ಅಸ್ಸಾಂನ ಮುಸ್ಲಿಂ ಮಹಿಳೆಯೊಬ್ಬಳು, ಹಿಮಂತ್ ಬಿಸ್ವಾ ಶರ್ಮಾ ಇರುವವರೆಗೂ ಅಸ್ಸಾಂ ತೊರೆದು ಬೆಂಗಳೂರಿಗೆ ಬರುವಂತೆ ವಲಸಿಗರಿಗೆ ಕರೆ ನೀಡುವ ವೀಡಿಯೋ ವೈರಲ್ ಆಗಿದೆ. ಈ ಘಟನೆಯು ಬೆಂಗಳೂರಿನ ಜನಸಂಖ್ಯೆಯ ಮಧ್ಯೆ ನುಸುಳಿ ಹೋಗಿರುವ ಅಕ್ರಮ ವಲಸಿಗರ ಬಗ್ಗೆ ಪ್ರಶ್ನೆ ಮಾಡುವಂತಾಗಿದೆ.

ಅತ್ತ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಲ್ಲಿರುವ ಹಿಂದೂ ಸಮುದಾಯದ ಜನ ಅಭದ್ರತೆಯಿಂದಲೇ ದಿನ ದೂಡುತ್ತಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಹಿಂದೂ ಯುವಕರ ಹತ್ಯೆ ಮಾಡಲಾಗುತ್ತಿದ್ದು, ಮನೆಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಮತ್ತೊಂದೆಡೆ ಈಶಾನ್ಯ ಭಾರತದ ರಾಜ್ಯವಾದ ಅಸ್ಸಾಂನಲ್ಲಿ ಬಾಂಗ್ಲಾದೇಶಿ ಅಕ್ರಮ ವಲಸಿಗರ ಸಂಖ್ಯೆ ಅಲ್ಲಿನ ಜನಸಂಖ್ಯೆಯ ಶೇಕಡಾ 40ರಷ್ಟಿದೆ. ಅವರ ಸಂಖ್ಯೆ ಇನ್ನೂ ಬರೀ 10 ಶೇಕಡಾ ಹೆಚ್ಚಾದರೂ ಸಾಕು ಅಸ್ಸಾಂ ಅಟೊಮ್ಯಾಟಿಕ್ ಆಗಿ ಭಾರತದ ಕೈ ತಪ್ಪಿ ಬಿಡುವುದು ಎಂದು ಈಗಾಗಲೇ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಎಚ್ಚರಿಕೆ ನೀಡಿದ್ದರು. ಹೀಗಿರುವಾಗ ಬಾಂಗ್ಲಾದೇಶಿ ಉಚ್ಛಾರಣೆ ಇರುವ ಅಸ್ಸಾಂ ಜನರು ಸ್ಥಳೀಯವಾಗಿ ಮೀಯಾ ಮುಸ್ಲಿಂ ಎಂದು ಕರೆಯಲ್ಪಡುವ ಮುಸ್ಲಿಂ ಮಹಿಳೆಯೊಬ್ಬಳು ಮಾಡಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

Add Asianetnews Kannada as a Preferred SourcegooglePreferred

ಅಸ್ಸಾಂನಲ್ಲಿ ಸಿಎಂ ಆಗಿರುವ ಹಿಮಂತ್ ಬಿಸ್ವಾ ಸರ್ಮಾ ಅವರು ಈ ವಲಸಿಗರ ಬಗ್ಗೆ ಆರಂಭದಿಂದಲೂ ಎಚ್ಚರಿಕೆ ನೀಡುತ್ತಾ ಬಂದವರು. ವಲಸಿಗರ ವಿರುದ್ಧ ಕಠಿಣ ಕ್ರಮಗಳನ್ನು ಮಾಡಿದವರು. ಹೀಗಿರುವಾಗ ಈ ವಿಡಿಯೋದಲ್ಲಿ ಬಾಂಗ್ಲಾದೇಶಿ ಭಾಷೆಯಲ್ಲಿ ಮಾತನಾಡುವ ಮುಸ್ಲಿಂ ಮಹಿಳೆಯೊಬ್ಬಳು, ಅಸ್ಸಾಂನಲ್ಲಿ ಹೀಮಂತ್ ಬಿಸ್ವಾ ಸರ್ಮಾ ಅಧಿಕಾರದಲ್ಲಿ ಇರುವವರೆಗೂ ಅಸ್ಸಾಂನ್ನು ತೊರೆಯಿರಿ, ಉದ್ಯೋಗ ಅವಕಾಶಗಳಿಗಾಗಿ ನೀವು ಅಸ್ಸಾಂ ತೊರೆದು ಬೆಂಗಳೂರಿಗೆ ಹೋಗಿ, ದುಡಿದು ತಿನ್ನಿ ಎಂದು ಆಕೆ ಹೇಳುತ್ತಿದ್ದಾಳೆ. ಆಕೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಬೇರೆ ರಾಜ್ಯದ ವಲಸಿಗರನ್ನು ಸದಾ ಕೈಬೀಸಿ ಕರೆಯುವ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ಅಕ್ರಮ ವಲಸಿಗರಿಗೆ ಎಷ್ಟು ಸುರಕ್ಷಿತವಾಗಿದೆ ಎಂಬುದು ಆಕೆಯ ಮಾತುಗಳಲ್ಲೇ ತಿಳಿಯುತ್ತಿದೆ.

trunicle ಎಂಬ ಇನ್ಸ್ಟಾಪೇಜ್ ಈಕೆಯ ವೀಡಿಯೋವನ್ನು ಹಂಚಿಕೊಂಡಿದ್ದು, ಕನ್ನಡಿಗರು ಇದನ್ನು ವಿರೋಧಿಸುವುದಿಲ್ಲವೇ? ಅವಳು ಕನ್ನಡ ಮಾತನಾಡುವುದಿಲ್ಲ, ಅವಳು ಬಾಂಗ್ಲಾದೇಶದವಳು ಎಂದು ಬರೆದುಕೊಂಡಿದೆ. ಈ ವೀಡಿಯೋಗೆ ವ್ಯಾಪಕ ಕಾಮೆಂಟ್‌ಗಳು ಬರುತ್ತಿದ್ದು, Prakhar Murthy ಎಂಬುವವರು ಕಾಮೆಂಟ್‌ನಲ್ಲಿ ಸಚಿವ ಡಿಕೆ ಶಿವಕುಮಾರ್, ಕರವೇ ಕೇಂದ್ರ ರೂಪೇಶ್ ರಾಜಣ್ಣ (@dkshivakumar_official @karavekendra @rupesh_rajanna) ಮುಂತಾದವರಿಗೆ ಟ್ಯಾಗ್ ಮಾಡಿ ಈ ವಿಡಿಯೋ ನಲ್ಲಿ ಹೇಳುತ್ತಿರುವ ವಿಷ್ಯ ಏನು ಅಂದ್ರೆ ಬಾಂಗ್ಲಾದೇಶಿ ಜನ ಅಸ್ಸಾಂ ನಲ್ಲಿ ಹಿಮಂತ ಬಿಸ್ವಾಸ್ ಶರ್ಮಾ ಇರೋ ವರೆಗೂ ಅವರಿಗೆ ಉಳಿಗಾಲ ಇಲ್ಲ, ಅದಿಕ್ಕೆ ಬೆಂಗಳೂರಿಗೆ ಬನ್ನಿ ಅಂತ ಹೇಳ್ತಾ ಇದ್ದಾಳೆ.. ನೀವೇನು ಸುಮ್ನೆ ಕೈಕಟ್ಟಿ ಸುಮ್ನೆ ಇರ್ತೀರೋ ಅಥವಾ ಏನಾದ್ರೂ ಮಾಡ್ತಿರೋ ? ಎಂದು ಪ್ರಶ್ನೆ ಮಾಡಿದ್ದಾರೆ.

ಈ ವೀಡಿಯೋ ನೋಡಿದ ಕೆಲವರು ಕರ್ನಾಟಕ ಶೀಘ್ರದಲ್ಲೇ ಮತ್ತೊಂದು ಪಶ್ಚಿಮ ಬಂಗಾಳ ಆಗಲಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಇವರಿಗೆ ಎಲ್ಲಾ ಸವಲತ್ತು ಒದಗಿಸಲಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈಕೆ ಬಾಂಗ್ಲಾದೇಶಿ ಮುಸ್ಲಿಂ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ಸುರಕ್ಷಿತವಾಗಿ ಅಡಗಿಕೊಳ್ಳಲು ಬಿಜೆಪಿ ಇಲ್ಲದ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಅಕ್ರಮ ವಲಸೆಯ ವಿರುದ್ಧ ಇಡೀ ಭಾರತವೇ ಒಂದಾಗಬೇಕಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಡ್ರಗ್ ಡೀಲರ್ ಅಮ್ಮ, ಗೂಢಚಾರಿ ಅಪ್ಪ : ಮಗುವನ್ನು ಮಾರಲೆತ್ನಿಸಿದ್ರು ಪೋಷಕರು: ಸಿನಿಮಾಗಿಂತ ಕಡಿಮೆ ಏನಿಲ್ಲ ಈ ನಟನ ಬದುಕು

ಕೆಲ ದಿನಗಳ ಹಿಂದೆ ಮುಂಬೈನಲ್ಲಿ ನಡೆಸಿದ ಸಮೀಕ್ಷೆಯೊಂದರಲ್ಲಿ ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಶೇಕಡಾ 70ರಷ್ಟು ಅಕ್ರಮವಲಸಿಗರು ಭಾರತದ ಮತದಾರರ ಚೀಟಿ ಪಡೆದಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ. ಹಾಗೆಯೇ ಕೆಲ ದಿನಗಳ ಹಿಂದೆ ಅಸ್ಸಾಂನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಸರ್ಮಾ , ಕಳೆದ 5 ವರ್ಷಗಳಿಂದಲೂ ಈ ವಿಚಾರದ ಬಗ್ಗೆ ನಾನು ಧ್ವನಿ ಎತ್ತಿದ್ದೇನೆ. ಅಸ್ಸಾಂನಲ್ಲಿ ಅಲ್ಲಿನ ಜನಸಂಖ್ಯೆಯ ಶೇ. 40ರಷ್ಟು ಜನರು ಬಾಂಗ್ಲಾದೇಶಿಗರಾಗಿದ್ದಾರೆ. ಈ ಪ್ರಮಾಣವೂ ಶೇ. 10ಕ್ಕೆ ಏರಿಕೆಯಾದರೆ ನಾವು ಸ್ವಯಂಚಾಲಿತವಾಗಿ ಬಾಂಗ್ಲಾದೇಶಕ್ಕೆ ಸೇರಿದಂತೆ ಎಂದು ಅವರು ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ಹಿಂಸಾಚಾರದ ಮಧ್ಯೆ ಅಲ್ಲಿನ ನಾಯಕರು ಭಾರತದ ಸೆವೆನ್ ಸಿಸ್ಟರ್ ಎಂದು ಕರೆಯಲ್ಪಡುವ ಈಶಾನ್ಯದ 7 ರಾಜ್ಯಗಳನ್ನು ಬಾಂಗ್ಲಾದ ಜೊತೆ ವಿಲೀನ ಮಾಡಿಕೊಳ್ಳುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಸರ್ಮಾ, ಇದೇ ಕಾರಣಕ್ಕೆ ನಾನು ಕಳೆದ 5 ವರ್ಷಗಳಿಂದ ಬೊಬ್ಬೆ ಹೊಡೆಯುತ್ತಿರುವುದು ಎಂದು ಹೇಳಿದ್ದರು.

ಇದನ್ನೂ ಓದಿ: ಹೆಂಡ್ತಿ ತವರಿಗೆ ಹೋಗಿದ್ದೇ ತಪ್ಪಾಯ್ತು: ಅತ್ತೆ ಮನೆಗೆ ಜೆಸಿಬಿ ನುಗ್ಗಿಸಿದ ಅಳಿಯ