Ketan Agarwal Murder: ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆಯಲ್ಲಿ ಆಘಾತಕಾರಿ ವಿಷಯ ಬಯಲಾಗಿದೆ. ಆರೋಪಿ ಸಿಯಾ ಮತ್ತು ಚೇತನ್ ಗೂಗಲ್‌ನಲ್ಲಿ ಪೊಲೀಸ್ ಪ್ರಶ್ನೆಗಳಿಗಾಗಿ ಹುಡುಕಾಟ ನಡೆಸಿದ್ದರು.

ಲೋಹಗಢ್ ಕೋಟೆಯಲ್ಲಿ ನಡೆದ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಸಿನಿಮಾ ಕಥೆಯನ್ನೂ ಮೀರಿಸುವಂತಿದೆ. ಮದುವೆಯಾಗಲಿರುವ ಭಾವಿ ಪತಿಯನ್ನು ಕೊಲ್ಲಲು ಸಿಯಾ ಗೋಯಲ್ ತನ್ನ ಪ್ರಿಯಕರನೊಂದಿಗೆ ಸೇರಿ ಮಾಸ್ಟರ್ ಪ್ಲಾನ್ ಮಾಡಿದ್ದಳು. ಇದೀಗ ವೇಷ ಬದಲಾವಣೆ, ಗೂಗಲ್‌ನಲ್ಲಿ ಪೊಲೀಸ್ ಪ್ರಶ್ನೆಗಳಿಗಾಗಿ ಸರ್ಚ್ ಮತ್ತು ಸಾಕ್ಷ್ಯ ನಾಶದಂತಹ ಆಘಾತಕಾರಿ ವಿವರಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು. ಪುಣೆ ಮೂಲದ ಉದ್ಯಮಿ ಕೇತನ್ ಅಗರ್ವಾಲ್ ಅವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳ ಕ್ರೌರ್ಯ ಮತ್ತು ಚಾಣಾಕ್ಷತನದ ಒಂದೊಂದೇ ಪುರಾವೆಗಳು ಸಿಗುತ್ತಿವೆ. ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಈ ಕೃತ್ಯ ಎಸಗಿದ್ದಾರೆ ಎಂಬುದು ಈಗ ದೃಢಪಟ್ಟಿದೆ.

ಗುರುತು ಮರೆಮಾಚಲು ವೇಷ ಬದಲಾವಣೆ

ಪೊಲೀಸರ ಪ್ರಕಾರ, ಆರೋಪಿ ಚೇತನ್ ಚೌಧರಿ ಕೊಲೆ ಮಾಡುವ ಮೊದಲು ಮತ್ತು ನಂತರ ತನ್ನ ವೇಷವನ್ನು ಬದಲಿಸಿಕೊಂಡಿದ್ದ. ಕೊಲೆಯ ದಿನ ಚೇತನ್ ಹೂಡಿ (Hoodie) ಧರಿಸಿ ಮುಖ ಮುಚ್ಚಿಕೊಂಡು ಲೋಹಗಢ್ ಕೋಟೆಗೆ ಬಂದಿದ್ದ. ಕೇತನ್ ಅಗರ್ವಾಲ್ ಈ ಹಿಂದೆ ಸಿಯಾಳ ಸ್ನೇಹಿತನಾಗಿ ಚೇತನ್ ಜೊತೆ ಎರಡು ಬಾರಿ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದ. ಹಾಗಾಗಿ ಚೇತನ್ ತನ್ನ ಮುಖ ತೋರಿಸಿದ್ದರೆ ಕೇತನ್ ಗುರುತು ಹಿಡಿಯುತ್ತಿದ್ದ ಎಂಬ ಕಾರಣಕ್ಕೆ ಆತ ಮುಖ ಮುಚ್ಚಿಕೊಂಡಿದ್ದ. ಕೊಲೆ ಮಾಡುವ ಸ್ವಲ್ಪ ಹೊತ್ತು ಮುಂಚೆ ಹೂಡಿ ತೆಗೆದು ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದ ಎನ್ನಲಾಗಿದೆ.

ಕೊಲೆ ಮಾಡಿದ ನಂತರ ಟೀ ಕುಡಿದು ರಿಲ್ಯಾಕ್ಸ್!

ಕೇತನ್ ಅವರನ್ನು ಕೋಟೆಯ ಮೇಲಿಂದ ತಳ್ಳಿ ಹತ್ಯೆ ಮಾಡಿದ ನಂತರ, ಚೇತನ್ ಮತ್ತೆ ತನ್ನ ಹೂಡಿ ಧರಿಸಿ ಏನೂ ತಿಳಿಯದವನಂತೆ ಕೋಟೆಯಿಂದ ಕೆಳಗಿಳಿದಿದ್ದಾನೆ. ಕೆಳಗಿಳಿಯುವಾಗ ದಾರಿಯಲ್ಲಿ ಸಿಕ್ಕವರ ಜೊತೆ ಸಹಜವಾಗಿ ಮಾತನಾಡಿದ್ದಲ್ಲದೆ, ಒಂದು ಟೀ ಅಂಗಡಿಯಲ್ಲಿ ನಿಂತು ಟೀ ಕುಡಿದು ಮನೆಯತ್ತ ಸಾಗಿದ್ದಾನೆ. ಯಾವುದೇ ಅನುಮಾನ ಬರದಂತೆ ತಡೆಯಲು ಆತ ಈ ರೀತಿ ವರ್ತಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಗೂಗಲ್‌ನಲ್ಲಿ ಪೊಲೀಸ್ ಪ್ರಶ್ನೆಗಳಿಗಾಗಿ ಸರ್ಚ್

ಆರೋಪಿಗಳಾದ ಸಿಯಾ ಮತ್ತು ಚೇತನ್ ಕೊಲೆಗೂ ಮುನ್ನ ತೀವ್ರ ಸಿದ್ಧತೆ ನಡೆಸಿದ್ದರು. ಪೊಲೀಸರು ತಮ್ಮನ್ನು ವಿಚಾರಣೆಗೆ ಒಳಪಡಿಸಿದರೆ ಯಾವ ಪ್ರಶ್ನೆಗಳನ್ನು ಕೇಳಬಹುದು ಮತ್ತು ಈ ಅಪರಾಧಕ್ಕೆ ಸಿಗುವ ಶಿಕ್ಷೆ ಏನು ಎಂಬುದನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದರು. ಪೊಲೀಸರ ತನಿಖೆಯನ್ನು ದಾರಿ ತಪ್ಪಿಸಲು ಮೊದಲೇ ಉತ್ತರಗಳನ್ನು ಸಿದ್ಧಪಡಿಸಿ (Rehearsal) ಇಟ್ಟುಕೊಂಡಿದ್ದರು ಎಂಬುದು ಪತ್ತೆಯಾಗಿದೆ.

ವಾಟ್ಸಾಪ್ ಚಾಟ್ ಡಿಲೀಟ್ ಮತ್ತು ಸಾಕ್ಷ್ಯ ನಾಶ

ಕೊಲೆ ನಡೆದ ನಂತರ ಸಿಯಾ ಮತ್ತು ಚೇತನ್ ವಾಟ್ಸಾಪ್ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. ಆದರೆ ಪೊಲೀಸರ ಕೈಗೆ ಸಿಕ್ಕಿಬೀಳುವ ಭೀತಿಯಿಂದ ಜೂನ್ 18 ರ ನಂತರದ ಎಲ್ಲಾ ಚಾಟ್‌ಗಳನ್ನು ಡಿಲೀಟ್ ಮಾಡಿದ್ದರು. ಈಗ ಪೊಲೀಸರು ಫೋರೆನ್ಸಿಕ್ ತಂಡದ ಸಹಾಯದಿಂದ ಈ ಡಿಲೀಟ್ ಆದ ಸಂದೇಶಗಳನ್ನು ಮರುಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಕ್ರೈಮ್ ಸೀನ್ ರಿಕ್ರೀಯೇಷನ್

ಭಾನುವಾರ ಪುಣೆ ಪೊಲೀಸರು ಲೋಹಗಢ್ ಕೋಟೆಗೆ ಸಿಯಾಳನ್ನು ಕರೆದೊಯ್ದು ಕ್ರೈಮ್ ಸೀನ್ ರಿಕ್ರೀಯೇಷನ್ ನಡೆಸಿದರು. ಕೇತನ್ ಅಗರ್ವಾಲ್ ಅವರ ತೂಕಕ್ಕೆ ಸಮನಾದ ಡಮ್ಮಿ ಬಳಸಿ ಕೋಟೆಯಿಂದ ತಳ್ಳುವ ದೃಶ್ಯವನ್ನು ಮರುಸೃಷ್ಟಿಸಲಾಯಿತು. ಕುಟುಂಬದ ಒತ್ತಡದಿಂದ ಕೇತನ್ ಜೊತೆ ಮದುವೆಗೆ ಒಪ್ಪಿದ್ದ ಸಿಯಾ, ಈ ಮದುವೆ ತಪ್ಪಿಸಲು ಪ್ರಿಯಕರನೊಂದಿಗೆ ಸೇರಿ ಈ ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ.

Scroll to load tweet…