ಕೇರಳದ ಕೋಳಿಕೋಡ್‌ನಲ್ಲಿರುವ ಏಷ್ಯಾನೆಟ್ ನ್ಯೂಸ್ ಚಾನೆಲ್ ಪ್ರಾದೇಶಿಕ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿರುವ ವಿಚಾರವನ್ನು ಇಂದು ಕೇರಳ ವಿಧಾನಸಭಾ ಕಲಾಪದಲ್ಲಿ ಶಾಸಕ ಪಿ.ಸಿ ವಿಶ್ವನಾಥ್ ಪ್ರಶ್ನಿಸಿದ್ದಾರೆ.

ತಿರುವನಂತಪುರ: ಕೇರಳದ ಕೋಳಿಕೋಡ್‌ನಲ್ಲಿರುವ ಏಷ್ಯಾನೆಟ್ ನ್ಯೂಸ್ ಚಾನೆಲ್ ಪ್ರಾದೇಶಿಕ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿರುವ ವಿಚಾರವನ್ನು ಇಂದು ಕೇರಳ ವಿಧಾನಸಭಾ ಕಲಾಪದಲ್ಲಿ ಶಾಸಕ ಪಿ.ಸಿ ವಿಶ್ವನಾಥ್ ಪ್ರಶ್ನಿಸಿದ್ದಾರೆ. ಡ್ರಗ್‌ ಮಾಫಿಯಾ ವಿರುದ್ಧ ವರದಿ ಮಾಡಿದ ನ್ಯೂಸ್ ಚಾನೆಲ್ ವಿರುದ್ಧ ಎಸ್‌ಎಫ್‌ಐ ಏಕೆ ಪ್ರತಿಭಟನೆ ಮಾಡುತ್ತಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ. 

Add Asianetnews Kannada as a Preferred SourcegooglePreferred

ಇದೇ ವೇಳೆ ಏಷ್ಯಾನೆಟ್ ನ್ಯೂಸ್ ಚಾನೆಲ್ ವಿರುದ್ಧ ಯೋಜನೆ ರೂಪಿಸಿ ದಾಳಿ ನಡೆಸಲಾಗಿದೆ ಎಂದು ಕೇರಳ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಸದನದಲ್ಲಿ ಆರೋಪಿಸಿದ್ದರು. ಫೇಕ್‌ ನ್ಯೂಸ್ ಎಂಬ ಆರೋಪ ಸತ್ಯವಲ್ಲ. ಒಂದು ವೇಳೆ ನ್ಯೂಸ್ ಚಾನೆಲ್‌ನ ಪ್ರಸಾರದಲ್ಲಿ ತಾಂತ್ರಿಕ ಸಮಸ್ಯೆಯಿದ್ದರೆ ಹೇಳಬಹುದಿತ್ತು. ಆದರೆ ಸರ್ಕಾರವೂ ಏಷ್ಯಾನೆಟ್ ವರದಿಗಾರರನ್ನು ಬೇಟೆಯಾಡುತ್ತಿದೆ ಎಂದು ಸತೀಶನ್ ಆರೋಪಿಸಿದ್ದಾರೆ. ವಿರೋಧದ ಭಯ, ಪ್ರಶ್ನೆಗಳ ಭಯ ಹೀಗೆ ಈ ಸರ್ಕಾರ ಕೇವಲ ಭಯದಿಂದ ಆಳಲ್ಪಡುತ್ತಿದೆ. ಭಯ ನಿಮ್ಮನ್ನು ಆಳುತ್ತಿದೆ. ಸರ್ವಾಧಿಕಾರಿಗಳೆಲ್ಲ ಹೆದರಿದ್ದಾರೆ ಎಂದು ಸರ್ಕಾರದ ವಿರುದ್ಧ ವಿಡಿ ಸತೀಶನ್ (VD Satheeshan) ವಾಗ್ದಾಳಿ ನಡೆಸಿದರು. ನೀವು ಮಂಡಿಯೂರಿ ನಿಂತರೆ ಸರ್ಕಾರ ನಿಮ್ಮನ್ನು ಹಿಂಬಾಲಿಸುತ್ತದೆ, ಆದ್ದರಿಂದ ನೀವು ಎದ್ದು ನಿಲ್ಲಬೇಕು, ಎಂದು ಪ್ರತಿಪಕ್ಷದ ನಾಯಕ ಮಾಧ್ಯಮಗಳಿಗೆ ಹೇಳಿದರು. ನ್ಯೂಸ್ ಚಾನೆಲ್ ವಿರುದ್ಧ ಆಡಳಿತ ಪಕ್ಷದ ರಕ್ಷಣೆಯೊಂದಿಗೆ ದಾಳಿ ನಡೆಸಲಾಗಿದೆ ಎಂದು ಮತ್ತೊಬ್ಬ ಶಾಸಕ ಪಿ.ಕೆ ಬಷೀರ್ (PK Basheer) ದೂರಿದ್ದಾರೆ. ಅಲ್ಲದೇ ನ್ಯೂಸ್ ಚಾನೆಲ್ ಮೇಲೆ ದಾಳಿ ಖಂಡಿಸಿ ವಿರೋಧ ಪಕ್ಷದ ನಾಯಕರು ಕಲಾಪ ಬಹಿಷ್ಕರಿಸಿ ಸದನದಿಂದ ಹೊರ ನಡೆದಿದ್ದಾರೆ. 

ಕೇರಳದಲ್ಲಿ ಡ್ರಗ್‌ ಮಾಫಿಯಾ ಬಯಲು ಮಾಡಿದ್ದ ಏಷ್ಯಾನೆಟ್ ಕಚೇರಿ ಮೇಲೆ ಎಸ್‌ಎಫ್‌ಐ ಗೂಂಡಾಗಳ ದಾಳಿ

ಘಟನೆ ಹಿನ್ನೆಲೆ 

ಮಲೆಯಾಳಂ ಏಷ್ಯಾನೆಟ್ ನ್ಯೂಸ್ ಚಾನೆಲ್ ಡ್ರಗ್ ಮಾಫಿಯಾ ಬಗ್ಗೆ ನವೆಂಬರ್ 10, 2022 ರಂದು 'ನಾರ್ಕೋಟಿಕ್ಸ್ ಎ ಡರ್ಟಿ ಬಿಸಿನೆಸ್' (Narcotics is a dirty business) ಎಂಬ ಸರಣಿ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಸಂತ್ರಸ್ತೆ 14 ವರ್ಷದ ಬಾಲಕಿಯ ಹೇಳಿಕೆಯನ್ನು ಮರುಸೃಷ್ಟಿಸುವ ಸಲುವಾಗಿ ಬೇರೊಂದು ಬಾಲಕಿಯನ್ನು ಬಳಸಿಕೊಳ್ಳಲಾಗಿತ್ತು. (ಫೋಕ್ಸೋ ಕೇಸುಗಳಲ್ಲಿ ಸಂತ್ರಸ್ತೆಯರ ಹೆಸರು ಗುರುತು ತೋರಿಸುವ ಹಾಗಿಲ್ಲ ಎಂಬ ಕಾರಣ ಚಾನೆಲ್ ಈ ನಿರ್ಧಾರ ಮಾಡಿತ್ತು) ಇದನ್ನೇ ಎಸ್‌ಎಫ್‌ಐ ಕಾರ್ಯಕರ್ತರೂ ಇದೊಂದು ಫೇಕ್‌ನ್ಯೂಸ್ ಎಂದು ಆರೋಪಿಸಿ ಶುಕ್ರವಾರ ಸಂಜೆ ಕೊಚ್ಚಿ ಏಷ್ಯಾನೆಟ್ ನ್ಯೂಸ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಬೆದರಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇದಾದ ಬಳಿಕ ಪಕ್ಷೇತರ ಶಾಸಕ ಪಿಸಿ ಅನ್ವರ್ ನೀಡಿದ ಸುಳ್ಳು ದೂರಿನ ಮೇರೆಗೆ ಭಾನುವಾರ ಬೆಳಗ್ಗೆ ಕೋಳಿಕ್ಕೋಡ್‌ನಲ್ಲಿರುವ ಏಷ್ಯಾನೆಟ್ ನ್ಯೂಸ್ ಕಚೇರಿಗೆ ಪೊಲೀಸರು ದಾಳಿ ನಡೆಸಿದ್ದರು.

ಕೋಳಿಕ್ಕೋಡ್‌ನಲ್ಲಿರುವ ಏಷ್ಯಾನೆಟ್ ನ್ಯೂಸ್ ಚಾನೆಲ್ ಮೇಲೆ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿರುವುದರ ಹಿಂದೆ ತೀವ್ರ ರಾಜಕೀಯ ಒತ್ತಡವಿರುವುದು ತಿಳಿದು ಬಂದಿದೆ. ಈ ಶೋಧನೆಯ ಹಿಂದೆ ಉನ್ನತ ಮಟ್ಟದ ರಾಜಕೀಯ ಒತ್ತಡವಿತ್ತು. ಗೃಹ ಇಲಾಖೆಯ ಉನ್ನತಾಧಿಕಾರಿಗಳ ತೀವ್ರ ಒತ್ತಡದಿಂದಾಗಿ ಕೋಳಿಕ್ಕೋಡ್ ನಗರ ಪೊಲೀಸರು ಕಾನೂನು ಕ್ರಮಗಳ ಗಣನೆಗೆ ತೆಗೆದುಕೊಳ್ಳದೇ ಚಾನೆಲ್‌ನ ಪ್ರಾದೇಶಿಕ ಕಚೇರಿಯಲ್ಲಿ ತಪಾಸಣೆ ನಡೆಸಿದರು ಎಂದು ಏಷ್ಯಾನೆಟ್ ನ್ಯೂಸ್‌ಗೆ ತಿಳಿದು ಬಂದಿದೆ.

ಸುಳ್ಳು ಕೇಸ್: ಕೇರಳದ ಕೋಳಿಕ್ಕೋಡ್ ಏಷ್ಯಾನೆಟ್ ಕಚೇರಿ ಮೇಲೆ ಪೊಲೀಸರ ದಾಳಿ

ಏಷಿಯಾನೆಟ್ ನ್ಯೂಸ್ ಕಚೇರಿಗೆ ತೆರಳಿ ಕಂಪ್ಯೂಟರ್ ಗಳನ್ನು ವಶಪಡಿಸಿಕೊಳ್ಳುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಕೋಝಿಕ್ಕೋಡ್ ಪೊಲೀಸರಿಗೆ ಸೂಚನೆ ಬಂದಿತ್ತು. ಆದರೆ ಕೋಝಿಕ್ಕೋಡ್ ನಗರ ಪೊಲೀಸ್ ಅಧಿಕಾರಿಗಳು ಉನ್ನತ ಮಟ್ಟದ ಸೂಚನೆಗಳ ನಂತರವೂ ಕಚೇರಿಯಲ್ಲಿದ್ದ ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳುವ ಕ್ರಮದಿಂದ ಹಿಂದೆ ಸರಿದರು.

ಇತ್ತ ಕೊಚ್ಚಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಎಸ್‌ಎಫ್‌ಐ ಸಂಘಟನೆಯೂ ಕೇರಳದಲ್ಲಿ ಆಡಳಿತದಲ್ಲಿರುವ ಸಿಪಿಐಎಂನ ವಿದ್ಯಾರ್ಥಿ ವಿಭಾಗವಾಗಿದೆ.