ ಸೂರ್ಯ ತಳ್ಳಿಹಾಕಿದ್ದಾರೆ. ಜನಗಣತಿ ಬದಲು ಶೇ.50ರಷ್ಟು ಸ್ಥಾನ ಹೆಚ್ಚಳದ ಸೂತ್ರದಿಂದ ದಕ್ಷಿಣದ ರಾಜ್ಯಗಳಿಗೆ ಹೆಚ್ಚು ಲಾಭವಾಗಲಿದೆ ಎಂದು ಅವರು ಅಂಕಿಅಂಶ ಸಹಿತ ವಿವರಿಸಿದ್ದಾರೆ.
- ಜನಗಣತಿಗಿಂತ ಶೇ.50ರ ಹೆಚ್ಚಳದಿಂದ ಲಾಭ: ಸಂಸದ
- ಶೇ.50ರ ಸೂತ್ರದಲ್ಲಿ ಕರ್ನಾಟಕದಲ್ಲಿ 28 ರಿಂದ 42ಕ್ಕೆ
- ತಮಿಳುನಾಡು, ಕೇರಳದಲ್ಲೂ ಸ್ಥಾನಗಳು ಏರಿಕೆ
ನವದೆಹಲಿ (ಏ.17): ‘ ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಹೆಚ್ಚು ಅನ್ಯಾಯವಾಗಲಿದೆ ಎನ್ನುವ ಮೂಲಕ ವಿಪಕ್ಷಗಳು ಜನರ ದಾರಿ ತಪ್ಪಿಸಲು ವ್ಯವಸ್ಥಿತ ಷಡ್ಯಂತ್ರ ರೂಪಿಸುತ್ತಿವೆ. ಅಸಲಿಗೆ ಈ ಮಸೂದೆಯಿಂದ ದಕ್ಷಿಣ ರಾಜ್ಯಗಳಿಗೆ ಹೆಚ್ಚು ಲಾಭ ಆಗಲಿದೆ’ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಗುರುವಾರ ಲೋಕಸಭಾ ಕಲಾಪದಲ್ಲಿ ಮಾತನಾಡಿದ ಸೂರ್ಯ, ‘ಪ್ರತಿಪಕ್ಷಗಳು ದಕ್ಷಿಣ ರಾಜ್ಯಗಳ ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡುತ್ತಿದೆ. ಈ ಮಸೂದೆಯು ಜನಸಂಖ್ಯೆಯನ್ನು ನಿಯಂತ್ರಿಸಿದ ದಕ್ಷಿಣದ ರಾಜ್ಯಗಳು ಹಾಗೂ ಸಣ್ಣ ರಾಜ್ಯಗಳಿಗೆ ಮೋದಿ ಸರ್ಕಾರ ನೀಡಿದ ಉತ್ತಮ ಯೋಜನೆಯಾಗಿದೆ’ ಎಂದಿದ್ದಾರೆ.
ಜೊತೆಗೆ 2011ರ ಜನಗಣತಿ ಅನ್ವಯ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವುದರ ಬದಲಾಗಿ ಲೋಕಸಭೆಯ ಹಾಲಿ ಬಲದ ಶೇ.50ರಷ್ಟು ಹೆಚ್ಚಿಸಲಾಗುತ್ತದೆ. ಇದರಿಂದ ದಕ್ಷಿಣ ಭಾಗಕ್ಕೆ ಹೆಚ್ಚು ಲಾಭವಾಗಲಿದೆ’ ಎಂದರು.
ದಕ್ಷಿಣದಲ್ಲಿ 50%ರ ಸೂತ್ರ ಹೇಗೆ?
ಕರ್ನಾಟಕದಲ್ಲಿ ಸದ್ಯ 28 ಕ್ಷೇತ್ರಗಳಿವೆ, ಅದು 2011ರ ಜನಗಣತಿ ಆಧಾರದಲ್ಲಿ ಮರು ಹಂಚಿಕೆ ಮಾಡಿದರೆ 41ಕ್ಕೆ ಏರಿಕೆ ಆಗಲಿದೆ. ಒಂದು ವೇಳೆ ಶೇ.50ರ ಸೂತ್ರ ಬಳಕೆಯಾದರೆ 42ಕ್ಕೆ ಏರಿಕೆ ಆಗಲಿದೆ. ತಮಿಳುನಾಡಿನಲ್ಲಿ 39 ಲೋಕಸಭಾ ಕ್ಷೇತ್ರಗಳಿದ್ದು ಶೇ.50ರ ಸೂತ್ರದ ಆಧಾರದಲ್ಲಿ ಸಂಖ್ಯೆ 59ಕ್ಕೆ ಏರಲಿದೆ. ಕೇರಳದಲ್ಲಿ 20 ರಿಂದ 30ಕ್ಕೆ, ಆಂಧ್ರದಲ್ಲಿ 25ರಿಂದ ಸಂಖ್ಯೆ 37ಕ್ಕೆ , ಒಡಿಶಾದಲ್ಲಿ 21ರಿಂದ 31ಕ್ಕೆ ತೆಲಂಗಾಣದಲ್ಲಿ 17ರಿಂದ 25ಕ್ಕೆ ಏರಿಕೆ ಆಗಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ದಕ್ಷಿಣ ಭಾರತಕ್ಕೆ ಹೇಗೆ ಲಾಭ?
ರಾಜ್ಯ ಹಾಲಿ ಸ್ಥಾನ ಜನಗಣತಿ ಶೇ.50ರ ಸೂತ್ರ
ಕರ್ನಾಟಕ 28 41 42
ತಮಿಳುನಾಡು 39 59 59
ಕೇರಳ 22 33 37
ಆಂಧ್ರಪ್ರದೇಶ 25 33 37
ತೆಲಂಗಾಣ 17 24 25
ಒಡಿಶಾ 21 28 31


