ಖ್ಯಾತ ಕಂಟೆಂಟ್ ಕ್ರಿಯೇಟರ್ ಖುಷಿ ಸಿಂಗ್ ಅವರು ಬಿರ್ ಬಿಲ್ಲಿಂಗ್ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವಾಗ ಭೀಕರ ಅಪಘಾತಕ್ಕೀಡಾಗಿದ್ದಾರೆ. ಹಾರಾಟದ ವೇಳೆ ನಿಯಂತ್ರಣ ತಪ್ಪಿ, ಸಾವಿನ ದವಡೆಯಿಂದ ಪಾರಾದ ಅವರು ತಮ್ಮ ಅನುಭವ ಹಂಚಿಕೊಂಡಿದ್ದು, ತಜ್ಞರು ಸುರಕ್ಷತಾ ಲೋಪಗಳ ಬಗ್ಗೆ ಎಚ್ಚರಿಸಿದ್ದಾರೆ.
ಬಿರ್ ಬಿಲ್ಲಿಂಗ್ (ಏ.9): ಸಾಹಸ ಪ್ರಿಯರನ್ನು ಸೆಳೆಯುವ ಆಕಾಶಯಾನ ಕೆಲವೊಮ್ಮೆ ಪ್ರಾಣಕ್ಕೆ ಕಂಟಕವಾಗಬಹುದು ಎಂಬುದಕ್ಕೆ ಇತ್ತೀಚಿನ ಈ ಘಟನೆ ಸಾಕ್ಷಿಯಾಗಿದೆ. ಖ್ಯಾತ ಕಂಟೆಂಟ್ ಕ್ರಿಯೇಟರ್ ಖುಷಿ ಸಿಂಗ್ ಅವರು ಬಿರ್ ಬಿಲ್ಲಿಂಗ್ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವಾಗ ಭೀಕರ ಅಪಘಾತಕ್ಕೀಡಾಗಿದ್ದು, "ನನ್ನ ಜೀವ ಮರಳಿ ಸಿಕ್ಕಿದ್ದು ದೊಡ್ಡ ಅದೃಷ್ಟ" ಎಂದು ತಮ್ಮ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.
ಖುಷಿ ಸಿಂಗ್ ಹೇಳುವ ಹಾಗೆ ಅವರಿಗೆ ಮೊದಲಿನಿಂದಲೂ ಎತ್ತರದ ಪ್ರದೇಶ ಎಂದರೆ ಭಯ. ಎರಡನೇ ಮಹಡಿಯಿಂದ ಕೆಳಗೆ ನೋಡಲು ಹೆದರುತ್ತಿದ್ದ ಅವರು, ಹೊಸ ವರ್ಷದ Resolution ಆಗಿ ತಮ್ಮ ಈ ಭಯವನ್ನು ಮೆಟ್ಟಿ ನಿಲ್ಲಲು ನಿರ್ಧರಿಸಿದ್ದರು. ಇದಕ್ಕಾಗಿ ವಿಶ್ವದ ಅತ್ಯುತ್ತಮ ಪ್ಯಾರಾಗ್ಲೈಡಿಂಗ್ ತಾಣಗಳಲ್ಲಿ ಒಂದಾದ ಹಿಮಾಚಲ ಪ್ರದೇಶದ ಬಿರ್ ಬಿಲ್ಲಿಂಗ್ಗೆ ತೆರಳಿ 8,000 ಅಡಿ ಎತ್ತರದಿಂದ ಜಿಗಿಯಲು ಬುಕ್ ಮಾಡಿದ್ದರು. ಭಯವನ್ನು ಗೆದ್ದು ಹೊಸ ಮನುಷ್ಯಳಾಗಿ ಮರಳಿ ಬರುತ್ತೇನೆ ಎಂದು ಅವರು ಭಾವಿಸಿದ್ದರು, ಆದರೆ ಪರಿಸ್ಥಿತಿ ತದ್ವಿರುದ್ಧವಾಗಿತ್ತು.
ಕ್ಯಾಮೆರಾದಲ್ಲಿ ಸೆರೆಯಾದ ಭೀಕರ ದೃಶ್ಯ
ಖುಷಿ ಸಿಂಗ್ ಪ್ಯಾರಾಗ್ಲೈಡಿಂಗ್ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಅವರ ಮೂಗಿನಿಂದ ರಕ್ತ ಸುರಿಯುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. "ನಾನು ಜಿಗಿದೆ, ಆದರೆ ದೇವರಿಗೇ ಬೇರೆ ಪ್ಲಾನ್ ಇತ್ತು. ನಾನು ಸತ್ತು ಬದುಕಿ ಬಂದಿದ್ದೇನೆ" ಎಂದು ಅವರು ಬರೆದುಕೊಂಡಿದ್ದಾರೆ. ಅಪಘಾತ ಹೇಗೆ ಸಂಭವಿಸಿತು ಎಂಬ ಬಗ್ಗೆ ಅವರು ನಿಖರ ಮಾಹಿತಿ ನೀಡಿಲ್ಲವಾದರೂ, ಹಾರಾಟದ ಆರಂಭದಲ್ಲೇ (Take-off) ನಿಯಂತ್ರಣ ತಪ್ಪಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.
ಖುಷಿ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ತಜ್ಞರು ಮತ್ತು ಅನುಭವಿ ಪೈಲಟ್ಗಳು ಈ ಕೆಳಗಿನ ಪ್ರಮುಖ ಅಂಶಗಳನ್ನು ಎತ್ತಿ ತೋರಿಸಿದ್ದಾರೆ. ಖುಷಿ ಸಿಂಗ್ ಅವರು ಧರಿಸಿದ್ದು ಪ್ಯಾರಾಗ್ಲೈಡಿಂಗ್ಗೆ ಬೇಕಾದ ವಿಶೇಷ ಹೆಲ್ಮೆಟ್ ಅಲ್ಲ, ಬದಲಾಗಿ ಸಾಮಾನ್ಯ ಬೈಕ್ ಹೆಲ್ಮೆಟ್ ಆಗಿತ್ತು ಎಂದು 20 ವರ್ಷಗಳ ಅನುಭವವಿರುವ ಪೈಲಟ್ ಒಬ್ಬರು ಎಚ್ಚರಿಸಿದ್ದಾರೆ. ಸಾಹಸ ಕ್ರೀಡೆಗಳಲ್ಲಿ ಸರಿಯಾದ ಉಪಕರಣಗಳ ಬಳಕೆ ಅತ್ಯಗತ್ಯ ಎಂದು ಅವರು ಎಚ್ಚರಿಸಿದ್ದಾರೆ.
"ಸೂರ್ಯ ಕಾಣಿಸದ ದಿನ ಪ್ಯಾರಾಗ್ಲೈಡಿಂಗ್ ಮಾಡಬಾರದು" ಎನ್ನುವುದು ಸಾಮಾನ್ಯವಾಗಿ ಇರುವ ಸಲಹೆ. ಇಲ್ಲಿ ಹವಾಮಾನ ಸರಿಯಿಲ್ಲದಿದ್ದರೂ ಹಾರಾಟಕ್ಕೆ ಇಳಿದಿದ್ದೇ ಅಪಘಾತಕ್ಕೆ ಕಾರಣವಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಬಿರ್ ಬಿಲ್ಲಿಂಗ್ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಒಂದು ವಾರ ಪ್ಯಾರಾಗ್ಲೈಡಿಂಗ್ಗೆ ನಿರ್ಬಂಧ ಹೇರಲಾಗಿದೆ. ಇಂತಹ ಸಮಯದಲ್ಲಿ ಸಾಹಸಕ್ಕೆ ಮುಂದಾಗಿದ್ದು ತಪ್ಪು ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ಸದ್ಯ ಖುಷಿ ಸಿಂಗ್ ಅಪಾಯದಿಂದ ಪಾರಾಗಿದ್ದು, ಗುಣಮುಖರಾಗುತ್ತಿದ್ದಾರೆ.


