ಮಣಿಪುರದಲ್ಲಿ ಸಿಎಂ ಬಿರೆನ್ ಸಿಂಗ್ ರಾಜೀನಾಮೆ ಬಳಿಕ ಕ್ಷಿಪ್ರಕ್ರಾಂತಿಯಾಗಿದೆ. ಇದೀಗ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. 

ಇಂಫಾಲ್(ಫೆ.13) ಮಣಿಪುರ ಕಳೆದ 2 ವರ್ಷಗಳಿಂದ ಸದಾ ಬಿಗುವಿನ ವಾತಾವರಣದಲ್ಲಿ ದಿನ ದೂಡುತ್ತಿದೆ. ಮಣಿಪುರ ಗಲಭೆ ಬಳಿಕ ಮೇಲ್ನೋಟಕ್ಕೆ ಶಾಂತವಾಗಿದ್ದರೂ ಒಳಗೊಳಗೆ ಬೇಗುದಿಗಳು ಹಾಗೇ ಇದೆ. ಇದರ ನಡುವೆ ಮುಖ್ಯಮಂತ್ರಿ ಬಿರೆನ್ ಸಿಂಗ್ ವಿರುದ್ದ ಪಕ್ಷದೊಳಗೆ, ಎನ್‌ಡಿಎ ಮೈತ್ರಿ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಬೆಂಬಲ ವಾಪಸ್ ಪಡೆಯು ಎಚ್ಚರಿಕೆಯನ್ನೂ ನೀಡಿತ್ತು. ತೀವ್ರ ಸಂಕಷ್ಟಕ್ಕೆ ಸಿಲುಕಿದ ಬಿರೇನ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿರೆನ್ ಸಿಂಗ್ ರಾಜೀನಾಮೆ ನೀಡಿ ಮೂರು ದಿನವಾದರೂ ಮತ್ತೊಬ್ಬ ಮುಖ್ಯಮಂತ್ರಿಯನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ಸೂಚಿಸಿಲ್ಲ. ಇದರ ಪರಿಣಾಮ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ.

Add Asianetnews Kannada as a Preferred SourcegooglePreferred

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಸುತ್ತೋಲೆ ಹೊರಡಿಸಿದ್ದಾರೆ. ಮಣಿಪುರ ರಾಜ್ಯಪಾಲರು ನೀಡಿದ ವರದಿ ಪ್ರಕಾರ, ರಾಜ್ಯದಲ್ಲಿ ಉದ್ಭವಿಸಿದ ರಾಜಕೀಯ ಬೆಳವಣಿಗೆಯಿಂದ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗುತ್ತಿದೆ. ಈ ಕುರಿತ ವಿವರವಾದ ಸುತ್ತೊಲೆಯನ್ನು ರಾಷ್ಟ್ಪತಿ ದ್ರೌಪದಿ ಮುರ್ಮು ಹೊರಡಿಸಿದ್ದಾರೆ. ಈ ಕ್ಷಣದಿಂದ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಪರಮಾಧಿಕಾರ ಚಲಾಯಿಸಲಿದ್ದಾರೆ.

ಮಣಿಪುರದಲ್ಲಿ ರಾಜಕೀಯ ಕ್ರಾಂತಿ, ಮುಖ್ಯಮಂತ್ರಿ ಬೀರೆನ್ ಸಿಂಗ್ ರಾಜೀನಾಮೆ

ಬಿರೆನ್ ಸಿಂಗ್ ರಾಜೀನಾಮೆ ಬಳಿಕ ಬಿಜೆಪಿ ಹೊಸ ಮುಖ್ಯಮಂತ್ರಿ ಹೆಸರನ್ನು ಸೂಚಿಸಲು ಹಿಂದೇಟು ಹಾಕಿದೆ. ಉದ್ದೇಶಪೂರ್ವಕವಾಗಿ ಬಿಜೆಪಿ ಬಿರೆನ್ ಸಿಂಗ್ ಸ್ಥಾನಕ್ಕೆ ಮತ್ತೊಬ್ಬ ಮುಖ್ಯಮಂತ್ರಿ ಹೆಸರನ್ನು ಸೂಚಿಸಿಲ್ಲ ಎನ್ನಲಾಗುತ್ತಿದೆ. ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡುವ ಉದ್ದೇಶದಿಂದ ಬಿಜೆಪಿ ಈ ನಡೆ ಅನುಸರಿಸಿದೆ ಎನ್ನಲಾಗುತ್ತಿದೆ. ಪ್ರಮುಖವಾಗಿ ಮಣಿಪುರಕ್ಕೆ ಇತ್ತೀಚೆಗೆ ರಾಜ್ಯಪಾಲರಾಗಿ ನೇಮಕಗೊಂಡ ಅಜಯ್ ಕುಮಾರ್ ಭಲ್ಲಾ ಅತ್ಯಂತ ದಕ್ಷ ಅಧಿಕಾರಿಯಾಗಿ ಹೆಸರುಗಳಿಸಿದ್ದರು. ಇದೀಗ ರಾಜ್ಯಪಾಲರಾಗಿ ಹಲವು ಮಹತ್ದ ನಿರ್ಣಯಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. 

ಮಣಿಪುರದಲ್ಲಿ ಮೇ 2023 ರಿಂದ ಜನಾಂಗೀಯ ಹಿಂಸಾಚಾರ ಮುಂದುವರೆದಿದೆ. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಈ ಸಂಘರ್ಷದಲ್ಲಿ ಈವರೆಗೆ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ವಿಫಲವಾದ್ದಕ್ಕಾಗಿ ವಿರೋಧ ಪಕ್ಷಗಳು ನಿರಂತರವಾಗಿ ಎನ್. ಬೀರೇನ್ ಸಿಂಗ್ ಸರ್ಕಾರವನ್ನು ಟೀಕಿಸುತ್ತಿದ್ದವು. ಇತ್ತೀಚೆಗೆ ಹಿಂಸಾಚಾರ ಮತ್ತೆ ಭುಗಿಲೆದ್ದಾಗ ಮುಖ್ಯಮಂತ್ರಿಗಳ ಮೇಲೆ ರಾಜೀನಾಮೆ ನೀಡುವ ಒತ್ತಡ ಹೆಚ್ಚಾಯಿತು. ಅವರ ವಿರುದ್ಧ ಜನರ ಆಕ್ರೋಶ ಹೆಚ್ಚುತ್ತಿರುವುದಲ್ಲದೆ, ಅವರದೇ ಪಕ್ಷದ ಶಾಸಕರು ಸಹ ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದರು. ರಾಜ್ಯವನ್ನು ನಿಭಾಯಿಸುವಲ್ಲಿ ವಿಫಲರಾದ ಕಾರಣ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಚರ್ಚೆಗಳು ನಡೆಯುತ್ತಿದ್ದವು.

ಎನ್. ಬೀರೇನ್ ಸಿಂಗ್ ರಾಜೀನಾಮೆ ನಂತರ ಕೇಂದ್ರ ಗೃಹ ಸಚಿವಾಲಯವು ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಲು ಭದ್ರತಾ ಸಂಸ್ಥೆಗಳಿಗೆ ಹೈ ಅಲರ್ಟ್ ಘೋಷಿಸಿದೆ. ರಾಜ್ಯದಲ್ಲಿ ಈಗಾಗಲೇ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಆದರೆ ಹಿಂಸಾಚಾರ ಭುಗಿಲೆದ್ದುವ ಆತಂಕದ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಬಹುದು.

ಹಿಂಸಾಪೀಡಿತ ಮಣಿಪುರದ ಸಿಎಂ ಬಿರೇನ್‌ ಸಿಂಗ್‌ ರಾಜೀನಾಮೆ: ಸುಪ್ರೀಂ ತನಿಖೆ ಬೆನ್ನಲ್ಲೇ ಘಟನೆ!