ಮೇ 29ರವರೆಗೆ ಲಾಕ್ಡೌನ್ ವಿಸ್ತರಿಸಿದ ತೆಲಂಗಾಣ!
ಕೇಂದ್ರ ಸರ್ಕಾರದ ಘೋಷಣೆಗೂ ಮೊದಲೇ ಲಾಕ್ಡೌನ್ ಮತ್ತೆ ವಿಸ್ತರಿಸಿದ ರಾಜ್ಯ ಸರ್ಕಾರ| ಲಸಿಕೆ ಸಿಕ್ಕಿಲ್ಲ, ಕೊರೋನಾ ತಡೆಯಲು ಈಗ ಸಮಾಜಿಕ ಅಂತರವೊಂದೇ ದಾರಿ| ಜನರ ಓಡಾಟಕ್ಕೆ ಕಡಿವಾಣ ಹಾಕಲು ಲಾಕ್ಡೌನ್ ವಿಸ್ತರಣೆ
ಹೈದರಾಬಾದ್(ಮೇ.06): ದೇಶವ್ಯಾಪಿ ಕೊರೋನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಮೂರನೇ ಹಂತದ ಲಾಕ್ಡೌನ್ ಮೇ 17ರವರೆಗೆ ವಿಸ್ತರಿಸಿದೆ. ಇದರೊಂದಿಗೆ ಕೊಂಚ ಸಡಿಲಿಕೆ ಕೂಡಾ ನೀಡಿದೆ. ಆದರೀಗ ಕೆಲವು ರಾಜ್ಯಗಳು ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಲಾಕ್ಡೌನ್ ಅವಧಿಯನ್ನು ವಿಸ್ತರಿಸಿವೆ. ಈವರೆಗೂ ಕೊರೋನಾ ತಡೆಯುವ ಲಸಿಕೆ ಲಭ್ಯವಾಗದಿರುವ ಹಿನ್ನೆಲೆ, ಸೋಂಕಿತರನ್ನು ಸಂಪರ್ಕಿಸದಿರುವುದು ಹಾಗೂ ಸಾಮಾಜಿಕ ಅಂತರವಷ್ಟೇ ಕೊರೋನಾದಿಂದ ಪಾರು ಮಾಡಲಿದೆ.
ಕೊರೋನಾ ನಿರ್ವಹಣೆ ಪ್ರಧಾನಿ ಮೋದಿಗೆ ಶೇ.87 ನಗರ ಜನರ ಬಹುಪರಾಕ್!
ಯಾವೆಲ್ಲಾ ರಾಜ್ಯಗಳಲ್ಲಿ ಲಾಕ್ಡೌನ್ ವಿಸ್ತರಣೆ?
ತೆಲಂಗಾಣ ಹಾಗೂ ಗಾಜಿಯಾಬಾದ್ ಲಾಕ್ಡೌನ್ ವಿಸ್ತರಣೆ ಸಂಬಂಧ ಮಹತ್ವದ ನಿರ್ಧಾರ ತೆಗೆದುಕೊಂಡಿವೆ. ತೆಲಂಗಾಣ ಮೇ. 29ರವರೆಗೆ ಲಾಕ್ಡೌನ್ ವಿಸ್ತರಿಸಿದ್ದರೆ, ಇತ್ತ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಮೇ. 17ರವರೆಗೆ ಲಾಕ್ಡೌನ್ ಇರಲಿದೆ. ಆದರೆ ಇದಾದ ಬಳಿಕ ಮೇ 31ರವರೆಗೆ ಸೆಕ್ಷನ್ 144 ಜಾರಿಯಲ್ಲಿರಲಿದೆ. ತೆಲಂಗಾಣ ಸಿಎಂ ಕೆಸಿಆರ್ ಮೇ. 29ರವರೆಗೆ ಲಾಕ್ಡೌನ್ ವಿಸ್ತರಿಸುವ ಆದೇಶ ನೀಡಿದ್ದರೆ, ಗಾಜಿಯಾಬಾದ್ನಲ್ಲಿ ಜಿಲ್ಲಾಧಿಕಾರಿ ಮೇ 31 ರವರೆಗೆ ಸೆಕ್ಷನ್ 144 ಜಾರಿಯಲ್ಲಿರಲಿದೆ ಎಂದು ಘೋಷಿಸಿದ್ದಾರೆ.
ಇನ್ನು ತೆಲಂಗಾಣದಲ್ಲಿ ಇಡೀ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದ್ದು, ಸಂಜೆ ಆರು ಗಂಟೆವರೆಗಷ್ಟೇ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶವಿದೆ. ಬಳಿಕ ಯಾರೂ ರಸ್ತೆಗಳಲ್ಲಿ ಓಡಾಡುವಂತಿಲ್ಲ ಎಂದು ಸಿಎಂ ಕೆಸಿಆರ್ ಆದೇಶಿಸಿದ್ದಾರೆ. ಇನ್ನು ಜನರು ಅನಗತ್ಯವಾಗಿ ಹೊರಗೆ ಓಡಾಡದಂತೆಯೂ ಸಿಎಂ ಮನವಿ ಮಾಡಿಕೊಂಡಿದ್ದು, ವೈದ್ಯಕೀಯ ಸೌಲಭ್ಯಗಳಲ್ಲಿ ಯಾವುದೇ ಕೊರತೆ ಎದುರಾಗುವುದಿಲ್ಲ ಎಂದಿದ್ದಾರೆ.
ಕೇರಳದ ಮೊದಲ ಬುಡಕಟ್ಟು IAS ಅಧಿಕಾರಿ ಈಗ ಕಲ್ಲಿಕೋಟೆಯ ಸಹಾಯಕ ಕಲೆಕ್ಟರ್!
ತೆಲಂಗಾಣದಲ್ಲಿ ಈವರೆಗೂ ಒಟ್ಟು 1096 ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಇವರಲ್ಲಿ 628 ಮಂದಿ ಗುಣಮುಖರಾಗಿದ್ದು, 439 ಸಕ್ರಿಯ ಪ್ರಕರಣಗಳಿವೆ.