ಮದ್ಯ ಹಗರಣ ಆರೋಪ ಸಮಬಂಧ ಮನೀಶ್‌ ಸಿಸೋಡಿಯಾಗೆ ಸಿಬಿಐ ಸಮನ್ಸ್‌ ನೀಡಿದ್ದು, ಇಂದು ವಿಚಾರಣೆಗೆ ಬರುವಂತೆ ನೋಟಿಸ್‌ ಜಾರಿ ಮಾಡಿದೆ. ನನ್ನ ವಿರುದ್ಧ ಸಂಪೂರ್ಣ ಬಲಪ್ರಯೋಗ ಎಂದು ಮನೀಶ್‌ ಸಿಸೋಡಿಯಾ ಕಿಡಿ ಕಾರಿದ್ದಾರೆ. 

ನವದೆಹಲಿ (ಫೆಬ್ರವರಿ 19, 2023): ಆಮ್‌ಆದ್ಮಿ ಪಕ್ಷದ ವಿವಾದಿತ ಮದ್ಯ ಲೈಸೆನ್ಸ್‌ ಹಗರಣಕ್ಕೆ ಸಂಬಂಧ ಭಾನುವಾರ ವಿಚಾರಣೆಗೆ ಹಾಜರಾಗುವಂತೆ ದೆಹಲಿಯ ಅಬಕಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾಗೆ ಸಿಬಿಐ ನೋಟಿಸ್‌ ಜಾರಿ ಮಾಡಿದೆ. ಟ್ವಿಟ್ಟರ್‌ನಲ್ಲಿ ಸ್ವತಃ ಈ ಕುರಿತು ಮಾಹಿತಿ ನೀಡಿರುವ ಸಿಸೋಡಿಯಾ, ‘ನಾಳೆ ವಿಚಾರಣೆಗೆ ಬರುವಂತೆ ಸಿಬಿಐ ನನಗೆ ಸೂಚಿಸಿದೆ. ಕೇಂದ್ರ ಸರ್ಕಾರ ಸಿಬಿಐ, ಇ.ಡಿ. ಮೇಲಿನ ಅಧಿಕಾರ ಬಳಸಿಕೊಂಡು ಪೂರ್ಣ ಬಲಪ್ರಯೋಗ ನಡೆಸಿದೆ. ಹಿಂದೆ ನನ್ನ ಮನೆ ಮೇಲೆ ದಾಳಿ ನಡೆಸಿತು. ಲಾಕರ್‌ಗಳ ಪರಿಶೀಲನೆ ನಡೆಸಿತು, ಆದರೆ ಅವರಿಗೆ ಏನೂ ಸಿಕ್ಕಿಲ್ಲ. ದೆಹಲಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಕ್ಕೆ ಪ್ರತಿಯಾಗಿ ಅವರು ನನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಅವರು ನನ್ನ ಕೆಲಸಗಳಿಗೆ ಅಡ್ಡಿ ಮಾಡಲು ಬಯಸುತ್ತಿದ್ದಾರೆ. ಆದರೆ ನಾನು ಈ ಹಿಂದೆಯೂ ತನಿಖೆಗೆ ಸಹಕರಿಸಿದ್ದೆ, ಮುಂದೆಯೂ ಸಹಕರಿಸುವೆ’ ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಆದರೆ, ದೆಹಲಿಯ ಹಣಕಾಸು ಸಚಿವರೂ (Delhi Finance Minister) ಆಗಿರುವ ಮನೀಶ್‌ ಸಿಸೋಡಿಯಾ (Manish Sisodia) ಅವರು 2023 - 24ರ ಹಣಕಾಸು ವರ್ಷದ (Financial Year) ರಾಷ್ಟ್ರ ರಾಜಧಾನಿಯ ಬಜೆಟ್ (Budget) ಅನ್ನು ಸಿದ್ಧಪಡಿಸುತ್ತಿರುವುದರಿಂದ ಸಿಬಿಐ (CBI) ಕಚೇರಿಗೆ ಹೋಗಲು ಕನಿಷ್ಠ ಒಂದು ವಾರ ಬೇಕು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಕೇಂದ್ರ ಸಂಸ್ಥೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿಯೂ ಹೇಳಿದ್ದಾರೆ.

ಇದನ್ನು ಓದಿ: ನನ್ನ ಮನೆ, ಕಚೇರಿ ಮೇಲೆ ದಾಳಿ ಮಾಡಿ ಸಿಬಿಐ ಬರಿಗೈಲಿ ಹಿಂದಿರುಗಿದೆ: ಸಿಸೋಡಿಯಾ

ಕಳೆದ ಅಕ್ಟೋಬರ್‌ 17ರಂದು ಕೂಡಾ ಮನೀಶ್‌ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಜೊತೆಗೆ ಅವರ ಮನೆ, ಕಚೇರಿ, ಲಾಕರ್‌ಗಳನ್ನು ಪರಿಶೀಲಿಸಿದ್ದರು. ಮದ್ಯ ಹಗರಣ ಸಂಬಂಧ ಸಿಬಿಐ ಈಗಾಗಲೇ ಆರೋಪಪಟ್ಟಿ ಸಲ್ಲಿಕೆ ಮಾಡಿದೆಯಾದರೂ ಅದಲ್ಲಿ ಮನೀಶ್‌ ಸಿಸೋಡಿಯಾ ಅವರ ಹೆಸರು ಸೇರಿಸಿಲ್ಲ. ಅವರ ಕುರಿತ ವಿಚಾರಣೆ ಇನ್ನೂ ಮುಂದುವರೆದಿರುವ ಕಾರಣ ಅವರ ಹೆಸರನ್ನು ಸೇರಿಸಿಲ್ಲ ಎಂದು ಸಿಬಿಐ ಮೂಲಗಳು ಹೇಳಿವೆ.

ದೆಹಲಿ ಸರ್ಕಾರದ ಮದ್ಯ ಲೈಸೆನ್ಸ್‌ ನೀತಿ ಕೆಲ ನಿರ್ದಿಷ್ಟ ವ್ಯಕ್ತಿಗಳಿಗೆ ಲಾಭ ಮಾಡಿಕೊಳ್ಳುವ ರೀತಿಯಲ್ಲಿತ್ತು ಎಂಬುದು ಸಿಬಿಐ ಆರೋಪ. ಆದರೆ ಆಮ್‌ ಆದ್ಮಿ ಪಕ್ಷ ಇದನ್ನು ತಳ್ಳಿಹಾಕಿದೆ.

ಇದನ್ನೂ ಓದಿ: ಮನೀಶ್ ಸಿಸೋಡಿಯಾಗೆ ಮತ್ತೊಂದು ಶಾಕ್, ಸಿಬಿಐ, ಇಡಿ ಬಳಿಕ ಅಸ್ಸಾಂನಿಂದ ಬಂತು ಬಾಣ!

ಫೆ.22ರಂದು ದಿಲ್ಲಿ ಮೇಯರ್‌ ಚುನಾವಣೆ: ಸುಪ್ರೀಂ ಕೋರ್ಟ್ ಆದೇಶ ಬೆನ್ನಲ್ಲೇ ಮುಹೂರ್ತ ನಿಗದಿ
ದಿಲ್ಲಿ ಮೇಯರ್‌ ಚುನಾವಣೆಗೆ ಕೊನೆಗೂ ಮುಹೂರ್ತ ನಿಗದಿ ಆಗಿದ್ದು, ಫೆಬ್ರವರಿ 22ರಂದು ಚುನಾವಣೆ ನಡೆಯಲಿದೆ. ಕೂಡಲೇ ಚುನಾವಣೆ ನಡೆಸಬೇಕು ಹಾಗೂ ಅದರಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನಕ್ಕೆ ಅವಕಾಶ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದ ಬೆನ್ನಲ್ಲೇ ಚುನಾವಣಾ ದಿನಾಂಕ ನಿಗದಿಯಾಗಿದೆ.
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಫೆಬ್ರವರಿ 22ರಂದು ಚುನಾವಣೆ ನಡೆಸಬೇಕು ಎಂದು ಶನಿವಾರ ಬೆಳಗ್ಗೆ ಶಿಫಾರಸು ಮಾಡಿದ್ದರು. ಸಂಜೆ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ.

ಮೊದಲಿನ ಸಭೆಯಲ್ಲಿ ಮೇಯರ್‌ ಆಯ್ಕೆ ಆಗಬೇಕು. ನಂತರ ಮೇಯರ್‌ ಅವರಿಂದಲೇ ಉಪ ಮಹಾಪೌರರ ಆಯ್ಕೆ ಪ್ರಕ್ರಿಯೆ ನಡೆಯಬೇಕು ಎಂದು ಕೋರ್ಟ್‌ ಆದೇಶಿಸಿತ್ತು.
10 ನಾಮನಿರ್ದೇಶಿತರಿಗೆ ಮತದಾನದ ಹಕ್ಕು ಸಂಬಂಧ ಗದ್ದಲ ಉಂಟಾಗಿ 3-4 ಬಾರಿ ಮೇಯರ್‌ ಆಯ್ಕೆ ಮುಂದೂಡಿಕೆ ಆಗಿತ್ತು. ಕೊನೆಗೆ ಆಪ್‌ ಮೇಯರ್‌ ಅಭ್ಯರ್ಥಿ ಶೆಲ್ಲಿ ಒಬೆರಾಯ್‌ ಅವರು ಈ ಬಗ್ಗೆ ಸುಪ್ರೀಂ ಕೋರ್ಟ್‌ ಕದ ಬಡಿದ ಬಳಿಕ, ಚುನಾವಣೆಗೆ ಕೋರ್ಟ್‌ ಆದೇಶಿಸಿತ್ತು.

ಇದನ್ನೂ ಓದಿ: ಅಬಕಾರಿ ಹಗರಣ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪಿಎ ಅರೆಸ್ಟ್!