ಬಿಜೆಪಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಾಹೀರಾತಿನ ಮೂಲಕ ಸುಳ್ಳನ್ನು ಸತ್ಯ ಮಾಡಲು ಹೊರಟಿದೆ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ. ಮನಮೋಹನ್ ಸಿಂಗ್ ಕಾಲದ ಮನರೇಗಾ ಯೋಜನೆಯನ್ನು ಬುಡಮೇಲು ಮಾಡಲು ಯತ್ನಿಸುತ್ತಿದ್ದು, ಗಾಂಧೀಜಿಯ ಸಿದ್ಧಾಂತ ಕೊಲ್ಲಲು ಬಿಜೆಪಿ ಮುಂದಾಗಿದೆ ಎಂದು ಟೀಕೆ.

ನವದೆಹಲಿ (ಫೆ.7): ಬಿಜೆಪಿ ಸುಳ್ಳನ್ನು ಹೇಗೆ ಸತ್ಯ ಮಾಡೋದು ಎಂಬುದನ್ನು ಬಿಂಬಿಸಲು ಹೊರಟಿದೆ. ಬಿಜೆಪಿಯವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ. 

ಬಿಜೆಪಿಯವರು ಮಹಾತ್ಮ ಗಾಂಧಿ ವಿರೋಧಿಗಳು

ಶುಕ್ರವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಬಿಜೆಪಿಯಿಂದ ಮನರೇಗಾ ಬಗ್ಗೆ ಜಾಹೀರಾತು ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಬಿಜೆಪಿಯವರು ಮಹಾತ್ಮ ಗಾಂಧಿ ವಿರೋಧಿಗಳು, ಗಾಂಧಿಯನ್ನು ಕೊಂದಿರೋರು. ದೈಹಿಕವಾಗಿ ಕೊಂದು, ಈಗ ಮಾನಸಿಕವಾಗಿ ಗಾಂಧೀಜಿಯ ಸಿದ್ಧಾಂತಗಳನ್ನು ಕೊಲ್ಲಲು ಮೊದಲ ಹೆಜ್ಜೆ ಇಟ್ಟಿದ್ದಾರೆ ಎಂದರು.

ಮನರೇಗಾ ಬುಡಮೇಲು ಮಾಡಲು ಬಿಜೆಪಿ ಯತ್ನ

ಮನರೇಗಾ 20 ವರ್ಷಗಳ ಕಾಲ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ನೀಡಿದೆ. ಮನಮೋಹನ್ ಸಿಂಗ್ ಕಾಲದಲ್ಲಿ ಜಾರಿಗೆ ತರಲಾದ ಯೋಜನೆಯನ್ನು ಬುಡಮೇಲು ಮಾಡಲು ಬಿಜೆಪಿ ಹೊರಟಿದೆ. ಬಡವರಿಗೆ ಸಾಂವಿಧಾನಿಕವಾಗಿ ನೀಡಿದ್ದ ಹಕ್ಕನ್ನು ಕಿತ್ತುಕೊಂಡಿದೆ ಎಂದು ಅವರು ಆರೋಪಿಸಿದರು.

ಹಸಿಸುಳ್ಳು ಹೇಳುವ ಬಿಜೆಪಿ, ಇದಕ್ಕಾಗಿ ಆರ್‌ಎಸ್‌ಎಸ್‌ನಿಂದ ತರಬೇತಿ ಪಡೆದುಕೊಂಡು ಬಂದಿದೆ. ಈಗ ಸುಳ್ಳನ್ನು ಸತ್ಯ ಮಾಡಲು ಬಿಜೆಪಿ ಮುಂದಾಗಿದೆ. ಬಿಜೆಪಿ ಅತ್ಯಂತ ಶ್ರೀಮಂತ ಪಾರ್ಟಿ. ಹೀಗಾಗಿ, ಪತ್ರಿಕೆಗಳಲ್ಲಿ ಜಾಹೀರಾತು ‌ನೀಡಿ ಸುಳ್ಳನ್ನು ಸತ್ಯ ‌ಮಾಡಲು ಹೊರಟಿದೆ ಎಂದು ಆರೋಪಿಸಿದರು.