Asianet Suvarna News Asianet Suvarna News

ಕೇರಳದ ಹಲವು ಪಿಎಫ್‌ಐ ನಾಯಕರಿಗೆ ಐಸಿಸ್‌, ಅಲ್‌ಖೈದಾ ನಂಟು: ಎನ್‌ಐಎ

ಭಯೋತ್ಪಾದನೆಗೆ ನೆರವು, ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡ ಕಾರಣಕ್ಕೆ 3 ತಿಂಗಳ ಹಿಂದೆ ಕೇಂದ್ರ ಸರ್ಕಾರದಿಂದ ನಿಷೇಧಕ್ಕೆ ಒಳಪಟ್ಟ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ’ (ಪಿಎಫ್‌ಐ) ಸಂಘಟನೆಗೆ ಐಸಿಸ್‌ ಮತ್ತು ಅಲ್‌ಖೈದಾ ಉಗ್ರ ಸಂಘಟನೆಗಳ ನಂಟಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೇಳಿದೆ.

Many Kerala PFI leaders have link with ISIS and Al-Qaeda: NIA informed court akb
Author
First Published Dec 22, 2022, 7:16 AM IST

ಕೊಚ್ಚಿ: ಭಯೋತ್ಪಾದನೆಗೆ ನೆರವು, ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡ ಕಾರಣಕ್ಕೆ 3 ತಿಂಗಳ ಹಿಂದೆ ಕೇಂದ್ರ ಸರ್ಕಾರದಿಂದ ನಿಷೇಧಕ್ಕೆ ಒಳಪಟ್ಟ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ’ (ಪಿಎಫ್‌ಐ) ಸಂಘಟನೆಗೆ ಐಸಿಸ್‌ ಮತ್ತು ಅಲ್‌ಖೈದಾ ಉಗ್ರ ಸಂಘಟನೆಗಳ ನಂಟಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೇಳಿದೆ. ಈ ಮೂಲಕ ಭಾರತದಲ್ಲಿ ಸಂಘಟನೆ ಕೆಲ ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಹಿಂಸಾಕೃತ್ಯಗಳಲ್ಲಿ ವಿದೇಶಿ ಉಗ್ರ ಸಂಘಟನೆಗಳ ಕೈವಾಡವನ್ನು ಸ್ಪಷ್ಟಪಡಿಸಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಎನ್‌ಐಎ (National Investigation Agency) ಅಧಿಕಾರಿಗಳು ಕರ್ನಾಟಕ (Karnataka), ಕೇರಳ (Kerala) ಸೇರಿದಂತೆ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿ ಹಲವು ಪಿಎಫ್‌ಐ ಪದಾಧಿಕಾರಿಗಳು, ನಾಯಕರು, ಕಾರ್ಯಕರ್ತರನ್ನು ಬಂಧಿಸಿದ್ದರು. ಈ ಪೈಕಿ ಕೇರಳದಲ್ಲಿ 13 ಮಂದಿಯನ್ನು ಬಂಧಿಸಿದ್ದು, ಇವರ ವಿಚಾರಣೆಗೆ ಇನ್ನಷ್ಟು ಕಾಲಾವಧಿ ಕೋರಿ ಎನ್‌ಐಎ ಮಂಗಳವಾರ ಕೊಚ್ಚಿಯ ವಿಶೇಷ ಎನ್‌ಐಎ ಕೋರ್ಟ್‌ಗೆ ಮನವಿ ಸಲ್ಲಿಸಿದೆ. ಈ ವೇಳೆ ಸಲ್ಲಿಸಿದ ವರದಿಯಲ್ಲಿ ಪಿಎಫ್‌ಐಗೆ ಐಸಿಸ್‌, ಅಲ್‌ಖೈದಾ ನಂಟಿರುವ ಮಾಹಿತಿ ಇದೆ.

ವಿದೇಶಿ ನಂಟು:

ನಿಷೇಧಿತ ಪಿಎಫ್‌ಐ (PFI) ಸಂಘಟನೆಯ ನಾಯಕರಿಗೆ ಐಸಿಸ್‌ (ISIS), ಅಲ್‌ಖೈದಾ ಉಗ್ರ ಸಂಘಟನೆ (Al-Qaeda terrorist organization) ಜೊತೆ ನಂಟಿದ್ದು, ಈ ಕುರಿತ ಸಾಕ್ಷ್ಯಗಳೂ ಲಭ್ಯವಾಗಿದೆ. ಯಾವ ದೇಶಗಳಲ್ಲಿ ತಮಗೆ ನೇರವಾಗಿ ಕಾರ್ಯಾಚರಣೆ ಮಾಡುವುದು ಸಾಧ್ಯವಾಗುವುದಿಲ್ಲವೋ ಅಂಥ ದೇಶ/ ರಾಜ್ಯಗಳಲ್ಲಿ ಐಸಿಸ್‌ ಮತ್ತು ಅಲ್‌ಖೈದಾ ಸಂಘಟನೆಗಳು ದೇಶವಿರೋಧಿ ಮತ್ತು ಧರ್ಮ ವಿರೋಧಿ ಸಂಘಟನೆಗಳಾದ ಪಿಎಫ್‌ಐನಂಥ ಸಂಸ್ಥೆಗಳ ನೆರವು ಪಡೆದುಕೊಂಡು ದುಷ್ಕೃತ್ಯ ನಡೆಸುತ್ತಿವೆ. ಈವರೆಗೆ ನಡೆದ ತನಿಖೆ ವೇಳೆ ಕೇರಳದ ಹಲವು ಪಿಎಫ್‌ಐ ನಾಯಕರಿಗೆ ಕೆಲ ಅಲ್‌ಖೈದಾ ನಾಯಕರ ಸಂಪರ್ಕ ಇರುವುದು ದೃಢಪಟ್ಟಿದೆ. ಈ ಕುರಿತ ಇನ್ನಷ್ಟು ಹೆಚ್ಚಿನ ತನಿಖೆಗೆ ಇನ್ನಷ್ಟು ಕಾಲಾವಕಾಶ ಬೇಕು ಎಂದು ಹೇಳಿದೆ.

ಮಂಗಳೂರು ಬ್ಲಾಸ್ಟ್‌ ಆರೋಪಿ ಶಾರಿಕ್‌ಗೆ ಪಿಎಫ್ಐ ಸಂಪರ್ಕ..?

ಹಿಟ್‌ಲಿಸ್ಟ್‌:

ಜೊತೆಗೆ ಅನ್ಯಧರ್ಮೀಯರ ಹಿಟ್‌ಲಿಟ್‌ ತಯಾರಿಸಲೆಂದೇ ಪಿಎಫ್‌ಐನಲ್ಲಿ ಪ್ರತ್ಯೇಕ ವಿಭಾಗವೊಂದಿದೆ. ಪ್ರತಿ ರಾಜ್ಯದಲ್ಲೂ ಇರುವ ಈ ಘಟಕಗಳು ತಮ್ಮ ರಾಜ್ಯದಲ್ಲಿನ ಇತರೆ ಧರ್ಮೀಯರ ಹಿಟ್‌ಲಿಸ್ಟ್ ಸಿದ್ಧಪಡಿಸುವ ಕೆಲಸ ಮಾಡುತ್ತಿರುವ ವಿಷಯವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಎನ್‌ಐಎ ತನ್ನ ವರದಿಯಲ್ಲಿ ಹೇಳಿದೆ. ಅಲ್ಲದೆ ಭಯೋತ್ಪಾದನಾ ಚಟುವಟಿಕೆಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಯುವಕರನ್ನು ಪಿಎಫ್‌ಐ ನಾಯಕರು ನೇಮಕ ಮಾಡಿಕೊಳ್ಳುತ್ತಿದ್ದ ವಿಷಯಗಳೂ ತನಿಖೆಯಲ್ಲಿ ದೃಢಪಟ್ಟಿದೆ. ತನಿಖೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಪ್ರಕರಣ ಸಂಬಂಧ ಈಗಾಗಲೇ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಎನ್‌ಐಎ ಕೋರ್ಟ್‌ಗೆ ಮಾಹಿತಿ ನೀಡಿದೆ.


ಮುಸ್ಲಿಮರಿಗೆ ಅವಕಾಶ ನಿರಾಕರಣೆ

ಡಿ.31ರಂದು ಅಶ್ಲೀಲ ನೃತ್ಯ ಮತ್ತು ಮಾದಕ ದ್ರವ್ಯಗಳ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು, ನ್ಯೂ ಇಯರ್‌ ಪಾರ್ಟಿಗೆ ಮುಸ್ಲಿಂ ಯುವಕರು ಬರಬಾರದು ಎಂದು ಬಜರಂಗದಳ ಪೊಲೀಸ್‌ ಇಲಾಖೆಯನ್ನು ಆಗ್ರಹಿಸಿದೆ. ಮದ್ಯಪಾನ ಮಾಡಬಾರದು ಎಂಬ ನಿಯಮವಿದ್ದರೂ ಪಬ್‌ಗಳಿಗೆ ಮುಸ್ಲಿಂ ಯುವಕರು ಬರ್ತಾ ಇದ್ದಾರೆ. ಇದರ ಹಿಂದೆ ದುಷ್ಕೃತ್ಯದ ಸಂಚಿದೆ. ಹೀಗಾಗಿ ನ್ಯೂ ಇಯರ್‌ ನ ಎಲ್ಲ ಪಾರ್ಟಿ ಬಂದ್‌ ಮಾಡಬೇಕು ಎಂದು ಬಜರಂಗದಳ ಪೊಲೀಸ್‌ ಕಮಿಷನರ್‌ಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದೆ.

ಪಿಎಫ್ಐ ಕರ್ಮಕಾಂಡ: ವಿಧ್ವಂಸಕ ಕೃತ್ಯಕ್ಕೆ 45 ಸಾವಿರ ಯುವಕರಿಗೆ ತರಬೇತಿ?

ಹೊಸ ವರ್ಷದ ಹೆಸರಿನಲ್ಲಿ ಡಿ.31ರಂದು ಹಲವು ಹೋಟೆಲ್, ಪಬ್‌ಗಳು ಮತ್ತು ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ, ಅಶ್ಲೀಲ ನೃತ್ಯ ಮತ್ತು ಮಾದಕ ದ್ರವ್ಯಗಳ ಪಾನ ಪಾರ್ಟಿಗಳನ್ನು ಆಯೋಜನೆ ಮಾಡಿದ್ದು ನಮ್ಮ ಗಮನಕ್ಕೆ ಬಂದಿರುತ್ತದೆ. ಹೊಸ ವರ್ಷದ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು ಪಾಶ್ಚಾತ್ಯ ಸಂಸ್ಕೃತಿಯಿಂದ ಕೂಡಿದ್ದು ಇದನ್ನು ಬಜರಂಗದಳ ತೀವ್ರವಾಗಿ ವಿರೋಧಿಸುತ್ತದೆ. ಈಗಾಗಲೇ ಲವ್‌ ಜಿಹಾದ್‌ ಹೆಸರಿನಲ್ಲಿ ಮುಗ್ಧ ಹೆಣ್ಣು ಮಕ್ಕಳನ್ನು ಮೋಸಗೊಳಿಸಿ ಅವರನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಚೋದನೆ ನೀಡಲಾಗುತ್ತದೆ.

ಈಗಾಗಲೇ ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಯುವಕರು ಇಂತಹ ಕೃತ್ಯಗಳಲ್ಲಿ ಸಕ್ರೀಯರಾಗಿದ್ದು, ಡ್ರಗ್ಸ್, ಮಾಫಿಯಾ, ಸೆಕ್ಸ್ ಮಾಫಿಯಾದಂತಹ ಜಾಲಗಳು ಜಾಸ್ತಿಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಯಾವುದೇ ಹೋಟೆಲ್ ಪಬ್‌ಗಳಲ್ಲಿ ಹೊಸ ವರ್ಷದ ಪ್ರಯುಕ್ತ ನಡೆಯುವ ಪಾರ್ಟಿ, ಅಶ್ಲೀಲ ನೃತ್ಯಗಳಿಗೆ ಅನುಮತಿ ನೀಡಬಾರದು ಮತ್ತು ಎಲ್ಲ ಬಾರ್‌, ಪಬ್‌ ಮತ್ತು ಹೋಟೆಲ್‌ಗಳನ್ನು ನಿಗದಿತ ಸಮಯದ ಒಳಗೆ ಮುಚ್ಚಿಸಲು ಕ್ರಮಕೈಗೊಳ್ಳಬೇಕೆಂದು ಪೊಲೀಸ್‌ ಕಮಿಷನರ್‌ಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.
 

Follow Us:
Download App:
  • android
  • ios