ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು  ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಅವರ ಪುತ್ರ ಬಿಹಾರದ ಪ್ರಸ್ತುತ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪಾಟ್ನಾ (ಅ.4): ರೈಲ್ವೆ ಇಲಾಖೆಯ ಅಕ್ರಮ ನೇಮಕಾತಿ ಸಂಬಂಧದ ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಯಾದವ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಅವರ ಪುತ್ರ ಬಿಹಾರದ ಪ್ರಸ್ತುತ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಅಕ್ಟೋಬರ್ 2022 ರಲ್ಲಿ ಲಾಲೂ ಮತ್ತು ಇತರರ ವಿರುದ್ಧ ಸಲ್ಲಿಸಲಾದ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಕೇಂದ್ರ ರೈಲ್ವೆಯಲ್ಲಿ ಅಭ್ಯರ್ಥಿಗಳ ಅಕ್ರಮ ನೇಮಕಾತಿಗಳನ್ನು ಮಾಡಲಾಗಿದೆ, ರೈಲ್ವೆಯ ನಿಯಮಗಳು, ಮಾರ್ಗಸೂಚಿಗಳು ಮತ್ತು ಕಾರ್ಯವಿಧಾನವನ್ನು ಉಲ್ಲಂಘಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

Baba Hariharnath Mandir:ಶಿವಲಿಂಗದ ಮೇಲೆ ಕೈತೊಳೆದ ಲಾಲೂ ಪ್ರಸಾದ್‌, ರಾಬ್ಡಿ ದೇವಿ!

ಲಾಲೂ ಪ್ರಸಾದ್‌ ಯಾದವ್‌ ರೈಲ್ವೆ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ‘ಉದ್ಯೋಗಕ್ಕಾಗಿ ಭೂಮಿ’ ಹಗರಣ ಇದಾಗಿದೆ. ಕಳೆದ ಮಾರ್ಚ್ 2023ರಲ್ಲಿ ಈ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿತ್ತು. ಜೊತೆಗೆ ‘ಉದ್ಯೋಗಕ್ಕಾಗಿ ಭೂಮಿ’ ಹಗರಣದ ವೇಳೆ 200 ಕೋಟಿ ರು. ಮೌಲ್ಯದ ಜಮೀನನ್ನು ಅವರು ಪಡೆದುಕೊಂಡಿದ್ದರು. ಇದು ಸೇರಿ ಸುಮಾರು 600 ಕೋಟಿ ರು. ಮೌಲ್ಯದ ಅಕ್ರಮ ಪತ್ತೆಯಾಗಿದೆ ಎಂದು ಹೇಳಿತ್ತು. 

ರೈಲ್ವೆಯಲ್ಲಿ (Railway) ಉದ್ಯೋಗ (Job) ಕೊಡಿಸುವುದಾಗಿ ಹೇಳಿ ಆಕಾಂಕ್ಷಿಗಳಿಂದ ಭೂಮಿಯನ್ನು (Land) ಲಂಚದ ರೂಪದಲ್ಲಿ ಪುಕ್ಕಟೆಯಾಗಿ ಅಥವಾ ಕಡಿಮೆ ಬೆಲೆಗೆ ಪಡೆಯಲಾಗುತ್ತಿತ್ತು. ಇದನ್ನೇ ಉದ್ಯೋಗಕ್ಕಾಗಿ ಭೂಮಿ ಹಗರಣ (Land for Job Scam) ಎನ್ನಲಾಗುತ್ತದೆ.

ಇಡಿ ದಾಳಿಯ ಸಮಯದಲ್ಲಿ ಲಾಲೂ ಪುತ್ರ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ (Tejaswi Yadav) ಹಾಗೂ ಲಾಲೂ ಅವರ 3 ಪುತ್ರಿಯರ ಆಸ್ತಿಪಾಸ್ತಿಗಳ ಮೇಲೆ ಬಿಹಾರ, ಜಾರ್ಖಂಡ್‌, ಮುಂಬೈ ಹಾಗೂ ದಿಲ್ಲಿ ಸುತ್ತಮುತ್ತ 24 ಸ್ಥಳಗಳಲ್ಲಿ ಇ.ಡಿ. ದಾಳಿ ನಡೆಸಿತ್ತು. ಬಳಿಕ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿತ್ತು.

ವೈದ್ಯಕೀಯ ಕಾರಣಕ್ಕೆ ಜಾಮೀನು ಪಡೆದು ಲಾಲೂ ಪ್ರಸಾದ್ ಬ್ಯಾಡ್ಮಿಂಟನ್‌ ಆಟ, ಜಾಮೀನು ರದ್ದತಿಗೆ ಮನವಿ

ಆಕಾಂಕ್ಷಿಗಳಿಗೆ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಲಾಲೂ ಅವರು ಪಡೆದಿದ್ದ ಜಮೀನಿನ ಮೌಲ್ಯ ಅಂದಾಜು 200 ಕೋಟಿ ರೂಪಾಯಿ. ಇದು ಸೇರಿ ದಾಳಿಯ ವೇಳೆ 600 ಕೋಟಿ ರೂ. ಮೌಲ್ಯದ ಅಕ್ರಮ ಪತ್ತೆ ಮಾಡಲಾಗಿದೆ. ಲೆಕ್ಕಪತ್ರವಿಲ್ಲದ 1 ಕೋಟಿ ರು. ನಗದು, 1900 ಡಾಲರ್‌ ವಿದೇಶಿ ಕರೆನ್ಸಿ, 540 ಗ್ರಾಂ ಚಿನ್ನ, 1.25 ಕೋಟಿ ರೂ. ಮೌಲ್ಯದ 1.5 ಕೆಜಿ ಚಿನ್ನಾಭರಣ ಹಾಗೂ ದಾಖಲೆ ಪತ್ತೆ ಮಾಡಲಾಗಿದೆ’ ಎಂದು ಬಹಿರಂಗಪಡಿಸಿತ್ತು. ಗ್ರೂಪ್‌ ಡಿ ಹುದ್ದೆ ಅಭ್ಯರ್ಥಿಗಳ 4 ಜಮೀನುಗಳನ್ನು ಕೇವಲ 7.5 ಲಕ್ಷ ರೂ.ಗೆ ಲಾಲು ಕುಟುಂಬ ಖರೀದಿಸಿತ್ತು. ಅದನ್ನು ಆರ್‌ಜೆಡಿ ನಾಯಕನೊಬ್ಬನಿಗೆ 3.5 ಕೋಟಿ ರೂ.ಗೆ ಲಾಲು ಪತ್ನಿ ರಾಬ್ರಿ ದೇವಿ ಮಾರಿದ್ದರು. ಬಂದ ಹಣವನ್ನು ಹೆಚ್ಚಾಗಿ ಲಾಲು ಪುತ್ರ ತೇಜಸ್ವಿ ಯಾದವ್‌ ಖಾತೆಗೆ ವರ್ಗಾಯಿಸಲಾಗಿದೆ ಎಂದು ಇ.ಡಿ. ಆರೋಪಿಸಿತ್ತು.