ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ, ಮುಸ್ಲಿಂ ಯುವಕ ಫರ್ಮಾನ್ ಜೊತೆ ಕೇರಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಕಾರಣವೇನು ಎಂಬುದನ್ನು ರಿವೀಲ್ ಮಾಡಿದ್ದಾರೆ. ಪ್ರೀತಿ ಗೆಲ್ಲಿಸಿದ್ದಕ್ಕೆ ಕೇರಳಕ್ಕೆ ಥ್ಯಾಂಕ್ಸ್ ಎಂದು ಹೇಳಿದ್ದಾರೆ.
ತಿರುವನಂತಪುರಂ: ಪ್ರಯಾಗ್ರಾಜ್ ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ ಮತ್ತು ಅವರ ಪತಿ ಫರ್ಮಾನ್, ತಮ್ಮ ಪ್ರೀತಿ ಒಂದಾಗಲು ಸಹಾಯ ಮಾಡಿದ ಕೇರಳಕ್ಕೆ ಧನ್ಯವಾದ ತಿಳಿಸಿದ್ದಾರೆ. "ಕೇರಳ ತುಂಬಾ ಒಳ್ಳೆ ಜಾಗ, ಇಲ್ಲಿನ ಜನ ಕೂಡ ಅಷ್ಟೇ ಒಳ್ಳೆಯವರು. ಎಲ್ಲರೂ ನಮ್ಮನ್ನು ಪ್ರೀತಿಯಿಂದ ಸ್ವೀಕರಿಸಿದರು. ನಾವು ಆರು ತಿಂಗಳಿಂದ ಪ್ರೀತಿಸುತ್ತಿದ್ದೆವು," ಎಂದು ಮದುವೆಯ ನಂತರ ಈ ಜೋಡಿ ಹೇಳಿದೆ.
ಮುಂದೆಯೂ ಕೇರಳದಲ್ಲೇ ಇರುತ್ತೀವಾ ಅನ್ನೋದರ ಬಗ್ಗೆ ಯೋಚನೆ ಮಾಡುತ್ತೇವೆ. 'ನನ್ನ ತಂದೆ ಬೇರೆ ಮದುವೆ ನಿಶ್ಚಯಿಸಿದ್ದರು. ಅದಕ್ಕಾಗಿಯೇ ನಾವು ಈ ನಿರ್ಧಾರ ತೆಗೆದುಕೊಂಡೆವು,' ಎಂದು ಮೊನಾಲಿಸಾ ತಿಳಿಸಿದ್ದಾರೆ. ಈ ಸಂಬಂಧವನ್ನು ನಮ್ಮ ತಂದೆ ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಬಗ್ಗೆ ಖಚಿತತೆ ಇಲ್ಲ ಎಂದೂ ಅವರು ಮಾಧ್ಯಮಗಳಿಗೆ ತಿಳಿಸಿದರು.
ತಿರುವನಂತಪುರಂನ ಪೂವಾರ್ನಲ್ಲಿರುವ ನೈನಾರ್ ಅರುಮಾನೂರ್ ನೈನಾರ್ ದೇವಸ್ಥಾನದಲ್ಲಿ ಮೊನಾಲಿಸಾ ಮತ್ತು ಮಹಾರಾಷ್ಟ್ರ ಮೂಲದ ಮೊಹಮ್ಮದ್ ಫರ್ಮಾನ್ ಹಿಂದೂ ಸಂಪ್ರದಾಯದಂತೆ ಮದುವೆಯಾದರು. ಈ ಮದುವೆ ಸಮಾರಂಭದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಸಚಿವ ವಿ. ಶಿವನ್ಕುಟ್ಟಿ, ಜಿಲ್ಲಾ ಕಾರ್ಯದರ್ಶಿ ಎ.ಎ. ಹಿಮ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಮದುವೆಗೆ ಕೇರಳವೇ ಸೂಕ್ತ
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಗೋವಿಂದನ್, 'ಮಹಾರಾಷ್ಟ್ರದ ಯುವಕ ಮತ್ತು ಮಧ್ಯಪ್ರದೇಶದ ಯುವತಿ ಮದುವೆಯಾಗಲು ನಿರ್ಧರಿಸಿದರು. ಭಾರತದಲ್ಲಿ ಮದುವೆಗೆ ಸೂಕ್ತವಾದ ಸ್ಥಳ ಯಾವುದು ಎಂದು ಹುಡುಕಿದಾಗ ಅವರಿಗೆ ಕೇರಳ ಸರಿ ಅನಿಸಿತು. ಹಾಗಾಗಿ ಅವರು ಕೇರಳಕ್ಕೆ ಬಂದರು. ಶ್ರೀ ನಾರಾಯಣ ಗುರುಗಳು ಪ್ರತಿಷ್ಠಾಪಿಸಿದ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ' ಎಂದರು. 'ಧರ್ಮ ಯಾವುದಾದರೇನು, ಮನುಷ್ಯ ಒಳ್ಳೆಯವನಾಗಿದ್ದರೆ ಸಾಕು' ಎಂಬ ಶ್ರೀ ನಾರಾಯಣ ಗುರುಗಳ ಮಾತನ್ನು ಕೂಡ ಅವರು ನೆನಪಿಸಿಕೊಂಡರು.
ಇದೇ ವೇಳೆ, ಸಚಿವ ವಿ. ಶಿವನ್ಕುಟ್ಟಿ ಪ್ರತಿಕ್ರಿಯಿಸಿ, ಈ ಮದುವೆಯೇ 'ನಿಜವಾದ ಕೇರಳ ಸ್ಟೋರಿ' ಎಂದು ಹೇಳಿದರು. 'ಕೇರಳದ ಜನತೆ ಇಡೀ ಪ್ರಪಂಚದ ಮುಂದೆ ಹೆಮ್ಮೆ ಪಡಬಹುದು. ನಮ್ಮ ನಾಡು ಜಾತ್ಯತೀತತೆ ಮತ್ತು ಮಾನವೀಯತೆಗೆ ಹೆಸರುವಾಸಿಯಾಗಿದೆ ಎಂಬುದಕ್ಕೆ ಇದೇ ಸಾಕ್ಷಿ' ಎಂದು ಶಿವನ್ಕುಟ್ಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮೊನಾಲಿಸಾ ಮತ್ತು ಅವರ ಗೆಳೆಯ ಫರ್ಮಾನ್ ಅವರ ವಿವಾಹವು ತಿರುವನಂತಪುರದ ಪೂವಾರ್ನಲ್ಲಿರುವ ಅರುಮಾನೂರ್ ಶ್ರೀ ನಯಿನಾರ್ ದೇವ ದೇವಸ್ಥಾನದಲ್ಲಿ ನಡೆಯಿತು.
ತಂದೆಯ ಜೊತೆ ಹೋಗಲು ಇಷ್ಟವಿಲ್ಲ
ಇದಕ್ಕೂ ಮುನ್ನ, ತಮ್ಮ ತಂದೆ ಬಲವಂತವಾಗಿ ಊರಿಗೆ ವಾಪಸ್ ಕರೆದುಕೊಂಡು ಹೋಗಲು ಯತ್ನಿಸುತ್ತಿದ್ದಾರೆ ಎಂದು ಮೊನಾಲಿಸಾ ತಂಪಾನೂರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಂದೆಯ ಜೊತೆ ಹೋಗಲು ಇಷ್ಟವಿಲ್ಲ, ಪ್ರಿಯಕರನ ಜೊತೆಯೇ ಇರಬೇಕು ಎಂದು ಮೊನಾಲಿಸಾ ಪೊಲೀಸರಿಗೆ ಸ್ಪಷ್ಟಪಡಿಸಿದ್ದರು. ಇದರ ಬೆನ್ನಲ್ಲೇ, ಮೊನಾಲಿಸಾ ಮತ್ತು ಫರ್ಮಾನ್ ಕೇರಳದಲ್ಲೇ ಮದುವೆಯಾಗಲು ನಿರ್ಧರಿಸಿದರು.


