ಬಿಜೆಪಿಯು ತನ್ನ ಹೊಸ ಜಾಹೀರಾತಿನಲ್ಲಿ ಮಹಾತ್ಮ ಗಾಂಧೀಜಿಯವರು ಕಾಂಗ್ರೆಸ್ ನಾಯಕರಿಗೆ ದೊಣ್ಣೆಯಿಂದ ಹೊಡೆಯುತ್ತಿರುವಂತೆ ಚಿತ್ರಿಸಿ ವಿವಾದ ಸೃಷ್ಟಿಸಿದೆ. ಈ ಜಾಹೀರಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಇದು ಗಾಂಧಿವಾದದ ಹತ್ಯೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರು (ಫೆ.6): ರಾಜ್ಯ ರಾಜಕಾರಣದಲ್ಲಿ ಜಾಹೀರಾತು ಸಮರ ತಾರಕಕ್ಕೇರಿದೆ. ವಿಬಿ ಜಿರಾಮ್‌ಜಿ ವಿಚಾರವಾಗಿ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಮುಂದಾಗಿರುವ ಬಿಜೆಪಿ, ತನ್ನ ಹೊಸ ಜಾಹೀರಾತಿನಲ್ಲಿ ಮಹಾತ್ಮ ಗಾಂಧೀಜಿಯವರು ಕಾಂಗ್ರೆಸ್ ನಾಯಕರಿಗೆ ದೊಣ್ಣೆಯಿಂದ ಹೊಡೆಯುತ್ತಿರುವಂತೆ ಚಿತ್ರಿಸಿದೆ. ಈ ಜಾಹೀರಾತು ಇದೀಗ ಈಗ ರಾಜ್ಯ ರಾಜಕೀಯದಲ್ಲಿ ಕಿಡಿ ಹೊತ್ತಿಸಿದೆ.

Add Asianetnews Kannada as a Preferred SourcegooglePreferred

ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ

ಬಿಜೆಪಿಯ ಈ ವಿವಾದಾತ್ಮಕ ಜಾಹೀರಾತಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ಕಿಡಿಕಾರಿದ ಅವರು, 'ಅಂದು ಗೋಡ್ಸೆಯಿಂದ ಗಾಂಧಿ ಹತ್ಯೆಯಾಯಿತು, ಇಂದು ಗೋಡ್ಸೆವಾದಿಗಳಿಂದ ಗಾಂಧಿವಾದದ ಹತ್ಯೆಯಾಗುತ್ತಿದೆ' ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಜಗತ್ತಿಗೆ ಅಹಿಂಸೆಯ ಸಂದೇಶ ನೀಡಿದ ಮಹಾತ್ಮನನ್ನು ಬಿಜೆಪಿ ಅವಮಾನಿಸುತ್ತಿದೆ ಎಂದು ಅವರು ದೂರಿದ್ದಾರೆ.

ಸಿದ್ಧಾಂತದ ಹತ್ಯೆಗೆ ಬಿಜೆಪಿ ಸಂಚು?

ಗಾಂಧೀಜಿ ಎಂದಿಗೂ ತಮ್ಮ ಕೈಲಿದ್ದ ಕೋಲನ್ನು ಹಲ್ಲೆಗೆ ಬಳಸಿದವರಲ್ಲ ಅಥವಾ ಸುಳ್ಳಿನ ಮಾರ್ಗ ತೋರಿದವರಲ್ಲ. ಆದರೆ ಮಹಾತ್ಮನ ಮಹತ್ವ ಅರಿಯದ ಆರೆಸ್ಸೆಸ್ ಮತ್ತು ಬಿಜೆಪಿ, ಅವರನ್ನು ಹಿಂಸಾವಾದಿಯನ್ನಾಗಿ ಚಿತ್ರಿಸುತ್ತಿದೆ, ಎಂದು ಖರ್ಗೆ ಕಿಡಿಕಾರಿದ್ದಾರೆ. ಗಾಂಧೀಜಿಯವರನ್ನು ದೈಹಿಕವಾಗಿ ಮುಗಿಸಿದವರು ಈಗ ಅವರ ಸಿದ್ಧಾಂತವನ್ನೂ ನಾಶ ಮಾಡಲು ಹೊರಟಿದ್ದಾರೆ. ಅವರ ತತ್ವಗಳನ್ನು ನಾವು ರಕ್ಷಿಸಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.

ಜಾಹೀರಾತು ಸಮರಕ್ಕೆ ಸಾರ್ವಜನಿಕರ ಪ್ರತಿಕ್ರಿಯೆ

ಚುನಾವಣಾ ಸಮೀಪಿಸುತ್ತಿರುವ ಹೊತ್ತಿನಲ್ಲಿ ರಾಜಕೀಯ ಪಕ್ಷಗಳು ಸಿದ್ಧಾಂತಗಳ ಹೆಸರಿನಲ್ಲಿ ಮಹಾಪುರುಷರನ್ನು ಬಳಸಿಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಗಾಂಧೀಜಿಯವರಂತಹ ವ್ಯಕ್ತಿತ್ವವನ್ನು ಇಟ್ಟುಕೊಂಡು ಪರಸ್ಪರ ಕೆಸರೆರಚಾಟ ನಡೆಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಎದ್ದಿವೆ. ಸದ್ಯ ಪ್ರಿಯಾಂಕ್ ಖರ್ಗೆ ವಾಗ್ದಾಳಿಗೆ ಬಿಜೆಪಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.