ಲಖನೌ ಹಿಂಸಾಚಾರದ ಮಾಸ್ಟರ್‌ಮೈಂಡ್, ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ರಾಜ್ಯಾಧ್ಯಕ್ಷ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಲಖನೌ [ಡಿ.24]: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಉತ್ತರಪ್ರದೇಶ ರಾಜಧಾನಿ ಲಖನೌದಲ್ಲಿ ಕಳೆದ ವಾರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಉಂಟಾದ ಹಿಂಸಾಚಾರದ ಮಾಸ್ಟರ್‌ಮೈಂಡ್, ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ರಾಜ್ಯಾಧ್ಯಕ್ಷ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಉತ್ತರಪ್ರದೇಶದಲ್ಲಿ 18 ಮಂದಿಯನ್ನು ಬಲಿ ಪಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ಹಿಂದೆ ಪಿಎಫ್‌ಐ ಹಾಗೂ ನಿಷೇಧಿತ ಸಂಘಟನೆ ಸಿಮಿ ಕೈವಾಡವಿರುವ ಬಗ್ಗೆ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ಶಂಕೆ ವ್ಯಕ್ತಪಡಿಸಿದ್ದರು. ಇದಾದ ಮರುದಿನವೇ ಈ ಬಂಧನ ನಡೆದಿರುವುದು ಗಮನಾರ್ಹ ‘ಲಖನೌದಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣನಾದ ಮಾಸ್ಟರ್‌ಮೈಂಡ್ ಅನ್ನು ಬಂಧಿಸಿದ್ದೇವೆ.

ವಾಸೀಂ, ನದೀಮ್ ಹಾಗೂ ಅಶ್ಫಾಕ್ ಎಂಬುವರನ್ನು ಸೆರೆ ಹಿಡಿದಿದ್ದೇವೆ. ಈ ಮೂವರೂ ಪಿಎಫ್‌ಐ ಸಂಘಟನೆಯವರು. ಈ ಪೈಕಿ ವಾಸೀಂ, ಪಿಎಫ್‌ಐ ಸಂಘಟನೆಯ ಉತ್ತರಪ್ರದೇಶದ ಅಧ್ಯಕ್ಷ. ಅಶ್ಫಾಕ್ ಖಚಾಂಚಿಯಾಗಿದ್ದರೆ, ನದೀಮ್ ಸದಸ್ಯನಾಗಿದ್ದಾನೆ ಎಂದು ಲಖನೌದ ಎಸ್ ಎಸ್‌ಪಿ ಕಲಾನಿಧಿ ನೈಥಾನಿ ಅವರು ಸುದ್ದಿಗಾರರಿಗೆ ತಿಳಿಸಿದರು. ಬಂಧಿತರಿಂದ ಎನ್‌ಆರ್ ಸಿ/ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸುವ ಪ್ಲಕಾರ್ಡ್, ಧ್ವಜ, ಕರಪತ್ರ, ಕಾಗದಪತ್ರ, ಸಾಹಿತ್ಯ, ದಿನಪತ್ರಿಕೆ ಕಟಿಂಗ್, ಬ್ಯಾನರ್, ಪೋಸ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಬಿಜೆಪಿಗೆ ಮತ್ತೊಂದು ಮುಖಭಂಗ; NRCಗೆ ಪಕ್ಷದ ಸಿಎಂರಿಂದಲೇ ಅಪಸ್ವರ!...

ಲಖನೌ ಪ್ರತಿಭಟನೆಗಾಗಿ ಡಿ. 19ರಂದೇ ತಂತ್ರಗಾರಿಕೆ ರೂಪಿಸಿದ್ದೆವು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ್ದೆವು. ಇದಕ್ಕಾಗಿ ವಾಟ್ಸ್‌ಆ್ಯಪ್ ಮತ್ತಿತರೆ ಮಾಧ್ಯಮಗಳನ್ನು ಬಳಸಿಕೊಂಡಿದ್ದೆವು ಎಂದು ವಿಚಾರಣೆ ವೇಳೆ ನದೀಮ್ ಹಾಗೂ ಅಶ್ಫಾಕ್ ಒಪ್ಪಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.

ಡಿಸೆಂಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ