ತಿರುವನಂತಪುರಂ ಬಳಿ, ಆಹಾರ ಗಂಟಲಲ್ಲಿ ಸಿಲುಕಿ ಮಗು ಸತ್ತಿದೆ ಎಂದು ಬಿಂಬಿಸಲಾದ ಪ್ರಕರಣ ಭೀಕರ ಕೊಲೆಯೆಂದು ಬಯಲಾಗಿದೆ. ಮಲತಂದೆಯೇ ಹಲ್ಲೆ ನಡೆಸಿ ಕೊಂದಿದ್ದು, ತಾಯಿ ಮೂಕಪ್ರೇಕ್ಷಕಳಾಗಿದ್ದಳು. ಶವಪರೀಕ್ಷೆಯಲ್ಲಿ ಮಗುವಿನ ದೇಹದ ಮೇಲೆ 51 ಗಾಯಗಳಿರುವುದು ಪತ್ತೆಯಾಗಿದೆ.
ತಿರುವನಂತಪುರಂ (ಜೂ.2): ಆಹಾರ ಗಂಟಲಿನಲ್ಲಿ ಸಿಲುಕಿ ಮಗು ಮೃತಪಟ್ಟಿದೆ ಎಂಬ ಸಾಮಾನ್ಯ ಸಾವಿನ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ, ಮೂರು ತಿಂಗಳ ಹಿಂದೆಯೇ ಹೆಣೆದಿದ್ದ ಭೀಕರ ಕೊಲೆ ಸಂಚು ಹಾಗೂ ಮಗುವಿನ ಮೇಲಿನ ದೈಹಿಕ ದೌರ್ಜನ್ಯದ ಮಾಹಿತಿಗಳು ಲಭ್ಯವಾಗಿದೆ. ಕೇವಲ ಒಂದೂವರೆ ವರ್ಷದ ಹಸುಗೂಸು ಅರ್ಶಿದ್ನನ್ನು ಆತನ ಮಲತಂದೆ ಕ್ರೂರವಾಗಿ ಹೊಡೆದು ಕೊಂದಿದ್ದು, ಹೆತ್ತ ತಾಯಿ ಮೂಕಪ್ರೇಕ್ಷಕಳಾಗಿ ನಿಂತಿದ್ದಾಳೆ. ರಾಜಧಾನಿ ತಿರುವನಂತಪುರಂನಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿರುವ ನೆಡುಮಂಗಾಡ್ನ ಪನವೂರು ಎಂಬಲ್ಲಿ ಈ ಘೋರ ಘಟನೆ ನಡೆದಿದೆ.
ಮೇ 29 ರ ಸಂಜೆ, ಒಂದೂವರೆ ವರ್ಷದ ಮಗು ಅರ್ಶಿದ್ನನ್ನು ಮೊದಲು ಪನವೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಶ್ರೀ ಅವಿಟ್ಟಂ ತಿರುನಾಳ್ (SAT) ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿನ ವೈದ್ಯರು ಮಗು ಆಗಲೇ ಮೃತಪಟ್ಟಿದೆ ಎಂದು ಘೋಷಿಸಿದರು. ಈ ವೇಳೆ ಮಗುವಿನ ಮಲತಂದೆ ಅಶ್ಕರ್ ಆಸ್ಪತ್ರೆಯ ಸಿಬ್ಬಂದಿಗೆ ಹೇಳಿಕೆ ನೀಡಿ, 'ಮಗು ಊಟ ಮಾಡುವಾಗ ಗಂಟಲಿನಲ್ಲಿ ಅನ್ನ ಸಿಲುಕಿ ಪ್ರಜ್ಞೆ ತಪ್ಪಿ ಬಿದ್ದಿತು' ಎಂದು ಕಟ್ಟುಕಥೆ ಹೆಣೆದಿದ್ದ.
ಆದರೆ, ಮಗುವಿನ ಸಾವಿನ ಬಗ್ಗೆ ಆತನ ಹತ್ತಿರದ ಸಂಬಂಧಿಕರು ತೀವ್ರ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ನಂತರ ನಡೆಸಿದ ಶವಪರೀಕ್ಷೆ (Post-Mortem) ವರದಿಯು ವೈದ್ಯರನ್ನೇ ಬೆಚ್ಚಿಬೀಳಿಸಿದೆ. ಮಗುವಿನ ಸಾವು ನಿರಂತರವಾಗಿ ಮಾಡಿದ ಭೀಕರ ಹಲ್ಲೆಯಿಂದಾದ ಆಂತರಿಕ ರಕ್ತಸ್ರಾವದಿಂದ ಸಂಭವಿಸಿದೆ ಎಂದು ವರದಿ ಬಹಿರಂಗಪಡಿಸಿದೆ. ಮಗುವಿನ ಇಡೀ ದೇಹದ ತುಂಬಾ ಗಂಭೀರವಾದ ಗಾಯಗಳಾಗಿದ್ದವು. ತನಿಖಾಧಿಕಾರಿಗಳಿಗೆ ಮಗುವಿನ ಮೈಮೇಲೆ ಬರೋಬ್ಬರಿ 51 ಗಾಯದ ಗುರುತುಗಳು ಪತ್ತೆಯಾಗಿದ್ದು, ಅದರಲ್ಲಿ ಮಗುವಿನ ಗುಪ್ತಾಂಗಕ್ಕೆ ತೀವ್ರವಾದ ಗಾಯವಾಗಿತ್ತು ಹಾಗೂ ಕಾಲಿನ ಭಾಗಗಳಲ್ಲಿ ಸಿಗರೇಟಿನಿಂದ ಸುಟ್ಟ ಭೀಕರ ಬರೆಗಳಿದ್ದವು!
ಈ ಆಘಾತಕಾರಿ ಸತ್ಯ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ನೆಡುಮಂಗಾಡ್ ಪೊಲೀಸರು, ಮೇ 30ರ ರಾತ್ರಿ ಮಗುವಿನ ತಾಯಿ 21 ವರ್ಷದ ಅಖಿಲಾ ಮತ್ತು ಆಕೆಯ ಲಿವ್-ಇನ್ ಪಾಲುದಾರ (ಮಲತಂದೆ) ಅಶ್ಕರ್ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅವನು ನಮ್ಮಿಬ್ಬರ ಬದುಕಿಗೆ ಮುಳ್ಳಾಗಿದ್ದ ಎಂದು ಒಪ್ಪಿಕೊಂಡ ಪಾಪಿ
ಸೋಮವಾರ ಪೊಲೀಸರು ಆರೋಪಿ ಅಶ್ಕರ್ನನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು (Scene Reconstruction) ನಡೆಸಿದ್ದಾರೆ. ಈ ವೇಳೆ ಮಗುವಿಗೆ ಹೊಡೆಯಲು ಬಳಸಿದ್ದ ಕೋಲು ಮತ್ತು ಬರೆ ಎಳೆಯಲು ಬಳಸಿದ್ದ ಲೈಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡ ಅಶ್ಕರ್, "ನಾನು ಮೂರು ತಿಂಗಳ ಹಿಂದೆಯೇ ಅರ್ಶಿದ್ನನ್ನು ಕೊಲ್ಲಲು ನಿರ್ಧರಿಸಿದ್ದೆ ಮತ್ತು ಕಳೆದ ಒಂದು ತಿಂಗಳಿನಿಂದ ಆತನಿಗೆ ನಿರಂತರವಾಗಿ ದೈಹಿಕ ಹಿಂಸೆ ನೀಡುತ್ತಿದ್ದೆ. ನನ್ನ ಮತ್ತು ಅಖಿಲಾಳ ಜೀವನಕ್ಕೆ ಈ ಮಗು ದೊಡ್ಡ ಅಡ್ಡಿಯಾಗಿದ್ದ (Obstacle). ಅದಕ್ಕಾಗಿಯೇ ಅವನನ್ನು ಮುಗಿಸಲು ಪ್ಲಾನ್ ಮಾಡಿದ್ದೆ" ಎಂದು ಹೇಳಿದ್ದಾನೆ.
ಮೇ 29 ರಂದು ಮಗು ಜೋರಾಗಿ ಅತ್ತಾಗ, ಅಶ್ಕರ್ ಕೋಪಗೊಂಡು ಆತನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಮಗು ಸತ್ತಿರುವುದನ್ನು ಖಚಿತಪಡಿಸಿಕೊಂಡ ನಂತರ, ಇಡೀ ಮನೆಯನ್ನು ತೊಳೆದು ರಕ್ತದ ಕಲೆ ಹಾಗೂ ಸಾಕ್ಷ್ಯಗಳನ್ನು ನಾಶಪಡಿಸಿ, ಆ ನಂತರವೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಮಗು ಜೋರಾಗಿ ಕಿರುಚಾಡಬಾರದು ಎಂದು ಪ್ರತಿದಿನ ಆತನ ಬಾಯಿಗೆ ಬಟ್ಟೆ ತುರುಕುತ್ತಿದ್ದ ಕ್ರೂರಿ, ಹಲ್ಲೆ ನಡೆಸಿದ ವಸ್ತುಗಳನ್ನು ಕಾಲುವೆಗೆ ಎಸೆದು, ಉಳಿದಿದ್ದನ್ನು ಸುಟ್ಟುಹಾಕಿದ್ದಾಗಿ ಹೇಳಿದ್ದಾನೆ.
ಸೈಕಲ್ನಿಂದ ಬಿದ್ದನೆಂದು ಮಗುವಿನ ಎರಡು ಕೈಗಳನ್ನೇ ಮುರಿದಿದ್ದ ಮಲತಂದೆ!
ಕೊಲೆಯಾಗುವ ಸುಮಾರು ಒಂದು ತಿಂಗಳ ಮುಂಚೆಯೇ ಪುಟ್ಟ ಮಗುವಿನ ಎರಡು ಕೈಗಳು ಮುರಿದುಹೋಗಿದ್ದವು. ಈ ಬಗ್ಗೆ ನೆರೆಹೊರೆಯವರು ಪ್ರಶ್ನಿಸಿದಾಗ, "ಮಗು ಸೈಕಲ್ನಿಂದ ಕೆಳಗೆ ಬಿದ್ದಿದ್ದರಿಂದ ಕೈ ಮುರಿದಿದೆ" ಎಂದು ಅಶ್ಕರ್ ಸುಳ್ಳು ಹೇಳಿ ನಂಬಿಸಿದ್ದ. ತಾಯಿ ಅಖಿಲಾ ಕೂಡ ಕೈಗೆ ಪ್ಲಾಸ್ಟರ್ ಹಾಕಿಸಿಕೊಂಡಿದ್ದ ಮಗುವಿನ ಫೋಟೋವನ್ನು ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದಳು!
ಮಗು ಕೊಲೆಯಾಗುವ ಕೇವಲ ಎರಡು ವಾರಗಳ ಮುನ್ನ (ಮೇ 16ರಂದು) ಬಸ್ ನಿಲ್ದಾಣವೊಂದರಲ್ಲಿ ಇನ್ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಒಬ್ಬರು ಇವರನ್ನು ಭೇಟಿಯಾಗಿ, ತಮ್ಮ ಖಾತೆಯನ್ನು ಫಾಲೋ ಮಾಡಿದ್ದಕ್ಕಾಗಿ ಉಡುಗೊರೆಗಳನ್ನು ನೀಡಿದ್ದರು. ಆ ವಿಡಿಯೋದಲ್ಲೂ ಮಗುವಿನ ಎರಡೂ ಕೈಗಳಿಗೆ ಬಿಳಿ ಬಣ್ಣದ ಪ್ಲಾಸ್ಟರ್ ಹಾಕಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಆಗಲೂ ಆ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮಗುವಿಗೆ ಏನಾಗಿದೆ ಎಂದು ಕೇಳಿದಾಗ, ಹೆತ್ತ ತಾಯಿ "ಸೈಕಲ್ನಿಂದ ಬಿದ್ದಿದ್ದಾನೆ" ಎಂದೇ ಸುಳ್ಳು ಹೇಳಿದ್ದಳು. ಜೂನ್ 1 ರಂದು ಪೊಲೀಸರು ತನಿಖೆ ನಡೆಸುವಾಗ ಆ ಮುರಿದ ಕೈಗೆ ಹಾಕಿದ್ದ ಪ್ಲಾಸ್ಟರ್ ಕಟ್ ಅನ್ನು ಮನೆಯ ಆವರಣದಲ್ಲಿ ಪತ್ತೆಹಚ್ಚಿದ್ದಾರೆ.
ಮೂಕಪ್ರೇಕ್ಷಕಳಾಗಿದ್ದ ಪಾಪಿ ತಾಯಿ!
ಪೊಲೀಸರ ಮುಂದೆ ಹೇಳಿಕೆ ನೀಡಿರುವ ತಾಯಿ ಅಖಿಲಾ, ತನ್ನ ಪ್ರೇಮಿ ತನ್ನ ಮಗನಿಗೆ ಕೈಯಿಂದ ಮತ್ತು ಕೋಲುಗಳಿಂದ ಅತಿ ಕ್ರೂರವಾಗಿ ಹೊಡೆಯುತ್ತಿದ್ದ ಪ್ರತಿಯೊಂದು ದೃಶ್ಯವನ್ನೂ ತಾನು ಕಣ್ಣಾರೆ ಕಂಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ತನ್ನ ಮಗನನ್ನು ಉಳಿಸಲು ಅಥವಾ ಆತನ ಮೇಲಿನ ದೌರ್ಜನ್ಯವನ್ನು ತಡೆಯಲು ತಾನು ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಆಕೆ ಹೇಳಿರುವುದು ಹೆತ್ತ ಕರುಳಿನ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಾಗಿದೆ.


