Asianet Suvarna News Asianet Suvarna News

ಬಿತ್ತನೆ ಮಾಡೋ ಅನ್ನದಾತರಿಗೆ ಗುಡ್‌ ನ್ಯೂಸ್‌: ವಾರ ತಡವಾದ್ರೂ ಇಂದು ಕೇರಳಕ್ಕೆ ಕಾಲಿಟ್ಟ ಮುಂಗಾರು!

ನೈಋತ್ಯ ಮುಂಗಾರು ಭಾರತಕ್ಕೆ ಜೂನ್ 8 ರಂದು ಅಪ್ಪಳಿಸಿದ್ದು, ಕೇರಳಕ್ಕೆ ಒಂದು ವಾರ ತಡವಾಗಿಯಾದ್ರೂ ಆಗಮಿಸಿದೆ.

monsoon finally reaches kerala a week later than usual ash
Author
First Published Jun 8, 2023, 3:00 PM IST

ನವದೆಹಲಿ (ಜೂನ್ 8, 2023): ನಮ್ಮ ದೇಶದ ಬೆನ್ನೆಲುಬು ಅಂದ್ರೆ ರೈತರು. ಆದರೆ, ರೈತರಿಗೆ ಜೀವನಾಡಿ ಹಾಗೂ ಬೆಳೆ ಬೆಳೆಯಲು ಅಗತ್ಯವಾಗಿರುವುದು ಮಳೆ, ಅದ್ರಲ್ಲೂ ಮುಂಗಾರು ಮಳೆ. ಈ ಬಾರಿ ಜೂನ್‌ ತಿಂಗಳುಆಋಂಭವಾಗಿ ಒಂದು ವಾರ ಕಳೆದ್ರೂ ಮುಂಗಾರು ಆರಂಭವಾಗಿಲ್ಲ ಎಂದು ತಲೆ ಮೇಲೆ ಕೈಹೊತ್ತು ಅನೇಕ ಅನ್ನದಾತರು ಕುಳಿತಿದ್ದಾರೆ. ಅಲ್ಲದೆ, ಆಕಾಶವನ್ನೇ ನೋಡುತ್ತಾ ಕುಳಿತವರೂ ಇದ್ದಾರೆ. ಆದರೆ, ನಿಮಗಿಲ್ಲಿದೆ ಶುಭ ಸುದ್ದಿ.

ನೈಋತ್ಯ ಮುಂಗಾರು ಭಾರತಕ್ಕೆ ಜೂನ್ 8 ರಂದು ಅಪ್ಪಳಿಸಿದ್ದು, ಕೇರಳಕ್ಕೆ ಒಂದು ವಾರ ತಡವಾಗಿಯಾದ್ರೂ ಆಗಮಿಸಿದೆ. ಸಾಮಾನ್ಯಕ್ಕಿಂತ ಒಂದು ವಾರದ ನಂತರ ಮುಂಗಾರು ಮಳೆ ಆರಂಭವಾಗಿದೆ ಎಂದ ಭಾರತೀಯ ಹವಾಮಾನ ಇಲಾಖೆ (IMD) ಸಹ ಅಧಿಕೃತ ಮಾಹಿತಿ ನೀಡಿದೆ. 'ಬೈಪರ್‌ಜೋಯ್' ಚಂಡಮಾರುತವು ಮುಂಗಾರಿನ ತೀವ್ರತೆಯ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಕೇರಳದ ಮೇಲೆ ಅದರ ಆಕ್ರಮಣವು "ಸೌಮ್ಯ" ವಾಗಿರುತ್ತದೆ ಎಂದು ಹವಾಮಾನಶಾಸ್ತ್ರಜ್ಞರು ಈ ಹಿಂದೆ ಹೇಳಿದ್ದರು.

ಇದನ್ನು ಓದಿ: ರಾಜಸ್ಥಾನ ಮರುಭೂಮೀಲಿ ರಣಮಳೆ, ಹಲವು ಭಾಗಗಳಲ್ಲಿ ಪ್ರವಾಹ: 13 ಜನ ಬಲಿ

ಆದರೆ, ಗುರುವಾರ ಹೇಳಿಕೆ ನೀಡಿದ ಐಎಂಡಿ, "ನೈಋತ್ಯ ಮುಂಗಾರು ಇಂದು ಜೂನ್ 8 ರಂದು ಕೇರಳದಿಂದ ಪ್ರಾರಂಭವಾಗಿದೆ" ಎಂದು ಪ್ರಕಟಿಸಿದೆ. "ದಕ್ಷಿಣ ಅರೇಬಿಯನ್ ಸಮುದ್ರದ ಉಳಿದ ಭಾಗಗಳು ಮತ್ತು ಮಧ್ಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಸಂಪೂರ್ಣ ಲಕ್ಷದ್ವೀಪ ಪ್ರದೇಶಗಳು, ಕೇರಳದ ಹೆಚ್ಚಿನ ಭಾಗಗಳು, ದಕ್ಷಿಣ ತಮಿಳುನಾಡಿನ ಹೆಚ್ಚಿನ ಭಾಗಗಳು, ಕೊಮೊರಿನ್ ಪ್ರದೇಶದ ಉಳಿದ ಭಾಗಗಳು, ಮನ್ನಾರ್ ಕೊಲ್ಲಿ ಮತ್ತು ನೈಋತ್ಯ, ಮಧ್ಯ ಮತ್ತು ಈಶಾನ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಿಗೆ ಇಂದು ಮುಂಗಾರು ಆರಂಭವಾಗಿದೆ’’ ಎಂದೂ ಹೇಳಿಕೆ ನೀಡಿದೆ.

ನೈಋತ್ಯ ಮುಂಗಾರು ಸಾಮಾನ್ಯವಾಗಿ ಜೂನ್ 1 ರಂದು ಕೇರಳದಲ್ಲಿ ಪ್ರಾರಂಭವಾಗುತ್ತದೆ. ಆದರೆ, ಈ ವರ್ಷ ಮೇ ಮಧ್ಯದಲ್ಲಿ, ಮುಂಗಾರು ಜೂನ್ 4 ರೊಳಗೆ ಕೇರಳಕ್ಕೆ ಆಗಮಿಸಬಹುದು ಎಂದು IMD ಹೇಳಿತ್ತು. ಹಾಗೂ, ಸ್ಕೈಮೆಟ್ ಜೂನ್ 7 ರಂದು ಕೇರಳದಲ್ಲಿ ಮುಂಗಾರು ಆರಂಭವನ್ನು ಊಹಿಸಿತ್ತು. ನೈಋತ್ಯ ಮುಂಗಾರು ಕಳೆದ ವರ್ಷ ಮೇ 29 ರಂದು, 2021 ರಲ್ಲಿ ಜೂನ್ 3 ರಂದು, 2020 ರಲ್ಲಿ ಜೂನ್ 1 ರಂದು, 2019 ರಲ್ಲಿ ಜೂನ್ 8 ರಂದು ಮತ್ತು 2018 ರಲ್ಲಿ ಮೇ 29 ರಂದು ದಕ್ಷಿಣದ ಕೆರಳ ರಾಜ್ಯಕ್ಕೆ ಆಗಮಿಸಿತ್ತು.

ಇದನ್ನೂ ಓದಿ:  ರೈತರಿಗೆ ಶಾಕಿಂಗ್ ನ್ಯೂಸ್‌: ಜೂನ್‌ನಲ್ಲಿ ಕಡಿಮೆ ಮಳೆ ಸಾಧ್ಯತೆ; ಹವಾಮಾನ ಇಲಾಖೆ
 
ಈ ಮಧ್ಯೆ, ಕೇರಳದಲ್ಲಿ ತಡವಾಗಿ ಮುಂಗಾರು ಆರಂಭವಾದರೂ ಋತುವಿನಲ್ಲಿ ದೇಶದ ಒಟ್ಟು ಮಳೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ವಿಕಸನಗೊಳ್ಳುತ್ತಿರುವ ಎಲ್ ನಿನೋ ಪರಿಸ್ಥಿತಿಗಳ ಹೊರತಾಗಿಯೂ ನೈಋತ್ಯ ಮುಂಗಾರು ಅವಧಿಯಲ್ಲಿ ಭಾರತವು ಸಾಮಾನ್ಯ ಮಳೆಯನ್ನು ಪಡೆಯುವ ನಿರೀಕ್ಷೆಯಿದೆ ಎಂದು IMD ಈ ಹಿಂದೆ ಹೇಳಿತ್ತು.

ದೀರ್ಘಾವಧಿಯ ಸರಾಸರಿಯಲ್ಲಿ ಶೇಕಡಾ 90 ಕ್ಕಿಂತ ಕಡಿಮೆ ಮಳೆಯಾದರೆ 'ಕೊರತೆ' ಎಂದು ಪರಿಗಣಿಸಲಾಗುತ್ತದೆ, 90 ಪ್ರತಿಶತ ಮತ್ತು 95 ಪ್ರತಿಶತದ ನಡುವೆ 'ಸಾಮಾನ್ಯಕ್ಕಿಂತ ಕಡಿಮೆ', 105 ಮತ್ತು 110 ಪ್ರತಿಶತ ನಡುವೆ 'ಸಾಮಾನ್ಯಕ್ಕಿಂತ ಹೆಚ್ಚು' ಮತ್ತು 100 ಕ್ಕಿಂತ ಹೆಚ್ಚು ಶೇಕಡಾ 'ಹೆಚ್ಚುವರಿ' ಮಳೆ ಎಂದು ಭಾವಿಸಲಾಗುತ್ತದೆ. 

ಇದನ್ನೂ ಓದಿ:  ರೈತರಿಗೆ ಶುಭ ಸುದ್ದಿ: ಈ ವರ್ಷ ಸಹಜ ಮುಂಗಾರು; ‘ಎಲ್‌ ನಿನೋ’ ಪರಿಣಾಮ ಇಲ್ಲ ಎಂದ ಹವಾಮಾನ ಇಲಾಖೆ

ಮಳೆ-ಆಧಾರಿತ ಕೃಷಿಯು ದೇಶದ ಒಟ್ಟು ಆಹಾರ ಉತ್ಪಾದನೆಯಲ್ಲಿ ಸುಮಾರು 40 ಪ್ರತಿಶತವನ್ನು ಹೊಂದಿದ್ದು, ಇದು ಭಾರತದ ಆಹಾರ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ನಿರ್ಣಾಯಕ ಕೊಡುಗೆಯಾಗಿದೆ.

ಇದನ್ನೂ ಓದಿ: ರೈತರಿಗೆ ಮೋದಿ ಸರ್ಕಾರದಿಂದ ಗುಡ್‌ ನ್ಯೂಸ್‌: ಹಲವು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

Follow Us:
Download App:
  • android
  • ios