ಮಾಲ್ಡಾದಲ್ಲಿ 7 ನ್ಯಾಯಾಂಗ ಅಧಿಕಾರಿಗಳಿಗೆ ಘೇರಾವ್‌ ಹಾಕಿದ ಪ್ರಕರಣದ ಪ್ರಮುಖ ಸೂತ್ರಧಾರಿ, ವಕೀಲ ಮೊಫಾಕ್ಕರುಲ್‌ ಇಸ್ಲಾಂನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ಹಿಂದೆ ಬಿಜೆಪಿ, ಎಐಎಂಐಎಂ ಮತ್ತು ಐಎಸ್‌ಎಫ್‌ ಪಕ್ಷಗಳ ಕೈವಾಡವಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಬೆಂಗಳೂರಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಆರೋಪಿಯನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.

ಕೋಲ್ಕತಾ : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಭಾಗಿಯಾಗಿದ್ದ 7 ನ್ಯಾಯಾಂಗ ಅಧಿಕಾರಿಗಳಿಗೆ ಮಾಲ್ಡಾದಲ್ಲಿ 9 ಗಂಟೆ ಘೇರಾವ್‌ ಹಾಕಿದ ಘಟನೆಯ ಮಾಸ್ಟರ್‌ ಮೈಂಡ್‌, ವಕೀಲ ಮೊಫಾಕ್ಕರುಲ್‌ ಇಸ್ಲಾಂ ಹಾಗೂ ಆತನ ಸಹಚರರನ್ನು ಪಶ್ಟಿಮ ಬಂಗಾಳ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 33ಕ್ಕೇರಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ನಡುವೆ ಮಾಲ್ಡಾ ಘಟನೆ ಹಿಂದೆ ಎಐಎಂಎ, ಐಎಸ್‌ಎಫ್‌ ಪಕ್ಷಗಳ ಕೈವಾಡ ಇದೆ. ಬಿಜೆಪಿಯು ಎಂಐಎಂನಿಂದ ಮೊಫಾಕ್ಕರುಲ್‌ ಇಸ್ಲಾಂನನ್ನು ಎರವಲು ಪಡೆದು ಈ ಕೃತ್ಯ ಮಾಡಿಸಿದೆ. ಐಎಸ್‌ಎಫ್‌ ಕೂಡ ಅವರ ಜತೆಗಿದೆ ಎಂದು ಪಶ್ಟಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ಪ್ರಚೋದನೆಯಿಂದಲೇ ಈ ರೀತಿಯ ಘಟನೆ ನಡೆದಿದೆ ಎಂದು ದೂರಿದ್ದಾರೆ.

ಏರ್ಪೋರ್ಟಲ್ಲಿ ಬಂಧನ:

ಮಾಲ್ಡಾ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಎಂಐಎಂ ಪಕ್ಷದ ನಾಯಕನೂ ಆಗಿರುವ ಆರೋಪಿ ಮೊಫಾಕ್ಕರುಲ್‌ ಇಸ್ಲಾಂನ ಬಂಧನಕ್ಕೆ ಬಲೆಬೀಸಿದ್ದರು. ಆತ ಸಿಲಿಗುರಿಯ ಬಾಗ್‌ಡೋಗ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ಬಂಧಿಸಿದ್ದಾರೆ.

ಮಾಲ್ಡಾದ ಕಾಲಿಯಾಚಕ್‌ ಪ್ರದೇಶದಲ್ಲಿ ಎಸ್‌ಐಆರ್‌ ಕಾರ್ಯದಲ್ಲಿ ನಿರತ ಏಳು ನ್ಯಾಯಾಂಗ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಬುಧವಾರ ಸಂಜೆ 3.30ರಿಂದ ತಡರಾತ್ರಿ ವರೆಗೆ ಕಚೇರಿಯಲ್ಲೇ ಘೇರಾವ್‌ ಹಾಕಿದ್ದರು. ಈ ಘಟನೆ ಕುರಿತು ಸುಪ್ರೀಂ ಕೋರ್ಟ್‌ ಕೂಡ ತೀವ್ರ ಆಘಾತ ವ್ಯಕ್ತಪಡಿಸಿ ಪಶ್ಚಿಮ ಬಂಗಾಳದ ಕಾನೂನು ಸುವ್ಯವಸ್ಥೆ ಕುರಿತು ತರಾಟೆಗೆ ತೆಗೆದುಕೊಂಡಿತ್ತು.

500 ಸಿಎಪಿಎಫ್‌ ತಂಡ:

ಪಶ್ಟಿಮ ಬಂಗಾಳದಲ್ಲಿ ಚುನಾವಣೆಯ ಸಂದರ್ಭದಲ್ಲಿ ಮಾತ್ರವಲ್ಲದೆ ಚುನಾವಣೋತ್ತರದಲ್ಲೂ ಹಿಂಸಾಚಾರದ ಆತಂಕ ಇರುವ ಹಿನ್ನೆಲೆಯಲ್ಲಿ ಕೆಲ ದಿನ ಕೇಂದ್ರೀಯ ಪೊಲೀಸ್‌ ಪಡೆ(ಸಿಎಪಿಎಫ್‌)ಗಳ 500 ಕಂಪನಿಗಳನ್ನು ಮೇ 4ರಂದು ನಡೆಯಲಿರುವ ಮತಎಣಿಕೆಯ ಬಳಿಕವೂ ರಾಜ್ಯದಲ್ಲೇ ಉಳಿಸಿಕೊಳ್ಳಲು ಚುನಾವಣಾ ಆಯೋಗ ನಿರ್ಧರಿಸಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಚುನಾವಣೋತ್ತರ ಹಿಂಸಾಚಾರ ನಡೆದಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.