ಮಮತಾ ಬ್ಯಾನರ್ಜಿ ಸ್ಥಾಪಿಸಿದ ಟಿಎಂಸಿ ಪಕ್ಷ ಒಡೆದು ಹೋಳಾಗಿದೆ. ಇದೀಗ ಬಂಡಾಯ ಗುಂಪು ಕಾರ್ಯಕಾರಿ ಸಮಿತಿ ರಚಿಸಿದೆ. ವಿಶೇಷ ಅಂದರೆ ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ಕಿತ್ತೆಸೆದಿದೆ. ಇತ್ತ ಅಭಿಷೇಕ್ ಬ್ಯಾನರ್ಜಿಯನ್ನು ಅಮಾನತು ಮಾಡಿದೆ. 

ಕೋಲ್ಕತಾ (ಜೂ.22) ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಪಕ್ಷದ ಪರಿಸ್ಥಿತಿ ಶೋಚನೀಯವಾಗಿದೆ. ಮಮತಾ ಬ್ಯಾನರ್ಜಿ ಸ್ಥಾಪಿಸಿದ ತೃಣಮೂಲಕ ಕಾಂಗ್ರೆಸ್ ಪಕ್ಷ ಒಡೆದು ಹೋಳಾಗಿದೆ. ಬಂಡಾಯ ಗುಂಪು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಈ ಬಂಡಾಯ ಗುಂಪು ಇದೀಗ ಅಸಲಿ ಟಿಎಂಸಿ ಪಕ್ಷ ಎಂದು ತಮ್ಮನ್ನು ತಾವು ಕರೆದುಕೊಂಡಿದ್ದು ಮಾತ್ರವಲ್ಲ, ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ಕಿತ್ತೆಸೆದು ಶಾಸಕ ಅರೂಪ್ ರಾಯ್‌ಗೆ ಪಟ್ಟ ಕಟ್ಟಿದೆ. ಇಷ್ಟೇ ಅಲ್ಲ ಮಮತಾ ಬ್ಯಾನರ್ಜಿ ಆಪ್ತ ಸಂಬಂಧಿ ಅಭಿಷೇಕ್ ಬ್ಯಾನರ್ಜಿಯನ್ನು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅಮಾನತು ಮಾಡಿದೆ. ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಬಂಡಾಯ ಗುಂಪು ರಚಿಸಿ ಮಮತಾ ಬ್ಯಾನರ್ಜಿಗೆ ಶಾಕ್ ಮೇಲೆ ಶಾಕ್ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಋತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ

ಪಶ್ಚಿಮ ಬಂಗಾಳ ವಿಧಾನಸಭಾ ವಿರೋಧ ಪಕ್ಷದ ನಾಯಕ ಋತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ಇಂದು ಕೋಲ್ಕತಾದಲ್ಲಿ ಮಹತ್ವದ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಟಿಎಂಸಿಯ 60ಕ್ಕೂ ಹೆಚ್ಚು ಶಾಸಕರು, ಕೋಲ್ಕತಾ ಪಾಲಿಕೆಯ 70ಕ್ಕೂ ಹೆಚ್ಚು ಕಾರ್ಪೋರೇಟರ್‌ಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಒಕ್ಕೊರಲಿನಿಂದ ಶಾಸಕ ಅರೂಪ್ ರಾಯ್ ಅವರನ್ನು ಟಿಎಂಸಿ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದೇ ವೇಳೆ ಮಮತಾ ಬ್ಯಾನರ್ಜಿಯನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ.

ಪ್ರತಿ ಮೂರು ವರ್ಷಕ್ಕೊಮ್ಮೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚನೆ ಮಾಡುವುದು ಟಿಎಂಸಿ ಪಕ್ಷದ ನಿಯಮವಾಗಿದೆ. ಈ ನಿಯಮದಂತೆ ಅತೀ ಹೆಚ್ಚು ಶಾಸಕರು, ಸಂಸದರು ಹಾಗೂ ನಾಯಕರನ್ನು ಹೊಂದಿರುವ ಅಸಲಿ ಟಿಎಂಸಿ ಪಕ್ಷ ಹೊಸ ಸಮಿತಿ ರಚಿಸಿದೆ.

ಮೂರು ಬಣಗಳಾಗಿ ಟಿಎಂಸಿ ಚೂರು ಚೂರು

ಟಿಎಂಸಿ ಪಕ್ಷ ಮೂರು ಬಣಗಳಾಗಿ ಒಡೆದು ಹೋಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಮೂಲ ಟಿಎಂಸಿ ಬಣ. ಈ ಬಣದಲ್ಲಿ ಆಪ್ತ ಸಂಬಂಧಿ ಅಭಿಷೇಕ್ ಬ್ಯಾನರ್ಜಿ, ಕಲ್ಯಾಣ್ ಬ್ಯಾನರ್ಜಿ ಸೇರಿದಂತೆ ಕೆಲ ನಾಯಕರಿದ್ದಾರೆ. ಇನ್ನು ಅನೂಪ್ ರಾಯ್, ಋತಬ್ರತ ಬ್ಯಾನರ್ಜಿ ನೇತೃತ್ವದ ಅಸಲಿ ಟಿಎಂಸಿ ಬಣ. ಮತ್ತೊಂದು ಬಣ 20 ಸಂಸದರು ಟಿಎಂಸಿಯಿಂದ ಹೊರಬಂದು ಈಗಾಗಲೇ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾಗೆ ಬೆಂಬಲ ನೀಡಿದ್ದಾರೆ. ಇದೀಗ ಮೂರು ಬಣಗಳಿಂದ ಪಕ್ಷದ ಆಸ್ತಿ, ಖಾತೆಯಲ್ಲಿರುವ ಹಣ, ಲೋಗೋಗಾಗಿ ಕಿತ್ತಾಟ ಶುರುವಾಗಿದೆ. ಕಾನೂನು ಹೋರಾಟಗಳು ತೀವ್ರಗೊಳ್ಳುತ್ತಿದೆ.