ಬಂಗಾಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅವಮಾನ ಮಾಡಲಾಗಿದೆ ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಟಿಎಂಸಿ ತಿರುಗೇಟು ನೀಡಿದೆ. ರಾಷ್ಟ್ರಪತಿ ನಿಂತಿದ್ದರೆ, ಪ್ರಧಾನಿ ಮತ್ತು ಅಡ್ವಾಣಿ ಕುಳಿತಿರುವ ಹಳೆಯ ಫೋಟೋವನ್ನು ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೋಲ್ಕತ್ತಾ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿಗೆ ಸಂಬಂಧಿಸಿದ ವಿವಾದದಲ್ಲಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಧಾನಿ ನರೇಂದ್ರ ಮೋದಿಯವರಿಗೆ ತಿರುಗೇಟು ನೀಡಿದೆ. ಹಳೆಯ ಫೋಟೋವೊಂದನ್ನು ಮುಂದಿಟ್ಟುಕೊಂಡು ಟಿಎಂಸಿ, ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದೆ. ರಾಷ್ಟ್ರಪತಿ ನಿಂತಿದ್ದರೆ, ಪ್ರಧಾನಿ ಮತ್ತು ಎಲ್.ಕೆ. ಅಡ್ವಾಣಿ ಕುಳಿತಿರುವ ಫೋಟೋವನ್ನು ಟಿಎಂಸಿ ಬಿಡುಗಡೆ ಮಾಡಿದೆ. 'ರಾಷ್ಟ್ರಪತಿ ಹುದ್ದೆಗೆ ಗೌರವ ಕೊಡುವ ಬಗ್ಗೆ ಪ್ರಧಾನಿ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಆದರೆ ಈ ಫೋಟೋ ನೋಡಿ. ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ ನಿಂತಿದ್ದಾರೆ, ಆದರೆ ಪ್ರಧಾನಿ ತಮ್ಮ ಕುರ್ಚಿಯಲ್ಲಿ ಆರಾಮವಾಗಿ ಕುಳಿತಿದ್ದಾರೆ. ರಾಷ್ಟ್ರಪತಿ ಮತ್ತು ಅವರ ಹುದ್ದೆಗೆ ತೋರಿದ ಅಗೌರವ ಈ ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಇಂಥವರಿಂದ ಬರುವ ರಾಷ್ಟ್ರಪತಿ ಗೌರವದ ಮಾತುಗಳೆಲ್ಲವೂ ಪೊಳ್ಳಾಗಿ ಕಾಣಿಸುತ್ತವೆ ಎಂದು ಟಿಎಂಸಿ ಹೇಳಿದೆ. ಕಾರ್ಯಕ್ರಮವೊಂದರಲ್ಲಿ ಟಿಎಂಸಿ ಕಾರ್ಯಕರ್ತರು ಈ ಚಿತ್ರವನ್ನು ಮುದ್ರಿಸಿದ ಫ್ಲೆಕ್ಸ್ ಅನ್ನು ಪ್ರದರ್ಶಿಸಿದರು. ಇದರಲ್ಲಿ ಪ್ರಧಾನಿ ಮೋದಿ, ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಕುಳಿತಿದ್ದರೆ, ರಾಷ್ಟ್ರಪತಿ ಅವರ ಪಕ್ಕದಲ್ಲಿ ನಿಂತಿದ್ದಾರೆ.
ಪ್ರತಿ ಚುನಾವಣೆಯ ಮುಂಚೆಯೂ ಪ್ರಧಾನಿ ಬಂಗಾಳದ ಮೇಲೆ ದಾಳಿ ಮಾಡುತ್ತಾರೆ ಎಂದು ಮಮತಾ ಆರೋಪಿಸಿದರು. 'ರಾಷ್ಟ್ರಪತಿ ಭಾಗವಹಿಸಿದ್ದ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಆಯೋಜಿಸಿರಲಿಲ್ಲ. ಅದನ್ನು ಒಂದು ಖಾಸಗಿ ಸಂಸ್ಥೆ ಆಯೋಜಿಸಿತ್ತು. ಆದರೆ ರಾಷ್ಟ್ರಪತಿಗಾಗಿ ಕಾರ್ಯಕ್ರಮ ಆಯೋಜಿಸಲು ಆ ಸಂಸ್ಥೆಗೆ ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿತ್ತು. ಅವರು ನಮ್ಮನ್ನು ಕಾರ್ಯಕ್ರಮಕ್ಕೆ ಸೇರಿಸಿಕೊಳ್ಳಲಿಲ್ಲ. ಆಹ್ವಾನವನ್ನು ಸ್ವೀಕರಿಸುವುದು ಗೌರವಾನ್ವಿತ ರಾಷ್ಟ್ರಪತಿಯವರ ಇಚ್ಛೆ. ಅದು ಅವರ ವಿಶೇಷಾಧಿಕಾರ ಎಂದು ಮಮತಾ ಹೇಳಿದರು.
ಡಾರ್ಜಿಲಿಂಗ್ನಲ್ಲಿ ಶನಿವಾರ ನಡೆದ 9ನೇ ಅಂತರಾಷ್ಟ್ರೀಯ ಸಂತಾಲ್ ಸಮ್ಮೇಳನಕ್ಕಾಗಿ ರಾಷ್ಟ್ರಪತಿ ಮುರ್ಮು ಅವರು ಬಂಗಾಳಕ್ಕೆ ಭೇಟಿ ನೀಡಿದಾಗ ಈ ವಿವಾದ ಶುರುವಾಗಿತ್ತು. ರಾಷ್ಟ್ರಪತಿಯನ್ನು ಸ್ವಾಗತಿಸಲು ಮುಖ್ಯಮಂತ್ರಿ ಅಥವಾ ಇತರ ಸಚಿವರು ಬಂದಿರಲಿಲ್ಲ. ಅವರಿಗೆ ಮೀಸಲಿಟ್ಟ ಶೌಚಾಲಯದಲ್ಲಿ ನೀರಿರಲಿಲ್ಲ ಮತ್ತು ದಾರಿಯಲ್ಲಿ ಕಸ ಬಿದ್ದಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ರಾಜ್ಯದಿಂದ ವಿವರಣೆ ಕೇಳಿ ಪತ್ರ ಕಳುಹಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಕೂಡ ಬಂಗಾಳ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಈ ಘಟನೆಯನ್ನು 'ನಾಚಿಕೆಗೇಡು' ಮತ್ತು 'ನಡೆಯಬಾರದ್ದು' ಎಂದು ಅವರು ಬಣ್ಣಿಸಿದ್ದರು. ಪ್ರಜಾಪ್ರಭುತ್ವ ಮತ್ತು ಆದಿವಾಸಿ ಸಮುದಾಯಗಳ ಸಬಲೀಕರಣದಲ್ಲಿ ನಂಬಿಕೆ ಇರುವವರೆಲ್ಲರೂ ನಿರಾಶೆಗೊಂಡಿದ್ದಾರೆ. ಆದಿವಾಸಿ ಸಮುದಾಯದಿಂದ ಬಂದ ರಾಷ್ಟ್ರಪತಿಗಳು ವ್ಯಕ್ತಪಡಿಸಿದ ನೋವು ಭಾರತದ ಜನರ ಮನಸ್ಸಿನಲ್ಲಿ ದೊಡ್ಡ ದುಃಖಕ್ಕೆ ಕಾರಣವಾಗಿದೆ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
ಟಿಎಂಸಿ ಸರ್ಕಾರ ಎಲ್ಲಾ ಎಲ್ಲೆಗಳನ್ನು ಮೀರಿದೆ. ರಾಷ್ಟ್ರಪತಿಗೆ ಮಾಡಿದ ಈ ಅವಮಾನಕ್ಕೆ ಅವರ ಆಡಳಿತವೇ ಹೊಣೆ. ಸಂತಾಲ್ ಸಂಸ್ಕೃತಿಯಂತಹ ಪ್ರಮುಖ ವಿಷಯವನ್ನು ಪಶ್ಚಿಮ ಬಂಗಾಳ ಸರ್ಕಾರ ಇಷ್ಟು ಹಗುರವಾಗಿ ತೆಗೆದುಕೊಂಡಿರುವುದು ಅಷ್ಟೇ ದುರದೃಷ್ಟಕರ. ರಾಷ್ಟ್ರಪತಿ ಹುದ್ದೆ ರಾಜಕೀಯ ಮೀರಿದ್ದು, ಈ ಹುದ್ದೆಯ ಪಾವಿತ್ರ್ಯತೆಯನ್ನು ಯಾವಾಗಲೂ ಗೌರವಿಸಬೇಕು ಎಂದು ಮೋದಿ ಹೇಳಿದ್ದರು. ಆದರೆ, ರಾಷ್ಟ್ರಪತಿ ಭೇಟಿಯಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ ಎಂದು ಹೇಳಿದ ಮಮತಾ, ದೇಶದ ಅತ್ಯುನ್ನತ ಹುದ್ದೆಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.


