ಮಧ್ಯಪ್ರದೇಶದ ರೈತನಿಗೆ ಒಲಿದ ಅದೃಷ್ಟ, ಗುತ್ತಿಗೆ ಗಣಿಯಲ್ಲಿ ಸಿಕ್ತು 12 ಕ್ಯಾರಟ್ ವಜ್ರ!
ಈ ವಜ್ರದ ಹರಾಜಿನಿಂದ ಬರುವ ಹಣವನ್ನು ವ್ಯಾಪಾರವನ್ನು ಸ್ಥಾಪಿಸಲು ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಬಳಸುತ್ತೇನೆ ಎಂದು ಮಧ್ಯಪ್ರದೇಶದ ರೈತ ಹೇಳಿದ್ದಾರೆ.
ಭೋಪಾಲ್ (ಮೇ.4): ವಜ್ರದ ಗಣಿಗಳಿಗೆ (Diamond Mines) ಹೆಸರುವಾಸಿಯಾದ ಪನ್ನಾದಲ್ಲಿನ (Panna) ಸಣ್ಣ, ಗುತ್ತಿಗೆ ಪಡೆದ ಗಣಿಯಲ್ಲಿ (leased mine) 11.88 ಕ್ಯಾರೆಟ್ ಉತ್ತಮ ಗುಣಮಟ್ಟದ ವಜ್ರವನ್ನು ತೆಗೆದ ಮಧ್ಯಪ್ರದೇಶದ ರೈತ, ಜಾಕ್ ಪಾಟ್ ಹೊಡೆದಿದ್ದಾರೆ.
ಕೂಲಿ ಕೆಲಸ ಮಾಡುತ್ತಿರುವ ಸಣ್ಣ-ಸಣ್ಣ ರೈತ ಪ್ರತಾಪ್ ಸಿಂಗ್ ಯಾದವ್ (Pratap Singh Yadav) ಅವರು ಜಿಲ್ಲೆಯ ಪಟ್ಟಿ ಪ್ರದೇಶದ ಗಣಿಯಿಂದ ಈ ವಜ್ರವನ್ನು ಕಂಡುಕೊಂಡಿದ್ದಾರೆ ಎಂದು ವಜ್ರದ ಅಧಿಕಾರಿ ರವಿ ಪಟೇಲ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಉತ್ತಮ ಗುಣಮಟ್ಟದ ಈ ವಜ್ರವನ್ನು ಮುಂಬರುವ ಹರಾಜಿನಲ್ಲಿ ಮಾರಾಟಕ್ಕೆ ಇಡಲಾಗುವುದು ಮತ್ತು ಸರ್ಕಾರದ ಮಾರ್ಗಸೂಚಿಯಂತೆ ಬೆಲೆಯನ್ನು ನಿಗದಿಪಡಿಸಲಾಗುವುದು. ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, "ನಾನು ಸಣ್ಣ ಕೃಷಿ ಭೂಮಿ ಹೊಂದಿರುವ ಬಡ ವ್ಯಕ್ತಿ, ನಾನು ಕೂಡ ಕೂಲಿ ಕೆಲಸ ಮಾಡುತ್ತೇನೆ, ನಾನು ಕಳೆದ ಮೂರು ತಿಂಗಳಿನಿಂದ ಈ ಗಣಿಯಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದೇನೆ. ನನಗೆ ಸಿಕ್ಕಿರುವ ಈ ವಜ್ರವನ್ನು ಠೇವಣಿ ಮಾಡಿದ್ದೇನೆ " ಈ ವಜ್ರದ ಹರಾಜಿನಿಂದ ಬಂದ ಹಣವನ್ನು ವ್ಯಾಪಾರ ಸ್ಥಾಪಿಸಲು ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಬಳಸುತ್ತೇನೆ ಎಂದು ಹೇಳಿದ್ದಾರೆ.
ಖಾಸಗಿ ಅಂದಾಜಿನ ಪ್ರಕಾರ ವಜ್ರವು ಹರಾಜಿನಲ್ಲಿ 50 ಲಕ್ಷ ರೂಪಾಯಿಗೂ ಹೆಚ್ಚು ಬೆಲೆ ಬಾಳಬಹುದು ಎಂದು ಹೇಳಲಾಗಿದೆ. ಕಚ್ಚಾ ವಜ್ರವನ್ನು ಹರಾಜು ಹಾಕಲಾಗುವುದು ಮತ್ತು ಆದಾಯವನ್ನು ಸರ್ಕಾರದ ರಾಯಧನ ಮತ್ತು ತೆರಿಗೆಯನ್ನು ಕಡಿತಗೊಳಿಸಿದ ನಂತರ ರೈತರಿಗೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರ ಶೇಕಡಾ 12ರಷ್ಟು ರಾಯಧನ ಪಡೆದುಕೊಳ್ಳಲಿದೆ. ಉಳಿದ ಹಣವನ್ನು ವಜ್ರವನ್ನು ಠೇವಣಿ ಮಾಡಿದ ವ್ಯಕ್ತಿಗೆ ನೀಡುತ್ತದೆ.
ಪನ್ನಾ ಜಿಲ್ಲೆಯಲ್ಲಿ 12 ಲಕ್ಷ ಕ್ಯಾರೆಟ್ ವಜ್ರ ನಿಕ್ಷೇಪವಿದೆ ಎಂದು ಅಂದಾಜಿಸಲಾಗಿದೆ. ಬಡತನದಿಂದ ಬೇಸತ್ತಿದ್ದ ಪ್ರತಾಪ್ ಸಿಂಗ್ ಯಾದವ್, ವಜ್ರದ ಗಣಿಗಾರಿಕೆ ಮಾಡಲು ಜಾಗವನ್ನು ಗುತ್ತಿಗೆ ಪಡೆದುಕೊಂಡಿದ್ದರು. ಗಣಿಗಾರಿಕೆಯಲ್ಲಿ ಹಗಲು ರಾತ್ರಿ ದುಡಿಯುತ್ತಿದ್ದ ಪ್ರತಾಪ್ ಸಿಂಗ್ ಯಾದವ್ ಗೆ ಈಗ ಅದೃಷ್ಟ ಖುಲಾಯಿಸಿದೆ.
IPL 2022 ಚೆನ್ನೈ ವಿರುದ್ಧ ಆರ್ ಸಿಬಿ ತಂಡಕ್ಕೆ ಭರ್ಜರಿ ಗೆಲುವು
ಕಳೆದ 10-12 ವರ್ಷಗಳಿಂದ ವಜ್ರದ ಗಣಿಯಲ್ಲಿ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದೇನೆ ಎಂದು 58 ವರ್ಷದ ಪ್ರತಾಪ್ ಸಿಂಗ್ ಯಾದವ್ ಸಂತಸ ವ್ಯಕ್ತಪಡಿಸಿದ್ದಾರೆ. ಕೊನೆಗೆ ಭಗವಾನ್ ಜುಗಲ್ ಕಿಶೋರ್ ಜೀ ನನ್ನ ಮನವಿಗೆ ಕಿವಿಗೊಟ್ಟು ಬಡತನವನ್ನು ದೂರ ಮಾಡಿದ್ದಾನೆ. ನನಗೆ ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿದ್ದು, ಮಕ್ಕಳು ಜೀವನದಲ್ಲಿ ತೊಂದರೆ ಅನುಭವಿಸಬಾರದು, ನಾನು ಯಾವುದಾದರು ವ್ಯಾಪಾರ ಆರಂಭಿಸುತ್ತೇನೆ ಎಂದು ಯಾದವ್ ಹೇಳಿದರು. ಪ್ರತಾಪ್ ಸಿಂಗ್ ಯಾದವ್ ಬಳಿ ಕೇವಲ ಒಂದು ಎಕರೆ ಕೃಷಿ ಭೂಮಿ ಇತ್ತು, ಆದರೆ, ಅದರಲ್ಲಿ ಕೃಷಿ ಮಾಡಲು ಸಾಧ್ಯವಾಗದೇ ಖಾಲಿ ಉಳಿಸಿತ್ತು. ಈಗ ವಜ್ರದಿಂದ ಈ ಎಲ್ಲಾ ತೊಂದರೆಗಳು ದೂರವಾಗುವ ಭರವಸೆಯಲ್ಲಿ ಪ್ರತಾಪ್ ಸಿಂಗ್ ಯಾದವ್ ಇದ್ದಾರೆ.
ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ರಸ್ತೆಯಲ್ಲಿ ನಡೆಯದ ಈದ್ ನಮಾಜ್, ಜನತೆಯನ್ನು ಶ್ಲಾಘಿಸಿದ ಯೋಗಿ!
ಕಣ್ಣು ತೆರೆಯುವಷ್ಟರಲ್ಲಿ ಫುಟ್ ಪಾತ್ ನಿಂದ ಸಿಂಹಾಸನಕ್ಕೆ ಏರುವಂಥ ಪವಾಡ ಏನಾದರೂ ನಡೆದರೆ ಅದು ರತ್ನಗರ್ಭ ಎನಿಸಿಕೊಂಡಿರುವ ಪ್ರದೇಶ ಪನ್ನಾದಲ್ಲಿ ಮಾತ್ರ ಸಾಧ್ಯ. ಇದು ಈ ಭೂಮಿನ ಗುಣ ಕೂಡ ಹೌದು. ಯಾರ ಅದೃಷ್ಟ ಹೇಗೆ ಬದಲಾಗುತ್ತದೆ ಎನ್ನುವುದನ್ನು ಇಲ್ಲಿ ನಿರೀಕ್ಷೆಯೇ ಮಾಡಲಾಗದು. ಮೇ 4 ರ ಬುಧವಾರದಂದು ಜಾರ್ಕುವಾ ಗ್ರಾಮದ ಪ್ರತಾಪ್ ಸಿಂಗ್ ಯಾದವ್ ಅವರ ಜೀವನದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ. ರೈತ ಪ್ರತಾಪ್ ಸಿಂಹ ಯಾದವ್ ಅವರಿಗೆ ಅಮೂಲ್ಯ ವಜ್ರ ಸಿಕ್ಕಿದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಮನೆಯಲ್ಲಿ ಹಬ್ಬದ ವಾತಾವರಣ ಕಂಡು ಬಂದಿದ್ದು, ಎಲ್ಲರೂ ಅಭಿನಂದಿಸುತ್ತಿದ್ದು, ಪರಿಚಿತರು, ಬಂಧುಗಳು ಭೇಟಿ ನೀಡಲಾರಂಭಿಸಿದ್ದಾರೆ.