ದೆಹಲಿ ಕಾರು ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ಸೋಮವಾರ ಇನ್ನೊಬ್ಬ ಪ್ರಮುಖ ಸಹ-ಸಂಚುಕೋರನನ್ನು ಬಂಧಿಸಿದೆ. ಕಾಶ್ಮೀರದ ದಾನಿಷ್ ಅಲಿಯಾಸ್‌ ಜಾಸಿರ್‌ ಬಿಲಾಲ್‌ ವಾನಿ ಎಂಬಾತನೇ ಬಂಧಿತ. ಈ ಮೂಲಕ ಬಂಧಿತರ ಸಂಖ್ಯೆ 2ಕ್ಕೇರಿದೆ.

ನವದೆಹಲಿ : ದೆಹಲಿ ಕಾರು ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ಸೋಮವಾರ ಇನ್ನೊಬ್ಬ ಪ್ರಮುಖ ಸಹ-ಸಂಚುಕೋರನನ್ನು ಬಂಧಿಸಿದೆ. ಕಾಶ್ಮೀರದ ದಾನಿಷ್ ಅಲಿಯಾಸ್‌ ಜಾಸಿರ್‌ ಬಿಲಾಲ್‌ ವಾನಿ ಎಂಬಾತನೇ ಬಂಧಿತ. ಈ ಮೂಲಕ ಬಂಧಿತರ ಸಂಖ್ಯೆ 2ಕ್ಕೇರಿದೆ.

‘ಅನಂತ್‌ನಾಗ್‌ನ ಖಾಜಿಗುಂಡ್ ನಿವಾಸಿಯಾದ ವಾನಿ, ಡ್ರೋನ್‌ಗಳನ್ನು ಮಾರ್ಪಡಿಸುವ ಮತ್ತು ರಾಕೆಟ್‌ಗಳನ್ನು ತಯಾರಿಸಲು ಪ್ರಯತ್ನಿಸುವ ಮೂಲಕ ಭಯೋತ್ಪಾದಕ ದಾಳಿ ನಡೆಸಲು ದಿಲ್ಲಿ ಸ್ಫೋಟದ ಆತ್ಮಾಹುತಿ ಬಾಂಬರ್‌ ಡಾ। ಉಮರ್ ನಬಿಗೆ ತಾಂತ್ರಿಕ ಬೆಂಬಲವನ್ನು ನೀಡಿದ್ದ’ ಎಂದು ಹೇಳಿದೆ.

ದಾನಿಷ್‌ನನ್ನು ಬಂಧಿಸಿದ್ದು, ಎನ್‌ಐಎ ತನ್ನ ವಶಕ್ಕೆ

ಕೆಲವು ದಿನಗಳ ಹಿಂದೆಯೇ ಕಾಶ್ಮೀರ ಪೊಲೀಸರು ದಾನಿಷ್‌ನನ್ನು ಬಂಧಿಸಿದ್ದು, ಆತನನ್ನು ಎನ್‌ಐಎ ತನ್ನ ವಶಕ್ಕೆ ತೆಗೆದುಕೊಂಡಿದೆ. ‘ಡಾ। ಉಮರ್ ನಬಿ ಆತ್ಮಹತ್ಯಾ ದಾಳಿಕೋರನಾಗುವಂತೆ ಬ್ರೈನ್‌ವಾಷ್‌ ಮಾಡಿ ತರಬೇತಿ ನೀಡಿದ್ದ. ಆದರೆ ಬಳಿಕ ಇಸ್ಲಾಂ ಧರ್ಮದಲ್ಲಿ ಆತ್ಮಹತ್ಯೆ ನಿಷಿದ್ಧವಾಗಿದೆ. ಹಾಗಾಗಿ ಏಪ್ರಿಲ್‌ನಲ್ಲಿ ನಿರಾಕರಿಸಿದೆ’ ಎಂದು ದಾನಿಷ್‌ ಬಾಯಿಬಿಟ್ಟಿದ್ದ.

10 ದಿನ ಎನ್‌ಐಎ ವಶಕ್ಕೆ:

ಈ ನಡುವೆ, ಸ್ಫೋಟಕ್ಕೆ ಬಳಸಿದ್ದ ಹ್ಯುಂಡೈ ಐ20 ಕಾರು ಖರೀದಿಗೆ ಸಹಕರಿಸಿದ್ದ ಆರೋಪದಲ್ಲಿ ಭಾನುವಾರ ಬಂಧಿತನಾಗಿದ್ದ ಅಮೀರ್‌ ರಷೀದ್‌ ಅಲಿಯನ್ನು ದೆಹಲಿ ಕೋರ್ಟ್‌ 10 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ವಹಿಸಿದೆ. ಈತ ದಾಳಿಕೋರ ನಬಿಗೆ ಸಹಾಯ ಮಾಡಿದ್ದ ಹಾಗೂ ಮನೆಯನ್ನೂ ಒದಗಿಸಿದ್ದ ಎಂದು ಎನ್ಐಎ ವಾದಿಸಿದೆ.