ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯ ಸುದ್ದಿ ಕೇವಲ ಊಹಾಪೋಹವಾಗಿದ್ದು, 'ಡೊಮೆಸ್ಟಿಕ್' ಪದದ ಬಳಕೆಯಲ್ಲಿನ ಗೊಂದಲದಿಂದ ಇದು ಸೃಷ್ಟಿಯಾಗಿದೆ. ಈ ಗೊಂದಲದಿಂದಾಗಿ ಜನರು ವಿಪರೀತ ಖರೀದಿಗೆ ಮುಂದಾಗಿ ಕೃತಕ ಅಭಾವಕ್ಕೆ ಕಾರಣರಾಗಿದ್ದಾರೆ. 

ಬೆಂಗಳೂರು (ಮಾ.10): ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಾಗುತ್ತಿದೆ ಎಂಬ ಸುದ್ದಿ ಈಗ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಆದರೆ, ಈ ಆತಂಕದ ಹಿಂದೆ ಸತ್ಯಕ್ಕಿಂತ ಹೆಚ್ಚಾಗಿ 'ಪದಗಳ ಬಳಕೆ'ಯಲ್ಲಿನ ಗೊಂದಲ ಮತ್ತು ವ್ಯವಸ್ಥಿತವಾಗಿ ಹಬ್ಬಿಸಲಾದ ಊಹಾಪೋಹಗಳೇ ಪ್ರಮುಖ ಪಾತ್ರ ವಹಿಸಿವೆ. ತೈಲ ಸಂಸ್ಕರಣಾಗಾರಗಳಲ್ಲಿನ 'ಡೊಮೆಸ್ಟಿಕ್' ಬಳಕೆಯ ವ್ಯಾಖ್ಯಾನಕ್ಕೂ, ನಾವು ಬಳಸುವ ಸಿಲಿಂಡರ್‌ಗಳ ವಿತರಣಾ ಕ್ರಮಕ್ಕೂ ಇರುವ ವ್ಯತ್ಯಾಸವೇ ಈ ಕೃತಕ ಅಭಾವದ ಸೃಷ್ಟಿಗೆ ಮೂಲ ಕಾರಣ. ಗಲ್ಫ್ ರಾಷ್ಟ್ರಗಳ ಬಿಕ್ಕಟ್ಟಿನ ನಡುವೆಯೂ ಭಾರತ ತನ್ನ ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಸನ್ನದ್ಧವಾಗಿರುವಾಗ, ನಾವು ಗಾಬರಿಯಿಂದ ಮುಗಿಬಿದ್ದು ಕೃತಕ ಅಭಾವಕ್ಕೆ ದಾರಿ ಮಾಡಿಕೊಡಬೇಕೇ? ಈ ಗೊಂದಲದ ಅಸಲಿಯತ್ತು ಮತ್ತು ಅಂಕಿ-ಅಂಶಗಳ ಆಧಾರಿತ ಮಾಹಿತಿಯನ್ನು ಪತ್ರಕರ್ತ ಹಾಗೂ ಭಾಷಾಂತರಕಾರ ಕೃಷ್ಣಭಟ್‌ ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ. ಅವರ ಫೇಸ್‌ಬುಕ್‌ ಪುಟದ ನೇರ ಬರಹ..

ಎಲ್‌ಪಿಜಿ ಕೊರತೆಯ ಆತಂಕ ಅನ್ನೋದು ಮೇಲ್ನೋಟಕ್ಕೆ ನಮ್ಮ ಶುದ್ಧ ಗೊಂದಲ ಹುಟ್ಟುಹಾಕುವ ಮನಸ್ಥಿತಿ ಅಷ್ಟೇ!

ಈ "ಎಲ್‌ಪಿಜಿ ಕೊರತೆ" ಎಂಬ ಸುದ್ದಿಯನ್ನು ಹಬ್ಬಿಸುವುದಕ್ಕೆ ಮೂಲ ಕಾರಣ ಡೊಮೆಸ್ಟಿಕ್ ಎಂಬ ಪದವನ್ನು ದುರ್ಬಳಕೆ ಮಾಡಿದ್ದು! ನಮ್ಮ ಎಲ್‌ಪಿಜಿಯನ್ನು ಎರಡು ವಿಧಾನದಲ್ಲಿ ಬಳಕೆ ಮಾಡಲಾಗುತ್ತದೆ. ಒಂದನೆಯದು ನಮಗೆಲ್ಲ ಗೊತ್ತಿರುವ ಹಾಗೆ ಅಡುಗೆ ಮಾಡುವುದಕ್ಕೆ.... ಅದು ಮನೆಯಿಂದ ಹೋಟೆಲ್‌ವರೆಗೆ ಎಲ್ಲ ಕಡೆ ಅಡುಗೆ ಮಾಡುವುದು. ಇದನ್ನು ಡೊಮೆಸ್ಟಿಕ್ ಬಳಕೆ ಎಂದು ಈ ಉದ್ಯಮದ ಭಾಷೆಯಲ್ಲಿ ಕರೆಯಲಾಗುತ್ತದೆ.

ಇನ್ನೊಂದು ಈ ಎಲ್‌ಪಿಜಿಗೆ ಮೂಲವಾದ ಪ್ರೊಪೇನ್ ಮತ್ತು ಬುಟೇನ್ ಅನ್ನು ಒಡೆದು, ಎಥಿಲೀನ್ ಹಾಗೂ ಪ್ರೊಪಿಲೀನ್ ಆಗಿ ಪರಿವರ್ತಿಸಿ ಅವುಗಳನ್ನು ಪ್ಲಾಸ್ಟಿಕ್ಸ್, ಸಿಂಥೆಟಿಕ್ ರಬ್ಬರ್ ಹಾಗೂ ಸಾಲ್ವೆಂಟ್‌ ಇತ್ಯಾದಿ ಉತ್ಪನ್ನಗಳನ್ನಾಗಿ ತಯಾರಿಕೆ ಮಾಡಲಾಗುತ್ತದೆ. ಇದು ಇಂಡಸ್ಟ್ರಿಯಲ್‌ ಬಳಕೆ.

ಮೊನ್ನೆ ಕೇಂದ್ರ ಸರ್ಕಾರ ಒಂದು ಸುತ್ತೋಲೆ ಹೊರಡಿಸಿ, ಈ ಡೊಮೆಸ್ಟಿಕ್ ಬಳಕೆಗೆ ಮಾತ್ರ ಪ್ರೊಪೇನ್ ಮತ್ತು ಬುಟೇನ್ ಸ್ಟ್ರೀಮ್‌ಗಳನ್ನು ಬಳಸಬೇಕು. ಇಂಡಸ್ಟ್ರಿಯಲ್ ಬಳಕೆಗೆ ಇದನ್ನು ಕೊಡಬಾರದು ಎಂದು ಈ ರಿಫೈನರಿಗಳಿಗೆ ಸೂಚನೆ ನೀಡಿತು.

ಇಲ್ಲಿನ ಡೊಮೆಸ್ಟಿಕ್ ಎಂಬ ಪದ ಭಾರಿ ಗೊಂದಲಕ್ಕೆ ದೂಡಿತು. ಡೊಮೆಸ್ಟಿಕ್ ಎಂದರೆ ಎಲ್‌ಪಿಜಿ ಡಿಸ್ಟ್ರಿಬ್ಯೂಶನ್ ಲೆವೆಲ್‌ನಲ್ಲಿ ಬೇರೆಯದೇ ಅರ್ಥ! ಡೊಮೆಸ್ಟಿಕ್ ಮತ್ತು ಕಮರ್ಷಿಯಲ್‌ ಎಂದರೆ ಎಲ್‌ಪಿಜಿ ಡಿಸ್ಟ್ರಿಬ್ಯೂಶನ್‌ನಲ್ಲಿ ನಮಗೆಲ್ಲ ಗೊತ್ತಿರುವ ಹಾಗೆ ಮನೆಗೆ ಬಳಸದ ಎಲ್ಲ ಎಲ್‌ಪಿಜಿಯನ್ನು ಕಮರ್ಷಿಯಲ್ ಎಂದು ಕರೆಯಲಾಗುತ್ತದೆ.

ಇದನ್ನೇ ಬೇರೆ ಅರ್ಥದಲ್ಲಿ ತಿಳಿದುಕೊಂಡು ಕಮರ್ಷಿಯಲ್ ಡಿಸ್ಟ್ರಿಬ್ಯೂಷನ್‌ಗೆ ಇನ್ನು ಎಲ್‌ಪಿಜಿ ಕೊಡುವುದಿಲ್ಲ ಎಂದು ಜನರು ವಿಪರೀತ ಪ್ರಮಾಣದಲ್ಲಿ ಎಲ್‌ಪಿಜಿ ಖರೀದಿ ಮಾಡುವುದಕ್ಕೆ ಮುಗಿಬಿದ್ದರು.

ಇದೇ ಕಾರಣಕ್ಕೆ ವಿಪರೀತ ಖರೀದಿಯೂ ನಡೆಯುತ್ತಿದೆ. ಇದನ್ನು ತಡೆಯುವುದಕ್ಕೆ ಸರ್ಕಾರ ಸಿಲಿಂಡರ್‌ ಬುಕಿಂಗ್ ಸಮಯಕ್ಕೂ ಮಿತಿ ಹೇರಿದೆ. ಅದಾಗಲೇ ಇದೇ ಊಹಾಪೋಹವನ್ನು ಬಳಸಿಕೊಂಡು ಬ್ಲ್ಯಾಕ್‌ ಮಾರ್ಕೆಟ್ ಕೂಡ ಶುರುವಾಗಿದೆ. ಅದರಲ್ಲಿ ದುಡ್ಡು ಮಾಡುವ ದಂಧೆಯೂ ಶುರುವಾಗಿದೆ ಎಂದು ಬೇರೆ ಹೇಳಬೇಕಿಲ್ಲ.

ಈ ಎಲ್‌ಪಿಜಿ ಕೊರತೆ ಎಂಬ ಊಹಾಪೋಹ ಶುರುವಾಗಿದ್ದು ಅತಿ ಹೆಚ್ಚು ಭ್ರಷ್ಟ ಆಡಳಿತ ಇರುವ ರಾಜ್ಯಗಳಲ್ಲಿ ಎಂಬುದನ್ನು ಗಮನಿಸಿ. ಸಮಸ್ಯೆ ಆಗುವುದಾದರೆ ಎಲ್ಲ ರಾಜ್ಯಗಳಲ್ಲೂ ಸಮಾನ ಪ್ರಮಾಣದಲ್ಲಿ ಆಗಬೇಕಿತ್ತಲ್ಲ. ಆದರೆ, ಹಾಗೆ ಆಗಿಲ್ಲ. ಕೆಲವೇ ರಾಜ್ಯಗಳಲ್ಲಿ ಮಾತ್ರ ಸಮಸ್ಯೆ ಶುರುವಾಗಿದೆ. ಬೇರೆ ರಾಜ್ಯಗಳಲ್ಲಿ ಈಗಲೂ ಸಿಲಿಂಡರ್ ಸಾಮಾನ್ಯದ ಹಾಗೆ ಸಿಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ವಿಪರೀತ ಬುಕಿಂಗ್ ಮಾಡುತ್ತಿದ್ದಂತೆಯೇ ಕೇಂದ್ರ ಸರ್ಕಾರ ಅದನ್ನು ತಡೆಯುವುದಕ್ಕೆ ಬುಕಿಂಗ್ ಸಮಯಕ್ಕೆ ಮಿತಿ ಹೇರಿತು. ಹೀಗೆ ವಿಪರೀತ ಬುಕಿಂಗ್ ಮಾಡುವುದರಿಂದ ಕೃತಕ ಅಭಾವ ಸೃಷ್ಟಿಯಾಗಿ, ಅದರಿಂದ ಬೆಲೆ ಏರಿಕೆಯಾದರೆ ಅವರಿಗೆ ಲಾಭ.

ನಮ್ಮ ದೇಶದಲ್ಲಿ 20 ಕ್ಕೂ ಹೆಚ್ಚು ದಿನಗಳಿಗಾಗುವಷ್ಟು ಎಲ್‌ಪಿಜಿ ಇದೆ. ಇಡೀ ದೇಶದಲ್ಲಿ 31.3 ಮಿಲಿಯನ್ ಟನ್ ಎಲ್‌ಪಿಜಿ ಬಳಕೆಯಾಗುತ್ತದೆ. ಈ ಪೈಕಿ 12.8 ಮಿಲಿಯನ್ ಟನ್ ಎಲ್‌ಪಿಜಿಯನ್ನು ನಮ್ಮ ದೇಶದಲ್ಲೇ ಉತ್ಪಾದನೆ ಮಾಡಲಾಗುತ್ತದೆ. ಆಮದು ಮಾಡಿಕೊಂಡ ಕಚ್ಚಾ ತೈಲದಿಂದ ಈ ಎಲ್‌ಪಿಜಿ ಉತ್ಪಾದನೆಯಾಗುತ್ತದೆ. ಅಂದರೆ, 40% ಉತ್ಪಾದನೆ ನಮ್ಮಲ್ಲೇ ಆಗುತ್ತಿದೆ. ಇನ್ನುಳಿದ 60% ವಿದೇಶದಿಂದ ನೇರವಾಗಿ ಎಲ್‌ಪಿಜಿಯನ್ನೇ ಆಮದು ಮಾಡಿಕೊಳ್ಳುತ್ತೇವೆ.

ಇನ್ನು, ಇದೇ ಪ್ರೊಪೇನ್ ಮತ್ತು ಬುಟೇನ್‌ ಬಳಸಿಕೊಂಡು ಪ್ಲಾಸ್ಟಿಕ್ ಹಾಗೂ ಇತರ ಉತ್ಪನ್ನಗಳನ್ನು ಮಾಡುವುದರ ಬದಲಿಗೆ ಎಲ್‌ಪಿಜಿ ತಯಾರಿಸಿದರೆ, ಅದರಿಂದ ಮತ್ತೊಂದು 5-6 ಮಿಲಿಯನ್ ಟನ್ ಉತ್ಪಾದನೆಯಾಗುತ್ತದೆ. ಉಳಿದವನ್ನು ನಾವು ಆಮದು ಮಾಡಿಕೊಳ್ಳಲೇಬೇಕು. ಈ ಪೈಕಿ ಬಹುತೇಕ 80%+ ಗಲ್ಫ್ ದೇಶಗಳಿಂದ ಬರುತ್ತಿತ್ತು, ಈಗ ಅದು ನಿಂತುಹೋಗಿದೆ ಎಂಬುದು ಆತಂಕದ ಸಂಗತಿಯಾದರೂ ನಮಗೆ ಬೇಕಿರುವ ಸುಮಾರು 14-15 ಮಿಲಿಯನ್ ಟನ್‌ ಎಲ್‌ಪಿಜಿಯನ್ನು ಬೇರೆ ದೇಶಗಳಿಂದ ತರುವುದಕ್ಕೆ ಸರ್ಕಾರ ಏನಾದರೂ ಕೆಲಸ ಮಾಡಿಯೇ ಮಾಡುತ್ತದೆ. ಅಮೆರಿಕ, ನಾರ್ವೆ ಅಥವಾ ಅಲ್ಜೀರಿಯಾ ಕಡೆಯಿಂದ ಸ್ವಲ್ಪ ಹೆಚ್ಚು ಖರ್ಚಿನ ಬಾಬತ್ತಾದರೂ ತರುವ ವ್ಯವಸ್ಥೆಯನ್ನೋ ಮಾಡಿಯೇ ಮಾಡುತ್ತದೆ.

ನಾವು ಈಗ ಗಾಬರಿ ಬಿದ್ದು ಓಡಿ ಹೋಗಿ ಕ್ಯೂನಲ್ಲಿ ನಿಂತು ಖರೀದಿ ಮಾಡಿ, ಎಲ್ಲರನ್ನೂ ಸಮಸ್ಯೆಗೆ ದೂಡಬೇಕಿಲ್ಲ.

ನೆನಪಿರಲಿ, 2014 ಕ್ಕೂ ಮೊದಲು ಯಾವ ಯುದ್ಧ ಇಲ್ಲದಿದ್ದಾಗಲೂ, ಎಲ್ಲವೂ ಸರಿ ಇದ್ದಾಗಲೂ, ಒಂದು ಸಿಲಿಂಡರ್ ಬುಕ್ ಮಾಡಿದರೆ ಅದು ಬರುವುದಕ್ಕೆ 15 ದಿನಗಳವರೆಗೆ ಬೇಕಾಗುತ್ತಿತ್ತು. ನಿಮಗೆ ಸಿಲಿಂಡರ್‌ ಏಜೆನ್ಸಿಯವರ ಜೊತೆಗೆ ಪರಿಚಯ ಇದ್ದರೆ ಮಾತ್ರ ಮರುದಿನವೇ ಸಿಲಿಂಡರ್ ಸಿಗುತ್ತಿತ್ತು. ಆಗ ನಾವು ಯಾರೂ ಹೋಗಿ ಗಲಾಟೆ ಮಾಡಲಿಲ್ಲ. ಏಜೆನ್ಸಿ ಎದುರು ಹೋಗಿ ಕ್ಯೂ ಹಚ್ಚಲಿಲ್ಲ, ಈ ವಿಷಯ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಸುದ್ದಿಯೂ ಆಗಲಿಲ್ಲ. ಆದರೆ, ಈಗ ಈ ಸಂದಿಗ್ಧ ಸನ್ನಿವೇಶದಲ್ಲಿ ಎಲ್ಲ ಇದ್ದೂ ಗಾಬರಿ ಬೀಳುತ್ತಿದ್ದೇವೆ.