ಗಣಪತಿ ಉತ್ಸವದ ವೇಳೆ ಪೆಂಡಾಲ್ ಹಾಕಲು ರಸ್ತೆಯಲ್ಲಿ ಹೊಂಡ ಮಾಡಿದ್ದಕ್ಕೆ ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್‌, ಗಣೇಶೋತ್ಸವ ಸಮಿತಿ 3 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಮುಂಬೈ: ಗಣಪತಿ ಉತ್ಸವದ ವೇಳೆ ಪೆಂಡಾಲ್ ಹಾಕಲು ರಸ್ತೆಯಲ್ಲಿ ಹೊಂಡ ಮಾಡಿದ್ದಕ್ಕೆ ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್‌, ಗಣೇಶೋತ್ಸವ ಸಮಿತಿ 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಗಣೇಶೋತ್ಸವ ಸಖತ್ ಫೇಮಸ್, ಮುಂಬೈನ ಲಾಲ್‌ಬಗುಚಾ ರಾಜಾ ದೇಶಾದ್ಯಂತ ಇನ್ನಷ್ಟು ಫೇಮಸ್‌, ಈ ಲಾಲ್‌ ಬಗುಚಾ ರಾಜಾ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ಈಗ ಮುಂಬೈ ಮಹಾನಗರಪಾಲಿಕೆ ಸುಮಾರು 3 ಲಕ್ಷ ರೂಪಾಯಿ ದಂಡ ವಿಧಿಸಿದೆ. 

Add Asianetnews Kannada as a Preferred SourcegooglePreferred

ಅತ್ಯಂತ ಶ್ರೀಮಂತ ಗಣೇಶೋತ್ಸವ ಸಮಿತಿಗಳಲ್ಲಿ ಮುಂಬೈನ ಲಾಲ್‌ಬಗುಚಾ ರಾಜಾ ಗಣೇಶ ಸಮಿತಿಯೂ (Lalbaugcha Raja Sarvajanik Ganeshotsav Mandal) ಒಂದು, ಇದು ಗಣೇಶನನ್ನು ಕೂರಿಸುವ ಪೆಂಡಾಲ್‌ (pandal) ನಿರ್ಮಾಣಕ್ಕಾಗಿ ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ಒಟ್ಟು 183 ಹೊಂಡಗಳನ್ನು ನಿರ್ಮಿಸಿತ್ತು. ಹೀಗಾಗಿ ಗಣೇಶ ಹಬ್ಬದ ನಂತರ ಗಣೇಶ ಕೂರಿಸಿದ ಸ್ಥಳದ ಮುಂದಿನ ರಸ್ತೆ ಹೊಂಡ ಗುಂಡಿಗಳಿಂದ ತುಂಬಿದೆ. ಈ ಹಿನ್ನೆಲೆಯಲ್ಲಿ ಒಂದು ಹೊಂಡಕ್ಕೆ 2 ಸಾವಿರ ರೂಪಾಯಿಯಂತೆ ಮುಂಬೈ ಮಹಾನಗರಪಾಲಿಕೆ (Brihanmumbai Municipal Corporation) ದಂಡ ವಿಧಿಸಿದ. ಇದರಿಂದ 183 ಹೊಂಡಗಳಿಗೆ ಒಟ್ಟು ಸೇರಿ 3.66 ಲಕ್ಷ ದಂಡ ವಿಧಿಸಲಾಗಿದೆ. 

ಹೀಗೆ ಹೊಂಡ ತೆಗೆದಿದ್ದರಿಂದ ಡಾ ಬಾಬಾಸಾಹೇಬ್ ರಸ್ತೆ ಮತ್ತು ಟಿಬಿ ಕದಂ ಮಾರ್ಗದ ನಡುವಿನ ರಸ್ತೆಯು ಹಾಳಾಗಿದೆ ಎಂದು ಇ ವಾರ್ಡ್ ಮುನ್ಸಿಪಲ್ ಕಾರ್ಪೊರೇಷನ್ ಕಳುಹಿಸಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಸೆ.5ರಂದು ಈ ರಸ್ತೆಯ ಪರಿಶೀಲನೆ ನಡೆಸಲಾಗಿತ್ತು. ಪೆಂಡಾಲ್‌ ನಿರ್ಮಾಣಕ್ಕೆ ನೀಡಿದ್ದ ಶರತ್ತುಬದ್ಧ ಅನುಮತಿಯ ಪ್ರಕಾರ, ರಸ್ತೆ ಹಾಗೂ ಫುಟ್‌ಪಾತ್‌ಗಳ ಮೇಲೆ ಹೊಂಡ ತೆಗೆಯುವಂತಿಲ್ಲ. ಆದರೆ ಈ ಗಣೇಶೋತ್ಸವ ಸಮಿತಿ ಪೆಂಡಾಲ್ ನಿರ್ಮಾಣಕ್ಕಾಗಿ ರಸ್ತೆ ಹಾಗೂ ಫುಟ್‌ಪಾತ್‌ಗಳ ಮೇಲೆ ಹೊಂಡ ತೆಗೆದಿತ್ತು. 

ಪ್ರತಿವರ್ಷವೂ ಗಣೇಶೋತ್ಸವ ಪೆಂಡಾಲ್ ನಿರ್ಮಿಸಲು ಬೃಹತ್ ಮುಂಬೈನಿಂದ ಅನುಮತಿ ಪಡೆದುಕೊಳ್ಳುತ್ತದೆ. ಅನೇಕ ಗಣೇಶೋತ್ಸವ ಮಂಡಲಗಳು ಟೆಂಟ್‌ಗಳನ್ನು ನಿರ್ಮಿಸಲು ರಸ್ತೆಯಲ್ಲಿ ಹೊಂಡವನ್ನು ಅಗೆಯುತ್ತವೆ. ಅಲ್ಲದೇ ಕೆಲವೆಡೆ ಫುಟ್‌ಪಾತ್‌ನ ಬ್ಲಾಕ್‌ಗಳನ್ನು ತೆಗೆದು ಅಲ್ಲಿ ಹೊಂಡಗಳನ್ನು ತೋಡಿ ಕಂಬಗಳನ್ನು ಹಾಕಿ ಟೆಂಟ್ ನಿರ್ಮಿಸಲಾಗುತ್ತದೆ. ಉತ್ಸವ ಮುಗಿದ ನಂತರ ಬಿಎಂಸಿ ಗಣೇಶೋತ್ಸವ ನಡೆದ ಸ್ಥಳದ ಪರಿಶೀಲನೆ ನಡೆಸುತ್ತದೆ. 

ಮುಂಬೈಯ ಅತಿ ಶ್ರೀಮಂತ ಗಣಪತಿ ಮಂಡಲ ಎಂಬ ಹಿರಿಮೆಯನ್ನು ಲಾಲ್‌ಬಗುಚಾ ರಾಜಾ ಗಣೇಶ ಸಮಿತಿ ಹೊಂದಿದೆ. ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸೇವಾ ಮಂಡಲದ ಗಣೇಶನಿಗೆ ಈ ವರ್ಷ ದಾಖಲೆಯ 316.40 ಕೋಟಿ ರೂಪಾಯಿಯ ವಿಮೆ ಮಾಡಿಸಲಾಗಿತ್ತು. ಪ್ರತಿವರ್ಷವೂ ಈ ಗಣೇಶನಿಗೆ ವಿಮೆ ಮಾಡಿಸಲಾಗುತ್ತದೆ. ಈ ಗಣೇಶನಿಗೆ ಭಾರಿ ಮೊತ್ತದ ಆಭರಣಗಳನ್ನು ತೊಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆಭರಣದ ಸುರಕ್ಷತೆ ಲೆಕ್ಕದಲ್ಲಿ ಗಣೇಶನಿಗೆ ವಿಮೆ ಮಾಡಿಸಲಾಗಿತ್ತು. 

ಜಿಎಸ್‌ಬಿ ಮಂಡಲ್‌ ಗಣೇಶನಿಗೆ ತೊಡಿಸುವ 66 ಕೆಜಿ ಚಿನ್ನದ ಆಭರಣ, 295 ಕೆಜಿ ಬೆಳ್ಳಿ ಹಾಗೂ ಇನ್ನಿತರ ಬೆಲೆಬಾಳುವ ಆಭರಣಗಳಿಗೆ ನ್ಯೂ ಇಂಡಿಯಾ ಅಶ್ಯುರೆನ್ಸ್‌ನಿಂದ 31.97 ಕೋಟಿ ರು. ಮೊತ್ತದ ರಿಸ್ಕ್‌ ಇನ್ಸುರೆನ್ಸ್‌ ಹಾಗೂ ಭದ್ರತಾ ಸಿಬ್ಬಂದಿ, ಅರ್ಚಕರು, ಅಡುಗೆ ಮಾಡುವವರು, ಸ್ವಯಂ ಸೇವಕರಿಗೂ ಒಟ್ಟಾರೆ 263 ಕೋಟಿ ರೂ. ವಿಮೆ ಮಾಡಿಸಲಾಗಿತ್ತು. ಬೆಂಕಿ ಅಪಘಾತ, ಭೂಕಂಪ ಮೊದಲಾದ ದುರ್ಘಟನೆಗಳ ವಿರುದ್ಧವೂ 1 ಕೋಟಿ ರೂಪಾಯಿಯ ವಿಮೆ ಮಾಡಿಸಲಾಗಿತ್ತು. ಜೊತೆಗೆ ಸಾರ್ವಜನಿಕ ಹೊಣೆಗಾರಿಕೆ ಅಡಿಯಲ್ಲಿ ಭಕ್ತರು, ಗಣಪತಿ ಕೂರಿಸುವ ಪಂಡಾಲ್‌, ಕ್ರೀಡಾಂಗಣ ಮೊದಲಾದವುಗಳಿಗೂ 20 ಕೋಟಿ ವಿಮೆ ಮಾಡಿಸಲಾಗಿತ್ತು.